ಮೋದಿ ಭಾಷಣ ಒಂದು ಸರ್ಕಸ್ ಸವಾರಿ, ದೇವೇಗೌಡ
ಹಾಸನ, ನ 8: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಷಣಕ್ಕೆ ಲಕ್ಷಾಂತರ ಜನ ಬರಬಹುದು. ಮಾಧ್ಯಮಗಳು ನೇರ ಪ್ರಸಾರ ಮಾಡಬಹುದು. ಸಭೆಗೆ ಬಂದವರು ವೋಟ್ ಹಾಕುತ್ತಾರೆ ಎನ್ನುವುದು ಏನು ಗ್ಯಾರಂಟಿ? ಮೋದಿ ಕಾರ್ಯಕ್ರಮ ಒಂದು ಸರ್ಕಸ್ ಇದ್ದ ಹಾಗೆ ಎಂದು ಮಾಜಿ ಪ್ರಧಾನಿ ದೇವೇಗೌಡ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಗುರುವಾರ (ನ 7) ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ದೇವೇಗೌಡ, ನರೇಂದ್ರ ಮೋದಿ ಭಾಷಣಕ್ಕೆ ಸಾರ್ವಜನಿಕರು ಹತ್ತು ರೂಪಾಯಿ ನೀಡಿ ಬರಬೇಕಂತೆ. ಹಾಗಾಗಿ ಅವರ ಸಭೆಯೆಂದರೆ 'ಸರ್ಕಸ್ ಸವಾರಿ' ಎಂದು ಹೇಳಿದ್ದಾರೆ.
ಪಾಟ್ನಾದಲ್ಲಿ ನಡೆದ ಮೋದಿ ಸಭೆಗೆ ಸುಮಾರು ಹನ್ನೆರಡು ಕೋಟಿ ರೂಪಾಯಿ ಖರ್ಚಾಗಿತ್ತು. ಬಿಜೆಪಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಕಾಂಗ್ರೆಸ್ ಪ್ರಶ್ನಿಸಲಾರಂಭಿಸಿದ ಕೂಡಲೇ ಬಿಜೆಪಿ ಸಭೆಗೆ ಹತ್ತು ರೂಪಾಯಿ ಸಂಗ್ರಹದ ನಾಟಕ ಆಡಲಾರಂಭಿಸಿದೆ ಎಂದು ಗೌಡ್ರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನರೇಂದ್ರ ಮೋದಿ ಪರ್ಯಾಯ ಎಂದು ಬಿಂಬಿಸುತ್ತಿರುವುದು ಕಾರ್ಪೋರೇಟ್ ಕಂಪೆನಿಗಳು, ಜನರಲ್ಲ. ಬಿಜೆಪಿಯವರು ಈಗಾಗಲೇ ನರೇಂದ್ರ ಮೋದಿ ದೇಶದ ಪ್ರಧಾನಿ ಎನ್ನುವ ಭ್ರಮೆಯಲ್ಲಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎರಡೂ ರಾಷ್ಟೀಯ ಪಕ್ಷಗಳ ಬಣ್ಣ ಬಯಲಾಗಲಿದೆ. ಪ್ರಾದೇಶಿಕ ಪಕ್ಷಗಳ ಶಕ್ತಿ ಏನಂದು ತಿಳಿಯಲಿದೆ ಎಂದು ದೇವೇಗೌಡ ಕಾಂಗ್ರೆಸ್ ಮತ್ತು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಲೋಕಸಭೆ ಫಲಿತಾಂಶ: ಭವಿಷ್ಯ ನುಡಿದ ದೇವೇಗೌಡ, ಮೋದಿಗೇಕೆ ಪ್ರಧಾನಿ ಭದ್ರತೆ.. ಮುಂದೆ ಓದಿ..

ಲೋಕಸಭಾ ಚುನಾವಣೆ
ಮುಂಬರುವ ಲೋಕಸಭಾ ಚುನಾವಣೆ ಪ್ರಾದೇಶಿಕ ಪಕ್ಷಗಳಿಗೆ ನಿರ್ಣಾಯಕವಾಗಲಿದೆ. ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸ ಬೇಕಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿವೆ.

ತೃತೀಯ ರಂಗ
ಇತ್ತೀಚಿನ ಚುನಾವಣಾಪೂರ್ವ ಸಮೀಕ್ಷೆ ಆಧರಿಸಿ ಈ ಮಾತನ್ನು ಹೇಳುತ್ತಿಲ್ಲ. ಬರುವ ಲೋಕಸಭೆ ಚುನಾವಣಾ ಫಲಿತಾಂಶ ದೇಶದ ಭವಿಷ್ಯಕ್ಕೆ ಹೊಸ ದಿಕ್ಸೂಚಿಯಾಗಲಿದೆ. ಎರಡು ರಾಷ್ಟೀಯ ಪಕ್ಷಗಳ ಹೊರತಾದ ಸರಕಾರ ರಚನೆಯಾಗುವುದು ಖಚಿತ.

ಚುನಾವಣಾಪೂರ್ವ ಸಮೀಕ್ಷೆ
ಚುನಾವಣಾಪೂರ್ವ ಸಮೀಕ್ಷೆಗೆ ನಿರ್ಬಂಧ ಹೇರಬೇಕೆನ್ನುವ ಕಾಂಗ್ರೆಸ್ ಪಕ್ಷದ ಬೇಡಿಕೆಗೆ ಚುನಾವಣಾ ಆಯೋಗ ಸೊಪ್ಪು ಹಾಕಬೇಕಾಗಿಲ್ಲ. ಐದು ರಾಜ್ಯಗಳ ಚುನಾವಣೆಯಲ್ಲಿ ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಈ ಬೇಡಿಕೆ ಇಟ್ಟಿದೆ.

ಮೋದಿಗೇಕೆ ಪ್ರಧಾನಿ ಮಾದರಿ ಭದ್ರತೆ
ನರೇಂದ್ರ ಮೋದಿಗೆ ಪ್ರಧಾನಮಂತ್ರಿ ಮಾದರಿ ಭದ್ರತೆ ನೀಡಬೇಕೆನ್ನುವ ಬಿಜೆಪಿ ಬೇಡಿಕೆ ಸರಿಯಲ್ಲ. ಎಸ್ಪಿಜಿ ನಿಯಮದಡಿ ಪ್ರಧಾನಿಗೆ ಮಾತ್ರ ಈ ಭದ್ರತೆ ನೀಡಲಾಗುತ್ತದೆ. ಮಾಜಿ ಪ್ರಧಾನಿಗಳಿಗೆ ಹತ್ತು ವರ್ಷ ಎಸ್ಪಿಜಿ ಭದ್ರತೆ ನೀಡಬೇಕೆನ್ನುವ ಕಾನೂನು ಇದೆ. ಇದೇ ಎಲ್ ಕೆ ಆಡ್ವಾಣಿ ಗೃಹ ಸಚಿವರಾಗಿದ್ದಾಗ ನನಗೆ ನೀಡಿದ ಭದ್ರತೆಯನ್ನು ಹಿಂಪಡೆದಿದ್ದರು.

ಶರದ್ ಪವಾರ್
ಇಷ್ಟು ದಿನ ಕೇಂದ್ರದಲ್ಲಿ ಅಧಿಕಾರ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಶರದ್ ಪವಾರ ಎನ್ಸಿಪಿ ಪಕ್ಷದ ಬೆಂಬಲ ಬೇಕಿತ್ತು. ಚುನಾವಣೆಯ ಈ ಹೊಸ್ತಿಲಲ್ಲಿ ಈಗ ಅವರನ್ನು ಕಡೆಗಣಿಸಲಾಗುತ್ತಿದೆ. ಅವರ ಪಕ್ಷವನ್ನು ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಮುಗಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಇದೆಲ್ಲಾ ನಡೆಯೋಲ್ಲ.












Click it and Unblock the Notifications