ಮೋದಿ ರಕ್ಷಣೆಗೆ ಮಂಗಳೂರು ಪೊಲೀಸರು ಸನ್ನದ್ದ

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನೇಮಕಗೊಂಡ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಮೂರನೆಯ ಸಮಾವೇಶ ಇದಾಗಿದೆ. ಭಾರತ ಗೆಲ್ಲಿಸಿ (Bharata Gellisi) ಎಂದು ನಾಮಕರಣ ಮಾಡಲಾಗಿರುವ ಈ ಸಾರ್ವಜನಿಕ ಸಮಾವೇಶವು ನಾಳೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನೆಹರೂ ಮೈದಾನದಲ್ಲಿ ನಡೆಯಲಿದೆ.
ಭದ್ರತೆಯ ಬಗ್ಗೆ ಸ್ಥೂಲ ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಆರ್ ಹಿತೇಂದ್ರ ಅವರು DCP/SP ಶ್ರೇಣಿಯ 7 ಅಧಿಕಾರಿಗಳು, ACP/DySP ಶ್ರೇಣಿಯ 25 ಅಧಿಕಾರಿಗಳು, 67 ಇನ್ಸ್ ಪೆಕ್ಟರುಗಳು, 157 ಸಬ್ ಇನ್ಸ್ ಪೆಕ್ಟರುಗಳು, 211 ಸಹಾಯಕ ಸಬ್ ಇನ್ಸ್ ಪೆಕ್ಟರುಗಳು, 1,450 ಮುಖ್ಯ ಪೇದೆಗಳು- ಪೇದೆಗಳು, 221 ಮಹಿಳಾ ಪೇದೆಗಳು, 135 ಟ್ರಾಫಿಕ್ ಪೇದೆಗಳು ಮತ್ತು 300 ಹೋಂ ಗಾರ್ಡ್ಸ್ ( ಒಟ್ಟು 2,573 ) ಭದ್ರತೆ ನಿಭಾಯಿಸಲಿದ್ದಾರೆ.
12 KSRP ತಂಡಗಳು, 8 ASC, ಒಂದು RAF, 2 ಬಾಂಬ್ ಪತ್ತೆ ದಳ, 1 ವಿಪತ್ತು ನಿರ್ವಹಣಾ ತಂಡ, 13 ಚೆಕ್ ಪೋಸ್ಟುಗಳು, 16 ತಾತ್ಕಾಲಿಕ ಔಟ್ ಪೋಸ್ಟುಗಳು, 5 ಅಗ್ನಿಶಾಮಕ ದಳ, 5 ಆ್ಯಂಬುಲೆನ್ಸ್ ಸಹ ಸೇವೆಗೆ ಸಜ್ಜಾಗಿವೆ.
ಸಂಘಟಕರ ಪ್ರಕಾರ 1 ಲಕ್ಷ ಮಂದಿ ಸಭೆಗೆ ಜಮಾಯಿಸುವ ಸಾಧ್ಯತೆಯಿದೆ. ಇನ್ನು ನಗರದಾದ್ಯಂತ ಟ್ರಾಫಿಕ್ ನಿರ್ಬಂಧ ಸಹ ಜಾರಿಯಲ್ಲಿರುತ್ತದೆ. ನೆಹರೂ ಮೈದಾನದ ಒಂದು ಕಿಮೀ ಫಾಸಲೆಯಲ್ಲಿ ಯಾವುದೇ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಕಮಿಷನರ್ ಆರ್ ಹಿತೇಂದ್ರ ಅವರು ತಿಳಿಸಿದ್ದಾರೆ.












Click it and Unblock the Notifications