ದೇವೇಗೌಡರಿಗೆ ಚಾಯ್ ಪೇ ಚರ್ಚಾಗೆ ಆಹ್ವಾನ ಕೊಟ್ಟ ಮೋದಿ
ಬೆಂಗಳೂರು, ಮೇ 30 : ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೊತೆ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಸದ್ಯ ಎಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ. ಜೂ.3 ಅಥವ 4ರಂದು ಗೌಡರು ಮೋದಿ ಭೇಟಿ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಎಚ್.ಡಿ.ದೇವೇಗೌಡರು, 'ನರೇಂದ್ರ ಮೋದಿ ಅವರು ಚಾಯ್ ಪೆ ಚರ್ಚಾಗೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ಕಚೇರಿಯಿಂದ ನನ್ನ ಆಪ್ತ ಸಹಾಯಕನಿಗೆ ಕರೆ ಬಂದಿದೆ. ಮೋದಿ ಅವರ ಜತೆ ಚಹಾಕೂಟದೊಂದಿಗೆ ಮಾತುಕತೆ ನಡೆಸಲು ಬನ್ನಿ ಎಂದು ಆಹ್ವಾನ ನೀಡಿದ್ದಾರೆ' ಎಂದು ದೇವೇಗೌಡರು ತಿಳಿಸಿದರು.

'ಜೂನ್ 3 ಅಥವಾ 4ರಂದು ದೆಹಲಿಗೆ ತೆರಳುತ್ತಿದ್ದು, ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು. ಭೇಟಿಯ ಸಂದರ್ಭದಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ತೀರ್ಮಾನಿಸಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು. [ನರೇಂದ್ರ ಮೋದಿಗೆ ದೇವೇಗೌಡರು ಪತ್ರ ಬರೆದಿದ್ದೇಕೆ?]
'ನಾನು ನಿಮ್ಮ ಮಗನಂತೆ' : ಲೋಕಸಭೆ ಚುನಾವಣೆ ಪ್ರಚಾರದ ಕಾಲದಲ್ಲಿ ದೇವೇಗೌಡರು ಮತ್ತು ನರೇಂದ್ರ ಮೋದಿ ಅವರ ನಡುವೆ ಮಾತಿನ ಜಟಾಪಟಿ ನಡೆದಿತ್ತು. 'ಮೋದಿ ಪ್ರಧಾನಿಯಾದರೆ ಕರ್ನಾಟಕದಲ್ಲಿ ಇರುವುದಿಲ್ಲ, ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ' ಎಂದು ದೇವೇಗೌಡರು ಹೇಳಿದ್ದರು. [ಮೋದಿ ಮೋಡಿ: ದೊಡ್ಡಗೌಡ್ರ ಹೃದಯ ಗೆದ್ದ ಮೋದಿ]
ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡಲು ಆಗಮಿಸಿದ್ದ ಮೋದಿ 'ದೇವೇಗೌಡರೇ ನೀವು ಹಿರಿಯರು ಕರ್ನಾಟಕದಲ್ಲಿ ಇರುವುದು ಸಮಸ್ಯೆಯಾದರೆ ಗುಜರಾತ್ಗೆ ಬನ್ನಿ ನಿಮ್ಮ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು' ಪ್ರಚಾರ ಭಾಷಣದಲ್ಲಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇವೇಗೌಡರು ದೆಹಲಿಗೆ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿ ಬಂದಿದ್ದರು. ಈಗ ಸ್ವತಃ ಮೋದಿಯೇ ದೇವೇಗೌಡರಿಗೆ ಚಾಯ್ ಪೇ ಚರ್ಚಾಗೆ ಆಹ್ವಾನ ನೀಡಿದ್ದಾರೆ.












Click it and Unblock the Notifications