ನೈತಿಕತೆ ಕಳೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ!
ಬೆಂಗಳೂರು, ಅ. 06: ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರುತ್ತಿದೆ. ಇದೇ ವೇಳೆ ಆರ್ಎಸ್ಎಸ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೊಟ್ಟಿದ್ದ ಹೇಳಿಕೆ ಬಿಜೆಪಿ ನಾಯಕರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಈ ಕುರಿತು ರಾಜ್ಯ ಬಿಜೆಪಿ ನಾಯಕರು ತಮ್ಮ ಆಕ್ರೋಶವನ್ನು ಹೊರಹಾಕುತ್ತಲೇ ಇದ್ದಾರೆ. ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕಟೀಲ್ ಅವರು, "ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ರಾಜಕೀಯದ ಕೂಪ ಮಂಡೂಕದಂತಿದ್ದಾರೆ. ಅದರಿಂದ ಕುಟುಂಬವೆಂಬ ಕೂಪದಿಂದ ಹೊರಬಂದು, ಅವರು ಮಾತನಾಡುವುದು ಉಚಿತ' ಎಂದು ಹರಿಹಾಯ್ದಿದ್ದಾರೆ.
"ದೇಶ ಶಕ್ತಿಶಾಲಿಯಾಗಬೇಕು ಎಂಬ ಮಹತ್ವದ ಚಿಂತನೆಯನ್ನು ಆರ್ಎಸ್ಎಸ್ ಹೊಂದಿದೆ. ಭಾರತ ವಿಶ್ವಗುರುವಾಗಬೇಕು ಎಂಬ ಚಿಂತನೆಯೊಂದಿಗೆ ಅದು ಕಾರ್ಯನಿರ್ವಹಿಸುತ್ತಿದೆ. ಆರ್ಎಸ್ಎಸ್ ಸ್ವಯಂಸೇವಕರು ತಮ್ಮ ಜೀವನವನ್ನು ದೇಶಕ್ಕೆ ಸಮರ್ಪಣೆ ಮಾಡಿಕೊಂಡು ಕೆಲಸ ಮಾಡುತ್ತಾರೆ. ನಾನು ನನ್ನ ಮಕ್ಕಳು, ಮರಿಮಕ್ಕಳೇ ಈ ರಾಜ್ಯ ದೇಶ ಆಳ್ವಿಕೆ ಮಾಡಬೇಕು ಎಂಬ ಸ್ವಾರ್ಥ ಅವರಲ್ಲಿಲ್ಲ' ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ಕಟೀಲ್ ವಾಗ್ದಾಳಿಯನ್ನು ಮಾಡಿದ್ದಾರೆ.

ಪಿಜಿಆರ್ ಸಿಂಧ್ಯಾ ಆರ್ಎಸ್ಎಸ್ನಿಂದ ಬಂದವರು!
"ಜೆಡಿಎಸ್ ಹಿರಿಯ ನಾಯಕ ಪಿ. ಜಿ. ಆರ್. ಸಿಂಧ್ಯಾ ಅವರು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರು. ಅವರಿಂದ ಆರ್ಎಸ್ಎಸ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೇಳಿ ತಿಳಿದುಕೊಳ್ಳಲಿ. ಅಥವಾ ಯಾವುದಾದರೂ ಆರ್ಎಸ್ಎಸ್ ಶಾಖೆಗೆ ಬಂದು ಅಲ್ಲಿ ಮಾಹಿತಿ ಪಡೆಯಲು ಅವಕಾಶವಿದೆ. ಅವರು ಹಿಂದೊಮ್ಮೆ ಸೈನ್ಯಕ್ಕೆ ಸೇರುವವರು ಹೊಟ್ಟೆಪಾಡಿಗಾಗಿ ಸೇರುತ್ತಾರೆ ಎಂದು ಸೈನಿಕರನ್ನೇ ಅವಮಾನಿಸಿದ್ದರು. ಈ ದೇಶದ ಸೈನಿಕ ಕಷ್ಟಗಳ ಬಗ್ಗೆ ಅವರಿಗೆ ಅರಿವಿಲ್ಲ" ಎಂದು ಕಟೀಲ್ ಕಿಡಿ ಕಾರಿದ್ದಾರೆ.

ಕೋಟಿ ಕೊಟ್ಟರೂ ಸೈನ್ಯಕ್ಕೆ ಸೇರಿಸಲ್ಲ!
"ನಮ್ಮ ಸೈನಿಕರಲ್ಲಿ ದೇಶಭಕ್ತಿಯಿರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಮಾಜಿ ಸಿಎಂ ಎಚ್ಡಿಕೆಗೆ ಇಲ್ಲ. ಅವರು ಒಂದು ಕೋಟಿ ರೂಪಾಯಿ ಸಂಬಳ ಕೊಟ್ಟರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಲಾರರು. ಮಕ್ಕಳನ್ನು ಸೇನೆಗೆ ಸೇರಿಸುವ ಈ ಆಹ್ವಾನವನ್ನು ಕುಮಾರಸ್ವಾಮಿ ಸ್ವೀಕರಿಸಲಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ಸೈನಿಕರು ಮಾತ್ರವಲ್ಲದೆ ಈಗ ಯುಪಿಎಸ್ಸಿ ಮೂಲಕ ಬಂದಿರುವ ಐಎಎಸ್ ಅಧಿಕಾರಿಗಳನ್ನೂ ಅವಮಾನ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಹುದ್ದೆಯ ಘನತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು. ಕುಟುಂಬವನ್ನಷ್ಟೇ ಗಮನಿಸಿ ರಾಜಕೀಯ ಮಾಡುವುದು ಸರಿಯಲ್ಲ" ಎಂದು ಕಟೀಲ್ ಎಚ್ಚರಿಸಿದ್ದಾರೆ.

ಸಶಕ್ತ ಭಾರತ ಆರ್ಎಸ್ಎಸ್ ಕನಸು!
ಸಮಾಜದಲ್ಲಿನ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ, ಸ್ವಜನ ಪಕ್ಷಪಾತ ದೂರವಾಗಬೇಕು ಎಂದು ಆರ್ಎಸ್ಎಸ್ ಬಯಸುತ್ತದೆ. ಸಶಕ್ತ ಭಾರತ ಆರ್ಎಸ್ಎಸ್ ಕನಸು. ಆದರೆ ಕೆಲವರು ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರವನ್ನು ಹಾಸಿಗೆ ಮಾಡಿಕೊಂಡು ಹೊದ್ದು ಮಲಗಿದ್ದಾರೆ. ಅಂಥವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅನುಮಾನಿಸುತ್ತಾರೆ. ಆರ್ಎಸ್ಎಸ್ ಪರಿವಾರ ಸಂಸ್ಥೆಗಳ ಮೂಲಕ ಅನಾಥಾಶ್ರಮ, ಗುರುಕುಲ, ವಿಶೇಷ ಚೇತನ ಮಕ್ಕಳಿಗೆ ಸಾವಿರಾರು ಶಾಲೆಗಳನ್ನು ನಿಸ್ವಾರ್ಥವಾಗಿ ನಡೆಸುತ್ತಿದೆ" ಎಂದು ಕಟೀಲ್ ವಿವರಿಸಿದ್ದಾರೆ. ಜೊತೆಗೆ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಆಗಿದ್ದನ್ನು ಕಟೀಲ್ ನೆನಪಿಸಿದ್ದಾರೆ.

ನೈತಿಕತೆ ಕಳೆದುಕೊಂಡಿರುವ ಎಚ್.ಡಿ. ಕುಮಾರಸ್ವಾಮಿ!
ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿರುವ ಕಟೀಲ್, "ಕೆಲವರ ಕೃಪಾಕಟಾಕ್ಷದಿಂದ 1989ರಲ್ಲಿ ಕೆಎಎಸ್ನಿಂದ ಐಎಎಸ್ಗೆ ಬಡ್ತಿ ಹೊಂದಿದ್ದ ಅಧಿಕಾರಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ 2007ರಲ್ಲಿ ನೇಮಿಸಲಾಗಿತ್ತು. ಜೊತೆಗೆ ಅವರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಮಾಡಬಾರದ ಅಕ್ರಮಗಳನ್ನು ಮಾಡಿದ್ದು ನಿಮಗೆ ನೆನಪಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಸೈನಿಕರ ಬಗ್ಗೆ, ಆರ್ಎಸ್ಎಸ್ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಜನರೇ ಸೂಕ್ತ ಉತ್ತರ ನೀಡಿ ಮೂಲೆಗುಂಪು ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಒಟ್ಟಾರೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಜೋರಾಗುತ್ತಿದೆ.
Recommended Video












Click it and Unblock the Notifications