ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿಎಸ್ಪಿಯ ಎನ್.ಮಹೇಶ್?
Recommended Video

ಬೆಂಗಳೂರು, ಅಕ್ಟೋಬರ್ 04 : ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ.
2019ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಹೋರಾಡಲು ಮಿತ್ರ ಪಕ್ಷಗಳು 'ಮಹಾಘಟಬಂಧನ್' ರಚನೆ ಮಾಡುತ್ತಿವೆ. ಆದರೆ, ಬಿಎಸ್ಪಿ ಪಕ್ಷ ಇದರಿಂದ ಹೊರಬರಲು ನಿರ್ಧರಿಸಿದೆ. ಈ ಬೆಳವಣಿಗೆಯ ಪರಿಣಾಮ ಕರ್ನಾಟಕ ರಾಜಕೀಯದ ಮೇಲೂ ಆಗುತ್ತಿದೆ.
ಕರ್ನಾಟಕದಲ್ಲಿ 2018ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಎನ್.ಮಹೇಶ್ ಅವರು ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ 7 ಸಚಿವ ಸ್ಥಾನಗಳು ಖಾಲಿ ಇವೆ. ಅಕ್ಟೋಬರ್ 10 ರೊಳಗೆ ಸಂಪುಟ ವಿಸ್ತರಣೆಯಾಗಲಿದೆ. ಆ ಸಮಯದಲ್ಲಿ ಎನ್. ಮಹೇಶ್ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬುದು ಸದ್ಯದ ಸುದ್ದಿ....

ಎಚ್.ಡಿ.ದೇವೇಗೌಡರ ಜೊತೆ ಮಾತುಕತೆ
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎನ್.ಮಹೇಶ್ ಅವರು ಸಚಿವರಾಗಿದ್ದಾರೆ. ಆದರೆ, ಅವರನ್ನು ಸಂಪುಟದಿಂದ ಕೈ ಬಿಡಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಒಪ್ಪಿಗೆ ಬೇಕು. ಏಕೆಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದವು. ಕೊಳ್ಳೇಗಾಲದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಬಿಎಸ್ಪಿಗೆ ಬೆಂಬಲ ನೀಡಲಾಗಿತ್ತು.

ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ
ದಕ್ಷಿಣ ಭಾರತದಲ್ಲಿಯೇ ಬಿಎಸ್ಪಿಗೆ ಅಸ್ತಿತ್ವವಿರುವುದು ಕರ್ನಾಟಕದಲ್ಲಿ ಮಾತ್ರ. ದಕ್ಷಿಣ ಭಾರತದ ಏಕೈಕ ಶಾಸಕ, ಸಚಿವ ಎನ್.ಮಹೇಶ್. ಆದರೆ, ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದರು. ಆದ್ದರಿಂದ ಸಂಪುಟ ವಿಸ್ತರಣೆ ಸಮಯದಲ್ಲಿ ಅವರನ್ನು ಕೈ ಬಿಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

ಕಾಂಗ್ರೆಸ್ ವಿರುದ್ಧ ಟೀಕೆ
ಚಾಮರಾಜನಗರದಲ್ಲಿ ನಡೆದ ಬಿಎಸ್ಪಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್.ಮಹೇಶ್ ಅವರು, 'ಜಾತಿ ವ್ಯವಸ್ಥೆ ಎಲ್ಲಿಯ ತನಕ ಇರುತ್ತದೋ ಅಲ್ಲಿಯ ತನಕ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಸ್ತಿತ್ವದಲ್ಲಿ ಇರುತ್ತದೆ. ಜಾತಿ ವ್ಯವಸ್ಥೆ ಕೊನೆಗೊಂಡ ದಿನ ಬಸವಣ್ಣನ ಪಕ್ಷವಾದ ಬಿಎಸ್ಸ್ಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಹೆಚ್ಚು ವರ್ಷಗಳ ಕಾಲ ದೇಶದವನ್ನು ಆಳಿದೆ. ದೇಶದ ನೂರುಕೋಟಿ ಜನರನ್ನು ಆರ್ಥಿಕ ಸಂಕಷ್ಟದಿಂದ ಬಿಡುಗಡೆ ಮಾಡುವಂತಹ ಧ್ಯೇಯ ಪಕ್ಷಕ್ಕೆ ಇದ್ದಿದ್ದರೆ ಎಲ್ಲರೂ ಸಮಾನತೆಯಿಂದ ಇರುತ್ತಿದ್ದರು' ಎಂದು ಟೀಕಿಸಿದರು.

ಇಬ್ಬರು ಸಚಿವರಿಗೆ ಕೋಕ್
ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಇಬ್ಬರು ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಬಿಎಸ್ಪಿ-ಕಾಂಗ್ರೆಸ್ ಮೈತ್ರಿ ಮುರಿದು ಬಿದ್ದಿರುವುದರಿಂದ ಎನ್.ಮಹೇಶ್ ಅವರು ಹೊರಹೋಗಬಹುದು. ಮತ್ತೊಬ್ಬರು ಯಾರು ಹೊರಹೋಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮುರಿದು ಬಿದ್ದ ಮೈತ್ರಿ
ಬಿಎಸ್ಪಿ ನಾಯಕಿ ಮಾಯಾವತಿ ಅವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬುಧವಾರ ಘೋಷಣೆ ಮಾಡಿದ್ದರು. ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.












Click it and Unblock the Notifications