ಕ್ಷೇಮವನ ಜೀವನದ ಸೂತ್ರವಾಗಲಿ: ಸಿಎಂ ಬೊಮ್ಮಾಯಿ
ಬೆಂಗಳೂರು, ಸೆ.01: ವನ ಎಂದರೆ ಹಸಿರು, ಸಮೃದ್ಧಿ ಹಾಗೂ ಆಮ್ಲಜನಕ. ಆಮ್ಲಜನಕ ಜೀವನದ ಸೂತ್ರವಾಗಿದೆ. ಈ ಕ್ಷೇಮವನವು ಜೀವನದ ಸೂತ್ರವಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ವತಿಯಿಂದ ನೂತನವಾಗಿ ಬೆಂಗಳೂರಿನಲ್ಲಿ ನಿರ್ಮಿಸಿರುವ 'ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನ'ವನ್ನು ಗುರುವಾರ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕ್ಷೇಮವನ ಎಂಬ ಹೆಸರಿನಲ್ಲಿಯೇ ನೆಮ್ಮದಿ ಇದೆ. ಮೊದಲು ಪತ್ರ ಬರೆಯುವಾಗ ಕ್ಷೇಮ ಎಂದು ಬರೆದೇ ಪ್ರಾರಂಭ ಮಾಡುತ್ತಿದ್ದೆವು. ಆರೋಗ್ಯ ಎನ್ನುವುದು ಮನಸ್ಥಿತಿಯಿಂದ ಪ್ರಾರಂಭವಾಗುತ್ತದೆ ಎಂದರು.
ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ನಿರೀಕ್ಷೆ!
ಆರೋಗ್ಯ ಎಂಬುದು ಅತ್ಯಂತ ಪ್ರಮುಖ ಸಂಗತಿ ಎನ್ನುವುದನ್ನು ನಮ್ಮ ಪೂರ್ವಜರು ಅರಿತಿದ್ದರು. ನಾವು ಈಗ ಇದನ್ನು ತಿರುವು ಮುರುವು ಮಾಡಿದ್ದೇವೆ. ಬೇಡವಾದುದ್ದನ್ನು ದೇಹಕ್ಕೆ ಸೇರಿಸಿಕೊಂಡು ಕಷ್ಟಪಡುತ್ತಿದ್ದೇವೆ. ದೇಹದೊಳಗಿನ ವಿಷಕಾರಿ ಅಂಶಗಳನ್ನು ಹೊರತೆಗೆದು ದೇಹ ಮತ್ತು ಮನಸ್ಸುಗಳಿಗೆ ಆರೋಗ್ಯ ನೀಡುವ ಕೆಲಸವನ್ನು ಕ್ಷೇಮವನ ಮಾಡಲಿದೆ. ಕ್ಷೇಮವನ ಎನ್ನುವುದು ಅದ್ಭುತ ಕಲ್ಪನೆ. ಬಾಹ್ಯದಿಂದ ಚಿಕಿತ್ಸೆ, ಔಷಧ ನೀಡದೇ ಸಹಜ ರೀತಿಯಲ್ಲಿ ಚಿಕಿತ್ಸೆ ನೀಡಿ ವಾಸಿ ಮಾಡುವ ಕ್ಷೇತ್ರವಿದು. ಚಿಕಿತ್ಸೆಯಲ್ಲಿ ಧರ್ಮವನ್ನು ಸೇರಿಸುವ ಕ್ಷೇತ್ರ ಕ್ಷೇಮವನ ಎಂದು ಬೊಮ್ಮಾಯಿ ತಿಳಿಸಿದರು.
ಅಶಿಸ್ತಿನಿಂದ ದೇಹ-ಮನಸ್ಸು ಶಿಥಿಲಗೊಳ್ಳತ್ತದೆ
ಆರೋಗ್ಯ ಎಂದರೆ ಮನಸ್ಸು ಮತ್ತು ದೇಹಗಳು ಉತ್ತಮ ಸ್ಥಿತಿಯಲ್ಲಿರುವುದೇ ಆಗಿದೆ. ಸಂಯಮದ ಮನಸ್ಥಿತಿ ಅಗತ್ಯ. ಮನಸ್ಸು ಹತೋಟಿಯಲ್ಲಿದ್ದರೆ ಸ್ಥಿತಪ್ರಜ್ಞತೆಗೆ ದಾರಿ ಮಾಡಿಕೊಡುತ್ತದೆ. ವಾಸ್ತವ ಅಲ್ಲದ್ದನ್ನು ದೇಹ ಮತ್ತು ಮನಸ್ಸಿನೊಳಗೆ ಬಿಟ್ಟುಕೊಳ್ಳದಿರುವುದೇ ಸ್ಥಿತಪ್ರಜ್ಞತೆ. ಸ್ಥಿತಪ್ರಜ್ಞತೆಯ ಸ್ಥಿತಿಗೆ ಕ್ಷೇಮವನ ಕೊಂಡೊಯ್ಯುತ್ತದೆ ಎಂದು ತಿಳಿಸಿದರಲ್ಲದೇ ಮಾನವನ ಪ್ರತಿ ಅಂಗಾಂಗ ಕ್ಷೇಮವಾಗಿರಬೇಕು. ದಿನಚರಿ ಅಶಿಸ್ತಿನಿಂದ ಕೂಡಿದ್ದರೆ ದೇಹ ಮತ್ತು ಮನಸ್ಸು ಶಿಥಿಲಗೊಳ್ಳತ್ತದೆ. ಕ್ಷೇಮವನ ದೇಹ ಮತ್ತು ಮನಸ್ಸುಗಳನ್ನು ಸಮತೋಲನ ಕಾಯುತ್ತದೆ ಎಂದರು.
ತತ್ವಜ್ಞಾನ-ಆಡಳಿತ ಒಂದೇ ನಾಣ್ಯದ ಮುಖಗಳು
ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ನುಡಿದಂತೆ ನಡೆಯುತ್ತಾರೆ. ಗುರುಗಳು ಆದವರು ಕೂಡ ದಕ್ಷ ಆಡಳಿತಗಾರರು ಆಗಬಹುದೆಂದು ಅವರು ನಿರೂಪಿಸಿದ್ದಾರೆ. ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ತೋರಿಸಿಕೊಟ್ಟಿದ್ದರೆ ಹಾಗೂ ಆಧ್ಯಾತ್ಮ ಮತ್ತು ಆಡಳಿತವೂ ಒಂದೇ ನಾಣ್ಯದ ಎರಡು ಮುಖಗಳೆಂದು ನಿರೂಪಿಸಿದ್ದಾರೆ. ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಅವರ ಆಡಳಿತದ ಪ್ರಮುಖ ಅಂಶ. ಹಲವಾರು ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಪ್ರಜಾಸತ್ತಾತ್ಮಕ, ಬಹು ಸಂಸ್ಕೃತಿಯ ಭಾರತದಲ್ಲಿ ಹೊಸ ಅಧ್ಯಾಯವನ್ನು ಅವರು ಬರೆದಿದ್ದಾರೆ ಎಂದರು.
ಸಮಾಜದಲ್ಲಿ ಗುರುಗಳಿಗೆ ಉತ್ತಮ ಸ್ಥಾನವಿದೆ
ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಆಗಮಿಸಿರುವುದು ನಮಗೆ ಸಂಭ್ರಮ ಮತ್ತು ಹೆಮ್ಮೆ ಎನಿಸಿದೆ. ಉತ್ತರದಿಂದ ದಕ್ಷಿಣದವರೆಗೂ ಅವರು ಮನೆ ಮಾತಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಗುರುಗಳಾಗಿದ್ದವರು. ನಮ್ಮ ಧರ್ಮ ಮತ್ತು ಸಮಾಜದಲ್ಲಿ ಗುರುಗಳಿಗೆ ಅತ್ಯುತ್ತಮ ಸ್ಥಾನವಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಆದರ್ಶಪ್ರಾಯ, ಮಾದರಿಯಾಗಿ, ಸಾರ್ವಜನಿಕ ಜೀವನವನ್ನು ಅತಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಯೋಗಿ ಕಾರ್ಯವನ್ನು ಶ್ಲಾಘಿಸಿದರು.
ಕ್ಷೇಮನವದ ಮೂಲಕ ಬೆಂಗಳೂರು ವಿಶ್ವಮಟ್ಟಕ್ಕೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆಯವರು ಪರಿವರ್ತರಕರು. ಸಮಾಜದಲ್ಲಿರುವ ಕಂದಾಚಾರವನ್ನು ದೂರ ಮಾಡಿ, ಸಕಾರಾತ್ಮಕವಾಗಿ ಬದುಕಿಗೆ ಹೊಸ ಆಯಾಮ ನೀಡಿದ್ದಾರೆ. ಗ್ರಾಮೀಣಾಭಿವೃಧ್ಧಿ, ಎಲ್ಲರಿಗೂ ಶುದ್ಧ ಕುಡಿಯುವ ನೀರು ದೊರೆಯಬೇಕೆಂಬ ಪರಿಕಲ್ಪನೆಯಡಿ ಇಡೀ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಧರ್ಮ, ಸಾಮಾಜಿಕ ಹೊಣೆಗಾರಿಕೆಯ್ನ ಕೈಗೆತ್ತಿಕೊಂಡಾಗ ಜನರು ಪಾಲ್ಗೊಳ್ಳುತ್ತಾರೆ. ಜನರನ್ನು ಫಲಾನುಭವಿಗಳನ್ನಾಗಿಸದೇ, ಪಾಲುದಾರರನ್ನಾಗಿ ಮಾಡಿದ್ದಾರೆ. ಕೆರೆ, ಕಟ್ಟೆ, ಸ್ಮಶಾನ ಕಟ್ಟಿದ್ದಾರೆ. ಸ್ತ್ರೀಶಕ್ತಿಸಂಘಗಳಿಗೆ ಆರ್ಥಿಕ ಸಹಾಯ, ಸ್ವಾಭಿಮಾನದ ಬದುಕು ಕೊಟ್ಟಿದ್ದಾರೆ. ಧಾರವಾಡ ಮೆಡಿಕಲ್ ಕಾಲೇಜು, ಉಜಿರೆಯಲ್ಲಿ ಆಯುರ್ವೇದ ಕಾಲೇಜುಗಳನ್ನು ಕಟ್ಟಿದ್ದಾರೆ. ಕ್ಷೇಮನವದ ಮೂಲಕ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.