ಜೆಡಿಎಸ್ ಜೊತೆ ಮೈತ್ರಿ ಮಾತುಕತೆಗೆ ಬಂದಿದ್ದ ರಾಷ್ಟ್ರೀಯ ಪಕ್ಷಗಳ ದೂತರು: ಸ್ಪೋಟಕ ಗುಟ್ಟನ್ನು ಬಹಿರಂಗಪಡಿಸಿದ ದೇವೇಗೌಡ
ಬೆಂಗಳೂರು, ಏಪ್ರಿಲ್ 30: ಜೆಡಿಎಸ್ ಜೊತೆ ಮೈತ್ರಿ ಮಾತುಕತೆಗೆ ರಾಷ್ಟ್ರೀಯ ಪಕ್ಷಗಳ ದೂತರು ಬಂದಿದ್ದು ನಿಜವೆಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಹೇಳಿದ್ದಾರೆ. ಈ ಕುರಿತ ವಿಚಾರವನ್ನು 'ಪ್ರಜಾವಾಣಿ' ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
ಪ್ರಜಾವಾಣಿ ಸಂದರ್ಶನದಲ್ಲಿ ಮಾತನಾಡಿರುವ ದೇವೇಗೌಡ ಅವರು, 'ರಾಷ್ಟ್ರೀಯ ಪಕ್ಷಗಳ ದೂತರು ಮೈತ್ರಿ ಮಾತುಕತೆ ಮಾಡಲು ಬಂದಿದ್ದಾರೆಂದು ಕುಮಾರಸ್ವಾಮಿ ಹೇಳಿರುವುದು ನಿಜ. ಅವರು ಮೊದಲ ನನ್ನ ಬಳಿ ಬಂದಿದ್ದರು. ವಯಸ್ಸಿನ ಕಾರಣ ನೀಡಿ, ಇದೆಲ್ಲವನ್ನು ಕುಮಾರಸ್ವಾಮಿಗೆ ವಹಿಸಿದ್ದೇನೆ. ನೀವು ಅವರ ಬಳಿ ಮಾತನಾಡಿ ಎಂದು ಹೇಳಿ ಕಳುಹಿಸಿದೆ' ಎಂಬುದಾಗಿ ಹೇಳಿದ್ದಾರೆ.

'ಇನ್ನು ಪ್ರಾದೇಶಿಕ ಪಕ್ಷಗಳ ನಾಯಕರಾದ ಮಮತಾ ಬ್ಯಾನರ್ಜಿ ಹಾಗೂ ಕೆ ಚಂದ್ರಶೇಖರ್ ರಾವ್ ಅವರು ಇಲ್ಲಿನ ರಾಜಕೀಯದ ವಿಚಾರವಾಗಿ ನನ್ನ ಸಂಪರ್ಕದಲ್ಲಿದ್ದಾರೆ' ಎಂಬುದರ ಕುರಿತಾಗಿಯೂ ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಸ್ಪಷ್ಟ ಬಹುಮತ ಪಡೆಯುವುದರಿಂದ ಮೈತ್ರಿ ಪರಿಸ್ಥಿತಿ ಏರ್ಪಡುವುದಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸುವ ಭಾರತದ ಏಕೈಕ ರಾಜಕಾರಣಿ ಕುಮಾರಸ್ವಾಮಿ ಎಂದು ಸಮರ್ಥಿಸಿಕೊಂಡರು.
ಹಾಸನ ಟಿಕೆಟ್ ವಿಚಾರವಾಗಿ ಮಾತನಾಡಿರುವ ದೇವೇಗೌಡರು, ' ನಮ್ಮ ಕುಟುಂಬಸ್ಥರ ನಡುವೆ ಯಾವುದೇ ವ್ಯತ್ಯಾಸಗಳಿರಲಿಲ್ಲ. ಇದನ್ನು ಮಾಧ್ಯಮಗಳು ಸೃಷ್ಟಿಸಿವೆ. ನನ್ನ ಸೊಸೆ ಭವಾನಿ ರೇವಣ್ಣ ಹಾಗೂ ಇಡೀ ರೇವಣ್ಣ ಕುಟುಂಬ ನಮ್ಮ ಅಭ್ಯರ್ಥಿ ಸ್ವರೂಪ್ ಗೆಲುವಿಗೆ ಶ್ರಮಿಸುತ್ತಿದೆ. ಹಾಸನ ಮಾತ್ರವಲ್ಲ, ಹಾಸನ ಜಿಲ್ಲೆಯ ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲಲು ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ' ಎಂದೂ ಗೌಡರು ಹೇಳಿದ್ದಾರೆ.

'ನಿಖಿಲ್ ಕುಮಾರಸ್ವಾಮಿ ಗೆಲ್ಲುವುದು ಖಚಿತ. ನಾನು ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ. ರಾಮನಗರದ ಜನತೆ ಇಂದಿಗೂ ನಾನು ಜಿಲ್ಲೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ್ದು, ಜೆಡಿಎಸ್ನ್ನು ಕೈ ಬಿಡುವುದಿಲ್ಲ' ಎಂದು ಎಚ್ಡಿಡಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ತಮ್ಮ ನಡುವಿನ ಬಾಂಧವ್ಯದ ಕುರಿತು ಮಾತನಾಡಿರುವ ಅವರು, 'ಗೋಧ್ರಾ ವಿಚಾರದಲ್ಲಿ ಮಾತ್ರ ನಾನು ಪ್ರಧಾನಿಯವರ ವಿರುದ್ಧ ಸದನದಲ್ಲಿ ದಾಳಿ ಮಾಡಿದ್ದೇನೆ. ಅದು ಬಿಟ್ಟರೆ ಪ್ರಧಾನಿ ಮತ್ತು ನನ್ನ ನಡುವೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ' ಎಂದು ದೇವೇಗೌಡ ಹೇಳಿದ್ದಾರೆ.
'ಇತ್ತೀಚೆಗೆ, ಹಾಸನಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಮಂಜೂರು ಮಾಡುವಂತೆ ನಾನು ಅವರಿಗೆ ಪತ್ರ ಬರೆದಿದ್ದೇನೆ. ಅವರು ಉತ್ತರದ ಬದಲಿಗೆ ಸ್ವೀಕೃತಿಯ ಸಂದೇಶ ರವಾನಿಸಿದರು. ಅದು ನನಗೆ ನೋವುಂಟುಮಾಡಿತು' ಎಂದು ತಿಳಿಸಿದ್ದಾರೆ.
ಮುಸ್ಲಿಮರ ಮೀಸಲಾತಿ ಬಗ್ಗೆ ಮಾತನಾಡಿದ ಅವರು, ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಮತ್ತೆ ಹೇಳುತ್ತೇನೆ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಒಂದು ದಿನದ ನಂತರ ನಾವು ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದರು.
ನಾನೇ ಖುದ್ದಾಗಿ ಮಂಡ್ಯಕ್ಕೆ ಭೇಟಿ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜೆಡಿಎಸ್ ಬಂಡಾಯ ವಿಜಯಾನಂದ್ ಅವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ. ಅವರ ರಾಜಕೀಯ ಜೀವನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅವರ ತಾತ ಕೆ ವಿ ಶಂಕರೇಗೌಡ ಅವರು ಸಂಸದರಾಗುವಲ್ಲಿ ನಾನೂ ಪ್ರಮುಖ ಪಾತ್ರ ವಹಿಸಿದ್ದೆ ಎಂದೂ ದೇವೇಗೌಡ ಪ್ರತಿಪಾದಿಸಿದ್ದಾರೆ.












Click it and Unblock the Notifications