ಮೋದಿ ರಕ್ಷಣೆಗೆ ಮಂಗಳೂರು ಪೊಲೀಸರು ಸನ್ನದ್ದ
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನೇಮಕಗೊಂಡ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಮೂರನೆಯ ಸಮಾವೇಶ ಇದಾಗಿದೆ. ಭಾರತ ಗೆಲ್ಲಿಸಿ (Bharata Gellisi) ಎಂದು ನಾಮಕರಣ ಮಾಡಲಾಗಿರುವ ಈ ಸಾರ್ವಜನಿಕ ಸಮಾವೇಶವು ನಾಳೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನೆಹರೂ ಮೈದಾನದಲ್ಲಿ ನಡೆಯಲಿದೆ.
ಭದ್ರತೆಯ ಬಗ್ಗೆ ಸ್ಥೂಲ ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಆರ್ ಹಿತೇಂದ್ರ ಅವರು DCP/SP ಶ್ರೇಣಿಯ 7 ಅಧಿಕಾರಿಗಳು, ACP/DySP ಶ್ರೇಣಿಯ 25 ಅಧಿಕಾರಿಗಳು, 67 ಇನ್ಸ್ ಪೆಕ್ಟರುಗಳು, 157 ಸಬ್ ಇನ್ಸ್ ಪೆಕ್ಟರುಗಳು, 211 ಸಹಾಯಕ ಸಬ್ ಇನ್ಸ್ ಪೆಕ್ಟರುಗಳು, 1,450 ಮುಖ್ಯ ಪೇದೆಗಳು- ಪೇದೆಗಳು, 221 ಮಹಿಳಾ ಪೇದೆಗಳು, 135 ಟ್ರಾಫಿಕ್ ಪೇದೆಗಳು ಮತ್ತು 300 ಹೋಂ ಗಾರ್ಡ್ಸ್ ( ಒಟ್ಟು 2,573 ) ಭದ್ರತೆ ನಿಭಾಯಿಸಲಿದ್ದಾರೆ.
12 KSRP ತಂಡಗಳು, 8 ASC, ಒಂದು RAF, 2 ಬಾಂಬ್ ಪತ್ತೆ ದಳ, 1 ವಿಪತ್ತು ನಿರ್ವಹಣಾ ತಂಡ, 13 ಚೆಕ್ ಪೋಸ್ಟುಗಳು, 16 ತಾತ್ಕಾಲಿಕ ಔಟ್ ಪೋಸ್ಟುಗಳು, 5 ಅಗ್ನಿಶಾಮಕ ದಳ, 5 ಆ್ಯಂಬುಲೆನ್ಸ್ ಸಹ ಸೇವೆಗೆ ಸಜ್ಜಾಗಿವೆ.
ಸಂಘಟಕರ ಪ್ರಕಾರ 1 ಲಕ್ಷ ಮಂದಿ ಸಭೆಗೆ ಜಮಾಯಿಸುವ ಸಾಧ್ಯತೆಯಿದೆ. ಇನ್ನು ನಗರದಾದ್ಯಂತ ಟ್ರಾಫಿಕ್ ನಿರ್ಬಂಧ ಸಹ ಜಾರಿಯಲ್ಲಿರುತ್ತದೆ. ನೆಹರೂ ಮೈದಾನದ ಒಂದು ಕಿಮೀ ಫಾಸಲೆಯಲ್ಲಿ ಯಾವುದೇ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಕಮಿಷನರ್ ಆರ್ ಹಿತೇಂದ್ರ ಅವರು ತಿಳಿಸಿದ್ದಾರೆ.