200 ಸೀಟಿಗೆ ಸ್ಪರ್ಧೆ ಮಾಡಿ ಸರ್ಕಾರದ ಕನಸು ಹೊತ್ತ ಕಾಂಗ್ರೆಸ್; ಬಿಜೆಪಿ ಗೆಲ್ಲುವ ಸ್ಥಾನಗಳ ಕುರಿತು ಪ್ರತಾಪಸಿಂಹ ನಾಯಕ್ ಮಾಹಿತಿ
ಬೆಂಗಳೂರು, ಏಪ್ರಿಲ್ 12: 200 ಸೀಟಿಗೆ ಸ್ಪರ್ಧೆ ಮಾಡಿ ಸರಕಾರ ಮಾಡುವ ಕನಸು ಹೊತ್ತ ಒಂದೆಡೆ ಕಾಂಗ್ರೆಸ್ ಇದೆ.10 ವರ್ಷಗಳಲ್ಲಿ ಮಾಡಿದ ಅತ್ಯುತ್ತಮ ಕೆಲಸಗಳ ಆಧಾರದಲ್ಲಿ ಜನರು ಎನ್ಡಿಎಯ 400ಕ್ಕೂ ಹೆಚ್ಚು ಲೋಕಸಭಾ ಸದಸ್ಯರನ್ನು ಗೆಲ್ಲಿಸುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ತಿಳಿಸಿದರು.
ಭಾರತ ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಅದಕ್ಕೆ ಅನುಗುಣವಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿದ್ದಾರೆ. 200 ಸೀಟಿಗೆ ಸ್ಪರ್ಧೆ ಮಾಡಿ ಸರಕಾರ ಮಾಡುವ ಕನಸು ಹೊತ್ತ ಒಂದೆಡೆ ಕಾಂಗ್ರೆಸ್ ಇದೆ. ಜನರ ಕಲ್ಪನೆ, ಆಕಾಂಕ್ಷೆಗೆ ಯಾವುದೇ ಇಂಬು ಕೊಡದ ಇಂಡಿ ಒಕ್ಕೂಟ ಸ್ಪರ್ಧೆಗೆ ಇಳಿದಿದೆ. ಇನ್ನೊಂದೆಡೆ 10 ವರ್ಷಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಮಾಡಿದ ಬಿಜೆಪಿ- ಎನ್ಡಿಎ ಒಕ್ಕೂಟವಿದೆ. ಬಿಜೆಪಿಯನ್ನು ಈ ಬಾರಿ ಜನರು ಅತಿ ಹೆಚ್ಚು ಸ್ಥಾನಗಳ ಜೊತೆ ಗೆಲ್ಲಿಸುವುದು ಖಚಿತ ಎಂದರು.

2014-24ರವರೆಗೆ ನರೇಂದ್ರ ಮೋದಿಜೀ ಅವರ ಸರಕಾರ ಬಂದ ಬಳಿಕ ಆದ ಬದಲಾವಣೆಯ ಮೂಲಕ ನಮ್ಮೆಲ್ಲ ಆಲೋಚನೆಗಳಿಗೆ ಅವರು ಮೂರ್ತರೂಪ ನೀಡಿದ್ದಾರೆ. ಬದಲಾದ ಭವ್ಯ ಭಾರತವನ್ನು ಕಾಣುವ ನಮ್ಮ ಕನಸು ನನಸಾಗಿದೆ. ಕಾಶ್ಮೀರದಲ್ಲಿನ 370 ನೇ ವಿಧಿ ರದ್ದಾಗಬೇಕು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು, ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಬರಬೇಕು, ದೇಶದ ಗಡಿಗಳು ಭದ್ರವಾಗಿರಬೇಕು, ಭ್ರμÁ್ಟಚಾರ ರಹಿತ ಆಡಳಿತ ದೇಶದಲ್ಲಿರಬೇಕು ಎಂಬುದು ನಮ್ಮ ಆಶಯವಾಗಿತ್ತು, ಅವೆಲ್ಲವೂ ಈಡೇರಿವೆ ಎಂದರು.
ಆರ್ಥಿಕವಾಗಿ ಸ್ವಾವಲಂಬಿ ದೇಶವಾಗಬೇಕು, ಮೂಲಭೂತ ಸೌಕರ್ಯಗಳು ಜನತೆಗೆ ವ್ಯವಸ್ಥಿತವಾಗಿ ತಲುಪಬೇಕು, ಪಂಡಿತ ದೀನದಯಾಳ ಉಪಾಧ್ಯಾಯ, ಶ್ಯಾಮಪ್ರಸಾದ್ ಮುಖರ್ಜಿ ಅವರ ಧ್ಯೇಯಗಳು ಸಾಕಾರಗೊಳ್ಳಲು ಇದಕ್ಕಾಗಿ ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದ ಸರಕಾರ ಬರಬೇಕು ಎಂಬ ಕನಸನ್ನು ಹಲವಾರು ದಶಕಗಳಿಂದ ನಾವೆಲ್ಲ ಕಂಡಿದ್ದೆವು ಎಂದರು.
ನಮ್ಮ ಕನಸು ನನಸಾಗಲಿದೆಯೇ ಎಂಬ ಸಂಶಯವೂ ಒಂದೆಡೆ ಕಾಡುತ್ತಿತ್ತು. 2014ರ ವೇಳೆಗೆ ರಾಜಕೀಯ ವ್ಯವಸ್ಥೆ ಮೇಲೆ ನಂಬಿಕೆ ಕುಸಿದು ಹೋಗಿತ್ತು. ಇದೀಗ ದೇಶದ ಆಡಳಿತ ಹೇಗಿರಬೇಕು ಎಂಬುದನ್ನು ವಿಶ್ವಕ್ಕೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಬಿಜೆಪಿ-ಎನ್ಡಿಎ ಸರಕಾರ ತೋರಿಸಿಕೊಟ್ಟಿದೆ. ಭಾರತದ ರೆಕ್ಕೆಗಳಿಗೆ ಬಲ ಬಂದಿದೆ. ದಶದಿಕ್ಕುಗಳಲ್ಲೂ, ಸರ್ವ ಕ್ಷೇತ್ರಗಳಲ್ಲೂ, ವಿಶ್ವವ್ಯಾಪಿಯಾಗಿ ಭಾರತ ಬೆಳೆಯುತ್ತಿದೆ.
ಬಹುಮತದ ಸ್ಥಿರ ಸರಕಾರ ದೇಶಕ್ಕೆ ಎಷ್ಟು ಅಗತ್ಯ ಎಂಬುದನ್ನು ಮೋದಿಜೀ ಅವರ ಸರಕಾರ ತೋರಿಸಿಕೊಟ್ಟಿದೆ. ದೃಢ ನಿರ್ಧಾರಗಳನ್ನು ಅದು ತೆಗೆದುಕೊಂಡಿದೆ. ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ ಎಂಬುದನ್ನು ತೋರಿಸಿಕೊಡಲಾಗಿದೆ. ಹಿಂದಿನ ಸರಕಾರಗಳ ಆಡಳಿತ ವೈಫಲ್ಯದಿಂದಾಗ ಅದು ಭಯೋತ್ಪಾದಕರ ನೆಲೆವೀಡಾಗಿತ್ತು. 370ನೇ ವಿಧಿಯನ್ನು ಮತ್ತು 35 ಎ ಯನ್ನು ರದ್ದು ಮಾಡಿದ ನಂತರ ಕಾಶ್ಮೀರ ಸ್ವಚ್ಛಂದವಾಗಿ ಉಸಿರಾಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಸ್ತೆಗಳಲ್ಲಿ ಕಲ್ಲೆಸೆತ, ಭಯೋತ್ಪಾದನೆಯ ತಾಣವಾಗಿದ್ದು ಕಾಶ್ಮೀರದ ವಾತಾವರಣ ಬದಲಾಗಿದೆ. ಈ ಕಾಯ್ದೆ ಹಿಂಪಡೆದ ನಂತರ ರೂ. 80 ಸಾವಿರ ಕೋಟಿ ಮೊತ್ತದ 15 ಸಚಿವಾಲಯಗಳಿಗೆ ಸಂಬಂಧಿಸಿದ 63 ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಿ 2024ರ ಫೆಬ್ರುವರಿಯ ಹೊತ್ತಿಗೆ ದಾಖಲೆಯ 2 ಕೋಟಿಯಷ್ಟು ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದಾರೆ. ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ನಿಂದ ಪಾಕಿಸ್ತಾನ ತತ್ತರಿಸಿದೆ. ನರೇಂದ್ರ ಮೋದಿಯಂತಹ ದೂರದೃಷ್ಟಿಯುಳ್ಳ ಪ್ರಧಾನಿಯಿಂದ ಮಾತ್ರ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. ಅಲ್ಲಿ ಮನೆಮನೆಯಲ್ಲೂ ರಾಷ್ಟ್ರಧ್ವಜ ಹಾರಾಡುವಂತಾಗಿದೆ ಎಂದರು.
ರಾಮಮಂದಿರ ಒಂದು ರಾಷ್ಟ್ರ ಮಂದಿರ. ರಾಮನ ಅಸ್ತಿತ್ವದ ಕುರಿತೂ ನಂಬಿಕೆಯಿಲ್ಲದವರ ಬಾಯಲ್ಲೂ ರಾಮನ ಜಪ ಮಾಡುವಂತೆ ನರೇಂದ್ರ ಮೋದಿಯವರು ಮಾಡಿದ್ದಾರೆ. 500 ವರ್ಷಗಳ ಹೋರಾಟದ ಪರಿಣಾಮವಾಗಿ ಟೆಂಟ್ ನಲ್ಲಿದ್ದ ರಾಮಲಲಾ ಭವ್ಯ-ದಿವ್ಯ ಮಂದಿರದಲ್ಲಿ ವಿರಾಜಮಾನನಾದ. ಭವ್ಯ ರಾಮಮಂದಿರದಲ್ಲಿ ರಾಮನವಮಿ ನಡೆಯಲಿದೆ ಎಂದು ಸಂತಸ ಸೂಚಿಸಿದರು. ಪ್ರಧಾನಿಯವರು ದೇಗುಲವನ್ನು ರಾಷ್ಟ್ರಕ್ಕೆ ಸಮರ್ಪಿಸಿ ದೇಶದ ಜನರ ಪ್ರೀತಿಗೆ ಪಾತ್ರರಾದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications