ನಮೋ ಅಂದ್ರೆ ನನಗೆ ಮೋಸ ಹೊಸ ವ್ಯಾಖ್ಯಾನ
ಮಂಗಳವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ವಿಶ್ವನಾಥ್, ಬಿಜೆಪಿಯವರು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಮೋ ಎಂದು ದೊಡ್ಡದಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಮೋ ಎಂದರೆ 'ನನಗೆ ಮೋಸ ' ಎಂದು ಅರ್ಥಎಂದು ಹೊಸ ವ್ಯಾಖ್ಯಾನ ನೀಡಿದರು.
ಬಿಜೆಪಿಯವರ ನಮೋ ಬ್ರಿಗೇಡ್ ಅಬ್ಬರ ಕಂಡು ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಉಮಾ ಭಾರತಿಯಂತವರು ನನಗೆ ಮೋಸವಾಗಿದೆ ಎಂದು ಹೇಳುತ್ತಿದ್ದಾರೆ. ಮೋದಿ ಪ್ರಧಾನಿಯಾಗುವುದು ಕೇವಲ ಭ್ರಮೆ. ಸಮೂಹ ನಾಯಕತ್ವ ಆಡ್ವಾಣಿ ಅಂತವರು ಪ್ರಧಾನಿಯಾಗಬಹುದೇ ಹೊರತು ಮೋದಿ ಗದ್ದುಗೆ ಏರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂಬುದು ಬಿಜೆಪಿ ಹೇಳಿಕೆ ನೀಡುವುದು ಹುಚ್ಚುತ. ಭ್ರಷ್ಟಾಚಾರ ಬಗ್ಗೆ ದೊಡ್ಡದಾಗಿ ಮಾತನಾಡುವ ಮೋದಿ, ಕರ್ನಾಟಕದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತಾರೆಂಬುದು ಬೆಂಗಳೂರಿನ ಸಮಾವೇಶದಲ್ಲಿ ಉತ್ತರಿಸಬೇಕು ಎಂದು ಸವಾಲು ಹಾಕಿದರು.
ಕರ್ನಾಟಕದಲ್ಲೂ ಮೋಸವಾಗಿದೆ : ಕರ್ನಾಟಕದಲ್ಲೂ ನಮೋ ಆಗಿದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಡಿ.ವಿ.ಸದಾನಂದ ಗೌಡರು ತನಗೆ ಮೋಸವಾಯಿತು ಎಂದು ಹೇಳಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿದ ಯಡಿಯೂರಪ್ಪ ಅವರು ಪಕ್ಷದ ವರಿಷ್ಠರು ನನಗೆ ಮೋಸ ಮಾಡಿದರು ಎಂದು ಹೇಳಿದ್ದರು ಎಂದು ವಿಶ್ವನಾಥ್ ಲೇವಡಿ ಮಾಡಿದರು.
ನಮೋ ಎಂದರೆ ನನಗೆ ಮೋಸ ಎಂದು ಅರ್ಥ. ಇಂತಹ ಬ್ರಿಗೇಡ್ ದೇಶದ ಜನರಿಗೆ ಮೋಸ ಮಾಡಲು ಹೊರಟಿದೆ. ಇಂತಹ ಬ್ರಿಗೇಡ್ ನಂಬಿ ಲೋಕಸಭೆ ಚುನಾವಣೆಯಲ್ಲಿ ಜನರು ಹೇಗೆ ಮತ ನೀಡುತ್ತಾರೆ? ಎಂದು ವಿಶ್ವನಾಥ್ ಪ್ರಶ್ನಿಸಿದರು.