ಯಡಿಯೂರಪ್ಪ ಸೇರಿ ದಕ್ಷಿಣದ ಸಿಎಂಗಳ ಜೊತೆ ಮೋದಿ ಸಭೆ
ಬೆಂಗಳೂರು, ಜುಲೈ 13; ಭಾರತದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಜುಲೈ 16ರಂದು ಸಭೆ ನಡೆಸಲಿದ್ದಾರೆ.
ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ, ಅನ್ಲಾಕ್ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ಮೋದಿ ಮುಖ್ಯಮಂತ್ರಿಗಳ ಜೊತೆ ಸರಣಿ ಸಭೆಗಳನ್ನುನಡೆಸುತ್ತಿದ್ದಾರೆ.
ಮಂಗಳವಾರ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆಯನ್ನುನಡೆಸಿದ್ದು, ಹಲವಾರು ಸಲಹೆಗಳನ್ನು ನೀಡಿದ್ದಾರೆ. ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಜುಲೈ 16ರ ಶುಕ್ರವಾರ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆಯನ್ನು ನಡೆಸಲಿದ್ದು, ಕೋವಿಡ್ ಪರಿಸ್ಥಿತಿ ಮಾಹಿತಿ ಪಡೆಯಲಿದ್ದಾರೆ.
ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಇನ್ನೂ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದ ರಾಜ್ಯಗಳು ಈಗ ಅನ್ಲಾಕ್ಗೊಂಡಿವೆ.
ಸೋಮವಾರದ ವರದಿಯಂತೆ ಕರ್ನಾಟಕದಲ್ಲಿ 1386 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 61 ಜನರು ಮೃತಪಟ್ಟಿದ್ದು, 3204 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು ಸಂಖ್ಯೆ 34,858.
ಮಹಾರಾಷ್ಟ್ರದಲ್ಲಿ 7,603 ಹೊಸ ಪ್ರಕರಣ ದಾಖಲಾಗಿದೆ. 15,277 ಜನರು ಗುಣಮುಖರಾಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳು 1,08,343.
ಕೇರಳ ರಾಜ್ಯದಲ್ಲಿ ಸೋಮವಾರ 7798 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 11,447 ಜನರು ಗುಣಮುಖಗೊಂಡಿದ್ದಾರೆ. 100 ಜನರು ಮೃತಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,11,093 ಆಗಿದೆ.
ಅನ್ಲಾಕ್ ಘೋಷಣೆ ಬಳಿಕ ಪ್ರವಾಸಿ ಸ್ಥಳಗಳಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಕುರಿತು ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications