ಬೆಡ್, ಆಕ್ಸಿಜನ್ ದೂರ; ಬೆಂಗಳೂರಿನಲ್ಲಿ 1 ಶವದ ಅಂತ್ಯಕ್ರಿಯೆಗೆ 12 ಗಂಟೆ ಬೇಕೇ!?
ಬೆಂಗಳೂರು, ಏಪ್ರಿಲ್ 30: ಕರ್ನಾಟಕದಲ್ಲಿ ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ರಾಜ್ಯದಲ್ಲಿ 56,000 ಕೊವಿಡ್-19 ರೋಗಿಗಳಿಗೆ ಆಮ್ಲಜನಕ ಸಹಿತ ಬೆಡ್ ಮತ್ತು 10,000ಕ್ಕೂ ಹೆಚ್ಚು ರೋಗಿಗಳಿಗೆ ತುರ್ತು ನಿಗಾ ಘಟಕದ ಹಾಸಿಗೆ ಅಗತ್ಯವಿದೆ ಎಂದು ತಿಳಿದು ಬಂದಿದೆ.
ಕೊರೊನಾವೈರಸ್ ಸೋಂಕು ತಗುಲಿದ ಎಲ್ಲರಿಗೂ ಏಕಕಾಲದಲ್ಲಿ ಈ ಹಾಸಿಗೆಗಳ ವ್ಯವಸ್ಥೆ ಕಲ್ಪಿಸುವುದು ಕಷ್ಟಸಾಧ್ಯವಾಗುತ್ತದೆ. ಕರ್ನಾಟಕ ಸರ್ಕಾರ ಮೊದಲ ಅಲೆಯ ಸಂದರ್ಭದಲ್ಲಿ ಎದುರಿಸಿದ ಸವಾಲು ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ನಿಭಾಯಿಸಿದ ರೀತಿಯು ಈ ಬಾರಿ ಸಹಾಯಕ್ಕೆ ಬಂದಿದೆ.
ಕರ್ನಾಟಕ: ಮೇ 1ರಿಂದ 18ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಣೆ ಇಲ್ಲ
ರಾಜ್ಯವನ್ನು ಎರಡನೇ ಅಲೆಯಿಂದ ರಕ್ಷಿಸುವ ಹಾಗೂ ವೈದ್ಯಕೀಯ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವ ಬಗ್ಗೆ ಸರ್ಕಾರಕ್ಕೆ ಒಂದು ಅಂದಾಜಿದೆ. ಯಾವ ಹಂತದಲ್ಲಿ ಯಾವ ರೋಗಿಗಳಿಗೆ ಯಾವ ರೀತಿ ವ್ಯದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದರ ಬಗ್ಗೆ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಸರ್ಕಾರವು ವರದಿಯಲ್ಲಿ ತಿಳಿಸಿದೆ. ಆದರೆ ರಾಜ್ಯ ರಾಜಧಾನಿಯಲ್ಲಿ ಕೊವಿಡ್-19 ರೋಗಿಗಳ ಚಿಕಿತ್ಸೆ ಒಂದು ಕಡೆಯಾದರೆ, ಮೃತರ ಅಂತ್ಯಕ್ರಿಯೆಗೂ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಈ ಕುರಿತು ತಿಳಿಯಲು ಮುಂದೆ ಓದಿ.
ಕೊರೊನಾ ಮೊದಲ ಅಲೆಯಲ್ಲಿ ಪಾಠ ಕಲಿತ ಸರ್ಕಾರ
ರಾಜ್ಯದಲ್ಲಿ 56,000 ಕೊಡಿವ್-19 ಸೋಂಕಿತರಿಗೆ ಆಮ್ಲಜನಕ ವ್ಯವಸ್ಥಿತ ಬೆಡ್ ಮತ್ತು 10,000ಕ್ಕೂ ಹೆಚ್ಚು ರೋಗಿಗಳಿಗೆ ಐಸಿಯು ಬೆಡ್ ಬೇಕಾಗಿದೆ. ಆದರೆ ಇಷ್ಟು ರೋಗಿಗಳಿಗೆ ಏಕಕಾಲದಲ್ಲಿ ಬೆಡ್ ಅವಶ್ಯತೆ ಇರುವುದಿಲ್ಲ. ಕಳೆದ ಬಾರಿ ಕೊವಿಡ್-19 ಪಿಡುಗಿನ ಸಂದರ್ಭದಲ್ಲಿ ಶೇ.17ರಷ್ಟು ಸೋಂಕಿತರಿಗೆ ಆಕ್ಸಿಜನ್ ಬೆಡ್ ಮತ್ತು ಶೇ.3ರಷ್ಟು ರೋಗಿಗಳಿಗೆ ಐಸಿಯು ಬೆಡ್ ಬೇಕಾಗಿರುತ್ತದೆ ಎಂದು ರಾಜ್ಯ ಸರ್ಕಾರ ವರದಿಯಲ್ಲಿ ಉಲ್ಲೇಖಿಸಿದೆ.
ಕರ್ನಾಟಕ ಸರ್ಕಾರದಿಂದ ಅಗತ್ಯ ಹಾಸಿಗೆ ವ್ಯವಸ್ಥೆ
ಕಳೆದ 2020ರ ಮಾರ್ಚ್ 11 ರಿಂದ 2021ರ ಏಪ್ರಿಲ್ 11ರವರೆಗೂ 22,000 ಆಮ್ಲಜನಕ ವ್ಯವಸ್ಥಿತ ಹಾಸಿಗೆ, 1500 ವೆಂಟಿಲೇಟರ್ ಸಹಿತ ಹಾಸಿಗೆ, 700 ತುರ್ತು ನಿಗಾ ಘಟಕದ ಹಾಸಿಗೆ ಹಾಗೂ 1248 ಹೈ ಫ್ಲೋ ನಸಲ್ ಕ್ಯಾನುಲ್ ಬೆಡ್ ಅನ್ನು ನವೀಕರಿಸಲಾಗಿದೆ. ಈ ಎಲ್ಲ ಹಾಸಿಗೆಗಳು ಆಮ್ಲಜನಕ ಅಗತ್ಯವಿರುವ ರೋಗಿಗಳ ಚಿಕಿತ್ಸೆಗೂ ಅನುಕೂಲಕರವಾಗಿವೆ ಎಂದು ಸರ್ಕಾರ ತಿಳಿಸಿದೆ.
ಒನ್ಇಂಡಿಯಾ ಫಲಶ್ರುತಿ: ಸುಧಾಕರ್ರಿಂದ ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್
ಕೊವಿಡ್ ರೋಗಿಗಳ ಚಿಕಿತ್ಸೆಗೆ ನಿತ್ಯ 1643 ಟನ್ ಆಕ್ಸಿಜನ್
ರಾಜ್ಯ ಔಷಧಿ ನಿಯಂತ್ರಣ ಪ್ರಾಧಿಕಾರ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 50,000 ಆಮ್ಲಜನಕ ಸಹಿತ ಹಾಸಿಗೆಗಳ ವ್ಯವಸ್ಥೆಯಿದೆ. ಪ್ರತಿನಿತ್ಯ ಕೊವಿಡ್-19 ರೋಗಿಗಳ ಚಿಕಿತ್ಸೆಗೆ 1,643 ಟನ್ ವೈದ್ಯಕೀಯ ಆಮ್ಲಜನಕವನ್ನು ಬಳಕೆ ಮಾಡಲಾಗುತ್ತಿದೆ. ಈ ಪೈಕಿ ಕೆಲವು ಹಾಸಿಗೆಗಳಲ್ಲಿ ರೋಗಿಗಳು ಒಂದು ನಿಮಿಷಕ್ಕೆ 10 ಲೀಟರ್ ಆಮ್ಲಜನಕ ಬಳಕೆ ಮಾಡಿಕೊಂಡರೆ, ಕೆಲವೊಬ್ಬರು 24 ಲೀಟರ್ ಮತ್ತು ಕೆಲವೊಬ್ಬರು 40 ಲೀಟರ್ ವರೆಗೂ ವೈದ್ಯಕೀಯ ಆಮ್ಲಜನಕ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.
ಇದರ ಹೊರತಾಗಿ ರಾಜ್ಯದಲ್ಲಿ ಶೇ.45ರಷ್ಟು ಆಮ್ಲಜನಕ ಕೊರತೆ ಎದುರಿಸಲಾಗುತ್ತಿದೆ. ಪ್ರತಿನಿತ್ಯ ಹೆಚ್ಚುವರಿ ಆಗಿ 1471 ಟನ್ ವೈದ್ಯಕೀಯ ಆಮ್ಲಜನಕ ಅಗತ್ಯವಿದೆ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ ಅಧ್ಯಕ್ಷ ಡಾ. ಹೆಚ್ ಎಂ ಪ್ರಸನ್ನ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ
ಕೊರೊನಾವೈರಸ್ ಮಹಾಮಾರಿಯು ರಾಜ್ಯದಲ್ಲಿ ಮರಣಮೃದಂಗ ಬಾರಿಸುತ್ತಿದೆ. ಕರ್ನಾಟಕದಲ್ಲಿ ಒಂದೇ ದಿನ 270 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಈವರೆಗೂ 15306 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಕರುಣಾಜನಕ ಸ್ಥಿತಿಯಲ್ಲಿದೆ. ಸಿಲಿಕಾನ್ ಸಿಟಿಯೊಂದರಲ್ಲಿ ಒಂದೇ ದಿನ 143 ಕೊರೊನಾವೈರಸ್ ಸೋಂಕಿತರು ಮೃತಪಟ್ಟಿದ್ದಾರೆ. ಕೊವಿಡ್ ಸೋಂಕಿನಿಂದ ಪ್ರಾಣ ಬಿಟ್ಟವರ ಅಂತ್ಯಸಂಸ್ಕಾರ ನಡೆಸುವುದು ಕೂಡಾ ರಾಜ್ಯ ರಾಜಧಾನಿಯಲ್ಲಿ ಕಷ್ಟಸಾಧ್ಯ ಎನ್ನುವಂತಾ ದುಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರಕ್ಕೂ ಉದ್ದದ ಸಾಲು
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಅಂತ್ಯಕ್ರಿಯೆ ನಡೆಸುವುದಕ್ಕೂ ಶವಾಗಾರಗಳ ಕೊರತೆ ಎದುರಾಗಿದೆ. ಪ್ರತಿನಿತ್ಯ ಸಾವಿನ ಮನೆ ಸೇರುತ್ತಿರುವ ಜನರ ಅಂತ್ಯಕ್ರಿಯೆಗೆ ಸ್ಮಶಾನ ಮತ್ತು ಚಿತಾಗಾರಗಳ ಎದುರಿನಲ್ಲಿ ಆಂಬುಲೆನ್ಸ್ ವಾಹನಗಳು 10 ರಿಂದ 12 ಗಂಟೆಗಳ ಕಾಲ ಸಾಲುಗಟ್ಟಿ ನಿಲ್ಲುವಂತಾಗಿದೆ.
Recommended Video
ಮೃತದೇಹಗಳನ್ನು ಕೆಳಗಿಳಿಸಿ ಹೊರಟ ಆಂಬುಲೆನ್ಸ್ ಚಾಲಕ
ಬೆಂಗಳೂರಿನ ಪನಥೂರ್ ಶವಾಗಾರದ ಎದುರಿನಲ್ಲಿ ಒಂದು ಮೃತದೇಹದ ಅಂತ್ಯಕ್ರಿಯೆಗೆ 10 ರಿಂದ 12 ಗಂಟೆ ಕಾದು ನಿಲ್ಲುವಂತಾ ಪರಿಸ್ಥಿತಿ ಸೃಷ್ಟಿಯಾಗಿದೆ. ಉದ್ದದ ಸಾಲನ್ನು ಕಂಡ ಆಂಬುಲೆನ್ಸ್ ಚಾಲಕರು ಕಾಯುವುದಕ್ಕೆ ಆಗದೇ ನೆಲದ ಮೇಲೆ ಮೃತದೇಹವನ್ನು ಇರಿಸಿ ಅಲ್ಲಿಂದ ಹೊರಟ ಹೋಗಿರುವ ಘಟನೆ ಏಪ್ರಿಲ್ 29ರಂದು ವರದಿಯಾಗಿದೆ. ಕೊವಿಡ್-19 ಸಂತ್ರಸ್ತರ ಅಂತ್ಯಸಂಸ್ಕಾರಕ್ಕೆ ನೆರವು ನೀಡುತ್ತಿರುವ ಮರ್ಸಿ ಆಂಜೆಲ್ ಸ್ವಯಂ-ಸೇವಕ ಜಮೀರ್ ಬೇಗ್ ಅವರು ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಶವಾಗಾರಕ್ಕೆ ಬಂದವರು ರಾತ್ರಿ 8.40ರವರೆಗೂ ಅದೇ ಚಿತಾಗಾರದ ಎದುರಿನಲ್ಲಿ ತಮ್ಮ ಸರದಿಗಾಗಿ ಕಾದು ನಿಂತಿದ್ದರು. ರಂಜಾನ್ ಉಪವಾಸ ಆಚರಿಸುತ್ತಿದ್ದ ಜಮೀರ್ ಬೇಗ್ ಅವರು ತಮ್ಮ ಸ್ನೇಹಿತರ ಸಹಾಯದಿಂದ ಕೊಂಚ ವಿರಾಮದ ಅವಧಿಯಲ್ಲಿ ತಮ್ಮ ಉಪವಾಸವನ್ನು ಮುರಿದಿದ್ದಾಗಿ ತಿಳಿಸಿದ್ದಾರೆ.