ಗೌರಿ ಲಂಕೇಶ್ ಹತ್ಯೆ ಹಿನ್ನೆಲೆ ನಾರಾಯಣ ಗುರು ಜಯಂತಿ ಮುಂದಕ್ಕೆ
ಬೆಂಗಳೂರು, ಸೆಪ್ಟೆಂಬರ್ 6: ಪತ್ರಕರ್ತೆ ಗೌರಿ ಲಂಕೇಶ್ ಅವರ ಅಮಾನುಷ ಹತ್ಯೆಯ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆಯನ್ನು ಮುಂದೂಡಲು ಸರ್ಕಾರ ನಿರ್ಧರಿಸಿದೆ.
ಕಾರ್ಯಕ್ರಮ ಮುಂದೂಡಿರುವುದನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ. ಜಯಂತಿ ಆಚರಣೆಯ ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಉಮಾಶ್ರೀ, ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿರುವ ಸಚಿವೆ ಉಮಾಶ್ರೀ ಇದು 'ವೈಚಾರಿಕತೆಯ ಕಗ್ಗೊಲೆ' ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು, "ಇದೊಂದು ಪೈಶಾಚಿಕ, ವಿಕೃತ ಮನಸ್ಸಿನ ಘೋರ ಕೃತ್ಯ" ಎಂದು ಹೇಳಿದ್ದಾರೆ.
"ಪತ್ರಕರ್ತೆಯಾಗಿ ಸಾಮಾಜಿಕ ಹೋರಾಟಗಾರ್ತಿಯಾಗಿ ವೈಚಾರಿಕ ಚಿಂತನೆಯ ದಿಟ್ಟ ಮಹಿಳೆಯಾಗಿದ್ದ ಗೌರಿ ಲಂಕೇಶ್ ಮಹಿಳಾ ಸ್ವಾಭಿಮಾನದ ಸಂಕೇತವಾಗಿದ್ದರು. ಸ್ವಾವಲಂಬನೆ, ದಿಟ್ಟತನ ಮತ್ತು ಮಹಿಳೆಯರ ಸಾಮರ್ಥ್ಯಕ್ಕೆ ಮಾದರಿಯಂತಿದ್ದ ಗೌರಿ ಲಂಕೇಶ್ ಕರ್ನಾಟಕ ಕಂಡ ಅಪರೂಪದ ಮಹಿಳಾ ಹೋರಾಟಗಾರ್ತಿಯಾಗಿದ್ದರು," ಎಂದು ಉಮಾಶ್ರೀ ಹೇಳಿದ್ದಾರೆ.
"ಸಮಕಾಲೀನ ವಿದ್ಯಮಾನಗಳ ಬಗ್ಗೆ ಅವರಿಗಿದ್ದ ಅರಿವು ಮತ್ತು ಅವರು ಅದನ್ನು ವಿಶ್ಲೇಷಿಸುತ್ತಿದ್ದ ರೀತಿ ಬೆರಗು ಹುಟ್ಟಿಸುವಂತಿತ್ತು. ಅವರ ಹತ್ಯೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕೊಲೆಗಡುಕರು ಯಾರೇ ಆಗಿರಲಿ ಅವರಿಗೆ ಅತ್ಯುಗ್ರ ಶಿಕ್ಷೆ ಆಗಬೇಕು. ವೈಯಕ್ತಿಕವಾಗಿ ನನಗೆ ಅವರ ಅಗಲಿಕೆ ಅಪಾರ ನೋವು ಮತ್ತು ಸಂಕಟ ತಂದಿದೆ," ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.












Click it and Unblock the Notifications