ಕನ್ನಡದ ನುಡಿ ಹಬ್ಬ, ಉಡುಪಿ ಸತ್ಸಂಗ, ಕುಕ್ಕೆ ಚಂಪಾ ಷಷ್ಠಿಯ ರೌಂಡಪ್
ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ. ಉಡುಪಿಯಲ್ಲಿ ಧರ್ಮ ಸಂಸದ್ ನ ಆರಂಭ. ಶುಕ್ರವಾರದ ದಿನ ಇಡೀ ಕರ್ನಾಟಕದ ಜನತೆಯ ದೃಷ್ಟಿ ಈ ಮೂರು ಕಡೆ ಬಿಟ್ಟು ಇನ್ನೆಲ್ಲಿರಲು ಸಾಧ್ಯ? ಮಾಧ್ಯಮಗಳಲ್ಲಂತೂ ಎಲ್ಲಿ, ಏನು ಆಗಿಬಿಡಬಹುದು ಎಂಬ ಕುತೂಹಲ. ಯಾವ ಸುದ್ದಿ ತಪ್ಪಿ ಹೋಗಿಬಿಡಬಹುದೇನೋ ಎಂಬ ಧಾವಂತ.
ಈ ಮೂರು ಮಹತ್- ಬೃಹತ್ ಕಾರ್ಯಕ್ರಮಕ್ಕೆ ತಕ್ಕಡಿಯಲ್ಲಿಟ್ಟು ತೂಕ ಅಳೆಯುವುದು ಅಸಾಧ್ಯ. ಕನ್ನಡ ಭಾಷೆ-ನುಡಿ-ನೆಲ-ಜಲ-ಸಾಹಿತ್ಯದ ಚರ್ಚೆ ನಡೆಸಲು ವೇದಿಕೆಯಾದ ಮೈಸೂರು ಮೊದಲನೆಯದಾಗಿ ತೆಗೆದುಕೊಂಡರೆ, ಪ್ರಾಯಶಃ ಇದೇ ಮೊದಲ ಬಾರಿ ಸಮ್ಮೇಳನಾಧ್ಯಕ್ಷರೊಬ್ಬರು, ಆ ಸಚಿವರನ್ನು ತೆಗೆದು ಹಾಕಿರಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ ಪ್ರಸಂಗ ಎದುರಾಯಿತು.
ಶಿಕ್ಷಣ ಸಚಿವ ತನ್ವೀರ್ ಸೇಠ್, ಅದೂ ಮೈಸೂರನ್ನು ಪ್ರತಿನಿಧಿಸುವ ಶಾಸಕರಾಗಿ ಸಮ್ಮೇಳನಕ್ಕೆ ಬಂದಿಲ್ಲ ಅನ್ನೋದು ಸಿಟ್ಟಿಗೆ ಕಾರಣವಾಗಿದೆ. ಅದಕ್ಕೂ ಮುನ್ನ ಬರಗೂರು ರಾಮಚಂದ್ರಪ್ಪನವರು ತಮ್ಮ ಸಿಟ್ಟು ಹೇಳಿಕೊಂಡಿದ್ದರು. ನಾಡಿನ ಪಠ್ಯದ ಬಗ್ಗೆ ಸಲಹೆ ನೀಡಿದರೆ, ಮುಖ್ಯಮಂತ್ರಿಯಾದವರು ಅದಕ್ಕೆ ಪ್ರತಿಕ್ರಿಯೆ ನೀಡ್ತಾರೆ. ಈ ಶಿಕ್ಷಣ ಸಚಿವರಿಗೆ ಒಂದು ಫೋನ್ ಕರೆ ಮಾಡುವ ಸೌಜನ್ಯ ಇಲ್ಲವಾ ಎಂದು ಕೆಂಡವಾಗಿದ್ದರು.

ತನ್ವೀರ್ ಸೇಠ್ ರನ್ನು ಸಂಪುಟದಿಂದ ಕೈ ಬಿಡಿ
ಆದರೆ, ಈ ಎಲ್ಲ ಕಾರಣಗಳಿಗಾಗಿ ಸಾಹಿತ್ಯ ಸಮ್ಮೇಳನದಂಥ ವೇದಿಕೆಯಲ್ಲಿ ನಿಂತು, ಮುಖ್ಯಮಂತ್ರಿಗಳಿಗೆ ಸಚಿವರನ್ನು ಸಂಪುಟದಿಂದ ಕೈ ಬಿಡಿ ಎಂದು ಹೇಳುವ ಧಾರ್ಷ್ಟ್ಯ ತೋರಿದ್ದು ಇದೇ ಮೊದಲಿರಬೇಕು. ಈ ವಿಚಾರದಲ್ಲಿ ಚಂದ್ರಶೇಖರ ಪಾಟೀಲರ ಬದ್ಧತೆ ಮತ್ತೊಮ್ಮೆ ಸಾರ್ವಜನಿಕವಾಗಿ ಗೊತ್ತಾಗುವಂತಾಯಿತು.

ಅಚ್ಚುಕಟ್ಟಾದ ಊಟದ ವ್ಯವಸ್ಥೆ
ಇನ್ನು ಊಟದ ವ್ಯವಸ್ಥೆ ತುಂಬಾ ಚೆನ್ನಾಗಿ ಮಾಡಲಾಗಿತ್ತು ಅನ್ನೋದು ವರದಿ. ಇಂದಿರಾ ಕ್ಯಾಂಟೀನ್ ಆರಂಭಿಸಿದ ಅನುಭವ ಸಹಾಯಕ್ಕೆ ಬಂದಿರಬೇಕು. ಇದು ತಮಾಷೆ, ಗಂಭೀರವಾಗಿ ತೆಗೆದುಕೊಳ್ಳಬೇಡಿ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಹಬ್ಬದ ಆಚರಣೆಗೆ ದೊಡ್ಡ ಮಟ್ಟದಲ್ಲಿ ಎದುರಾಗಬಹುದಾದ ಸವಾಲನ್ನು ಮೊದಲಿಗೇ ಗುರುತಿಸಿದ್ದು ಸಹ ಈ ಯಶಸ್ಸಿಗೆ ಕಾರಣವಾಗಿರಬಹುದು.

ನಂಬಿಕೆ ಅವರವರ ಆಯ್ಕೆ
ಚಂದ್ರಶೇಖರ ಪಾಟೀಲರು ಬಂಡಾಯ ಸಾಹಿತಿಗಳು. ಭುವನೇಶ್ವರಿ ದೇವಾಲಯಕ್ಕೆ ಹೋಗಿಲಿಲ್ಲವಂತೆ. ಮೈಸೂರು ಪೇಟ ಹಾಕಲು ಬಂದಾಗ ನಿರಾಕರಿಸಿದರಂತೆ. ಇದು ಸುದ್ದಿ. ಹಾಗಿದ್ದರೆ ಸಾರೋಟಿನ ಮೇಲೆ ಮೆರವಣಿಗೆ ಕರೆದೊಯ್ಯುವುದನ್ನು ಕೂಡ ಬೇಡ ಅನ್ನಬೇಕಿತ್ತು ಅನ್ನೋದು ಕೆಲವರ ವಾದ. ಈ ವಿಚಾರದ ವಿಶ್ಲೇಷಣೆ ಅವರವರ ಭಾವಕ್ಕೆ, ಅವರವರ ಭಕುತಿಗೆ ಬಿಡೋಣ.

ಧರ್ಮ ಸಂಸತ್ತೋ ಹಿಂದೂ ಧರ್ಮ ಸಂಸತ್ತೋ
ಉಡುಪಿಯಲ್ಲಿ ಆಗಿದ್ದು ಧರ್ಮ ಸಂಸತ್ತೋ ಅಥವಾ ಹಿಂದೂ ಧರ್ಮ ಸಂಸತ್ತೋ ಸ್ಪಷ್ಟವಾಗಬೇಕಿದೆ. ಅಯೋಧ್ಯೆಯಲ್ಲಿ ಮುಂದಿನ ಧರ್ಮ ಸಂಸತ್ ಅಂತ ಘೋಷಣೆ ಮಾಡಿದ್ದಾರೆ. ಇಷ್ಟು ಕಾಲ ರಾಮ ಮಂದಿರ ನಿರ್ಮಾಣ ವಿಚಾರ ಕೋರ್ಟ್ ವ್ಯಾಪ್ತಿಯಲ್ಲಿದೆ ಎಂದು ಸ್ವತಃ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರೇ ಹೇಳುತ್ತಿದ್ದರು. ಆದರೆ ಧರ್ಮ ಸಂಸತ್ ನಲ್ಲಿನ ಭಾಷಣಗಳನ್ನು ಕೇಳಿದರೆ ಬೇರೆ ಸಂದೇಶ ರವಾನೆ ಮಾಡುತ್ತಿರುವಂತಿದೆ.

ಮಸೀದಿ ವಹಿಸಿಕೊಳ್ಳಲಿ ನೋಡೋಣ
ಹಿಂದೂ ದೇವಾಲಯಗಳ ಆದಾಯದ ಹಣವನ್ನು, ನಿರ್ವಹಣೆಯನ್ನು ಸರಕಾರ ಏಕೆ ವಹಿಸಿಕೊಳ್ಳಬೇಕು? ಯಾವುದಾದರೂ ಒಂದು ಮಸೀದಿ ಅಥವಾ ಚರ್ಚ್ ಅನ್ನು ಹಾಗೆ ವಹಿಸಿಕೊಳ್ಳಲಿ ನೋಡೋಣ ಎಂದು ಪ್ರವೀಣ್ ಭಾಯ್ ತೊಗಾಡಿಯಾ ಅವರು ಸವಾಲು ಹಾಕಿದ್ದಾರೆ. ಇನ್ನು ಗೋಹತ್ಯೆ ನಿಷೇಧ ಜಾರಿಗೆ ಕಾರ್ಯತಂತ್ರ ರೂಪಿಸಬೇಕು ಎಂದಿದ್ದಾರೆ.

ಧರ್ಮದ ಹೆಸರಲ್ಲಿ ಉಪಟಳ ನೀಡುವವರಿಂದ ಹಿಂದೂ ಧರ್ಮಕ್ಕೆ ಅಪಾಯ
ಧರ್ಮದ ಹೆಸರಲ್ಲಿ ಅನೈತಿಕ ಪೊಲೀಸ್ ಗಿರಿ ಮಾಡುವವರು, ಗೋ ರಕ್ಷಣೆ ಹೆಸರಲ್ಲಿ ಹಲ್ಲೆ-ಹತ್ಯೆ ಮಾಡುವವರನ್ನು ನಿಯಂತ್ರಿಸ ಬೇಕಿದೆ. ಧರ್ಮದ ಹೆಸರಲ್ಲಿ ಉಪಟಳ ನೀಡುವವರಿಂದಲೇ ಹಿಂದೂ ಧರ್ಮಕ್ಕೆ ಆತಂಕ ಎಂದು ಇದೇ ವೇದಿಕೆಯಿಂದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

ನಂಬಿಕೆ-ಕಾನೂನು ಎಂಬ ಎರಡು ವಿರುದ್ಧ ದಿಕ್ಕು
ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮುಗಿದಿದೆ. ಅದರ ಜತೆಗೆ ಎಡೆ ಮಡೆ ಸ್ನಾನ ಕೂಡ ಮುಗಿದಿದೆ. ದೇಶ- ವಿದೇಶಗಳಿಂದಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ.











Click it and Unblock the Notifications