ಬಿಜೆಪಿ ಮೇಲಿನ ಯಡಿಯೂರಪ್ಪ ಹಿಡಿತ ತಪ್ಪಿಸಲು ನಳಿನ್ ಕಟೀಲ್ ಯತ್ನ
ಬೆಂಗಳೂರು, ಅಕ್ಟೋಬರ್ 14: ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಅವರ ನಡುವೆ ಆರಂಭಗೊಂಡಿರುವ 'ಅಧಿಕಾರ'ದ ಸಮರ ಮತ್ತೊಂದು ಹಂತಕ್ಕೆ ಹೋಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕಟೀಲ್ ನೇಮಕವಾದ ನಂತರ ಯಡಿಯೂರಪ್ಪ ಹಾಗೂ ನಳಿನ್ ಕಟೀಲ್ ನಡುವೆ ಶೀಥಲ ಸಮರ ಆರಂಭಗೊಂಡಿತ್ತು. ಕೆಲವು ನಿರ್ಣಯಗಳನ್ನು ಯಡಿಯೂರಪ್ಪ ವಿರುದ್ಧವಾಗಿ ಹಾಗೂ ಯಡಿಯೂರಪ್ಪ ಅವರನ್ನು ಹೊರಗಿಟ್ಟುಕೊಂಡು ನಳಿನ್ ತೆಗೆದುಕೊಂಡಿದ್ದರು. ಇದು ಇಬ್ಬರ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಈಗ ಈ ತಿಕ್ಕಾಟ ಮತ್ತೊಂದು ಹಂತಕ್ಕೆ ಹೋಗಿದೆ.ಈಗ ಇದಕ್ಕೆ ಜಾತಿ ಆಯಾಮವೂ ಸಿಕ್ಕಿದೆ.
ಯಡಿಯೂರಪ್ಪ ಅವರು ನೇಮಿಸಿದ್ದ ಏಳು ಮಂದಿ ಸಿಬ್ಬಂದಿಯನ್ನು ನಳಿನ್ ಕಟೀಲ್ ಏಕಾ-ಏಕಿ ವಜಾ ಮಾಡಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, 'ಲಿಂಗಾಯತ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.

ಒಬ್ಬರು ಟೈಪಿಸ್ಟ್, ಇಬ್ಬರು ಛಾಯಾಗ್ರಾಹಕರು ಇನ್ನೂ ಕೆಲವರು
ಒಬ್ಬರು ಟೈಪಿಸ್ಟ್, ಇಬ್ಬರು ಛಾಯಾಗ್ರಾಹಕರು, ಒಬ್ಬರು ಅಡುಗೆಯವರೂ ಸೇರಿ ಇನ್ನೂ ಕೆಲವರನ್ನು ನಳಿನ್ ಕಟೀಲ್ ಕೆಲಸದಿಂದ ತೆಗೆದು ಹಾಕಿ ಬೇರೆಯವರನ್ನು ಅದೇ ಸ್ಥಾನಕ್ಕೆ ನೇಮಿಸಿದ್ದಾರೆ. ಇವರೆಲ್ಲರನ್ನು ಯಡಿಯೂರಪ್ಪ ಅವರು ನೇಮಿಸಿದ್ದರು. ಕೆಲಸದಿಂದ ತೆಗೆಯಲ್ಪಟ್ಟವರಲ್ಲಿ ಕೆಲವರು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದರು.

ಯಡಿಯೂರಪ್ಪ ಸಲಹೆಯನ್ನು ಕಟೀಲ್ ಧಿಕ್ಕರಿಸಿದ್ದರು
ಪಕ್ಷದ ಮೇಲೆ ಯಡಿಯೂರಪ್ಪ ಅವರಿಗಿರುವ ಹಿಡಿತವನ್ನು ಸಡಿಲಗೊಳಿಸಲು ನಳಿನ್ ಕಟೀಲ್ ಯತ್ನಿಸಿದ್ದರು, ಮೇಯರ್ ಆಯ್ಕೆ, ಪದಾಧಿಕಾರಿಗಳ ನೇಮಕ ಸೇರಿದಂತೆ ಇನ್ನೂ ಕೆಲವು ವಿಚಾರಗಳಲ್ಲಿ ಯಡಿಯೂರಪ್ಪ ಸಲಹೆಯನ್ನು ನಳಿನ್ ಕಟೀಲ್ ಧಿಕ್ಕರಿಸಿದ್ದರು.

ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದ್ದ ಯಡಿಯೂರಪ್ಪ
ಕೆಲ ದಿನದ ಹಿಂದಷ್ಟೆ ಯಡಿಯೂರಪ್ಪ ಅವರು ನಳಿನ್ ಕಟೀಲ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದ್ದರು. ಮಾತುಕತೆ ನಂತರ ಇಬ್ಬರ ನಡುವೆ ಒಪ್ಪಂದ ಆಗಿದೆ ಎಂದೇ ನಂಬಲಾಗಿತ್ತು. ಆದರೆ ಈಗ ಮತ್ತೆ ನಳಿನ್ ಕಟೀಲ್ ಅವರು ಯಡಿಯೂರಪ್ಪ ವಿರುದ್ಧ ಪರೋಕ್ಷ ಯುದ್ಧ ಆರಂಭಿಸಿದ್ದಾರೆ.

ಪ್ರಚಾರ ಸಮಿತಿಯಲ್ಲೂ ಬದಲಾವಣೆ ಆಗಲಿದೆ
ಬಿಜೆಪಿ ಕಚೇರಿಯಲ್ಲಿ ನಳಿನ್ ಕಟೀಲ್ಗೆ ಅಸಹಕಾರ ತೋರಲಾಗುತ್ತಿದೆ ಎನ್ನಲಾಗಿದೆ. ಇದೇ ಕಾರಣದಿಂದಲೇ ನಳಿನ್ ಕಟೀಲ್ ತಮ್ಮ ಅಧಿಕಾರ ಬಳಸಿ ಕೆಲವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಪ್ರಚಾರ ಸಮಿತಿಯಲ್ಲಿ ಸಹ ಕೆಲವು ಮಹತ್ವದ ಬದಲಾವಣೆಗಳನ್ನು ಕಟೀಲ್ ಮಾಡಲಿದ್ದಾರೆ ಎನ್ನಲಾಗಿದೆ.

ಕಟೀಲ್ ಹಿಂದೆ ಇದ್ದಾರೆ ಬಿ.ಎಲ್.ಸಂತೋಷ್
ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಹಿಡಿತವಿದೆ. ಆ ಹಿಡಿತವನ್ನು ತಪ್ಪಿಸಲು ನಳಿನ್ ಕಟೀಲ್ ಯತ್ನಿಸುತ್ತಿದ್ದಾರೆ. ಕಟೀಲ್ ಹಿಂದೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇದ್ದಾರೆ ಎಂಬುದು ಬಿಜೆಪಿಯಲ್ಲಿಯೇ ಮಾತನಾಡುತ್ತಿದ್ದಾರೆ. ಮೇಲ್ನೋಟಕ್ಕೆ ಇದು ನಳಿನ್ ಕಟೀಲ್-ಯಡಿಯೂರಪ್ಪ ನಡುವಿನ ಕಾಳಗದಂತೆ ಕಂಡರೂ, ನಿಜವಾಗಿ ಇದು ಬಿ.ಎಲ್.ಸಂತೋಶ್ ಮತ್ತು ಯಡಿಯೂರಪ್ಪ ನಡುವೆ ನಡೆಯುತ್ತಿರುವ ಯುದ್ಧ ಎನ್ನಲಾಗುತ್ತಿದೆ.












Click it and Unblock the Notifications