ಮೈಸೂರು ಜಿಲ್ಲಾಡಳಿತದಿಂದ ಚುನಾವಣೆಗೆ ವಾರ್ಮ್ ವೆಲಕಮ್
ಮೈಸೂರು, ಮಾರ್ಚ್ 28 : ಚುನಾವಣಾ ಆಯೋಗ ಮೇ 12ಕ್ಕೆ ಚುನಾವಣೆಯನ್ನು ನಿಗದಿಗೊಳಿಸಿದ್ದು, ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳಲ್ಲಿ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿಯೂ ಸಿದ್ಧತೆ ಮಾಡಿ ಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಮೈಸೂರು ನಗರ, ಗ್ರಾಮಾಂತರ ಪ್ರದೇಶದಲ್ಲಿ ಯಾವುದೇ ಗುದ್ದಲೀಪೂಜೆ, ಸರ್ಕಾರಿ ಕಾರ್ಯಕ್ರಮ ನಡೆಸದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ವಿವಿಧ ನಿಗಮ ಮಂಡಳಿ ಅಧ್ಯಕ್ಷರು ಬಳಸುವ ಕಾರುಗಳನ್ನು ಆಯೋಗದ ವಶಕ್ಕೆ ಒಪ್ಪಿಸುವಂತೆಯೂ ತಿಳಿಸಲಾಗಿದೆ ಎಂದರು.
ಚುನಾವಣೆ ದಿನಾಂಕ ಕರ್ನಾಟಕದ ಭವಿಷ್ಯ ಸೂಚಿಸಿದೆ: ಜ್ಯೋತಿಷಿ ಅಮ್ಮಣ್ಣಾಯ
ಸರಕಾರಿ ಕಟ್ಟಡಗಳು, ಬೋರ್ಡ್ಗಳಲ್ಲಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಒಳಪಡುವ ಗೋಡೆ ಬರಹಗಳು, ಪೋಸ್ಟರ್ಗಳು, ಬ್ಯಾನರ್, ಕಟೌಟ್, ಹೋಲ್ಡಿಂಗ್ಸ್ ತೆರವುಗೊಳಿಸಲಾಗುವುದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಇತರೆ ವ್ಯಕ್ತಿಗಳು ಸರಕಾರಿ ವಾಹನಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಸಂಬಂಧಪಟ್ಟ ಕಚೇರಿ ಮುಖ್ಯಸ್ಥರು ಈ ಸರಕಾರಿ ವಾಹನಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಲಾಗಿದೆ. ರಾಜ್ಯ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಮೈಸೂರು ಜಿಲ್ಲೆಯಲ್ಲಿಯೂ ನೀತಿ ಸಂಹಿತೆ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿ ತಿಳಿಸಿದರು.
ಶೀಘ್ರ ಹೆಲ್ಪ್ ಲೈನ್ ಆರಂಭ
ಚುನಾವಣಾ ವೇಳಾಪಟ್ಟಿ ಪ್ರಕಟವಾದ ತಕ್ಷಣದಿಂದ ಸರಕಾರಿ ಹಣದಿಂದ ಯಾವುದೇ ಜಾಹೀರಾತುಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ಸರಕಾರಿ ವೆಬ್ಸೈಟ್ನಲ್ಲಿ ರಾಜಕೀಯ ವ್ಯಕ್ತಿಗಳು, ಮಂತ್ರಿಗಳ ಭಾವಚಿತ್ರವಿರುವುದನ್ನು ನಿಷೇಧಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವ ಕಾರಣ ಸರಕಾರಿ ಜಾಹೀರಾತು ಫಲಕಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಮೈಸೂರು ಜಿಲ್ಲೆಯಲ್ಲಿ 210 ತಂಡಗಳನ್ನು ರಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸುವುದಕ್ಕೆ ಸಂಬಂಧಪಟ್ಟಂತೆ ಚುನಾವಣಾ ಆಯೋಗಕ್ಕೆ ಕೆಲವು ವಿವರಗಳನ್ನು ಕೋರಿದ್ದೇವೆ. ಸರಕಾರಿ ಹಣದಿಂದ ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪ್ರಚಾರ ನಡೆಸಬಾರದು. ಚುನಾವಣೆಗೆ ಸಂಬಂಧಪಟ್ಟ ಸಾರ್ವಜನಿಕರ ದೂರುಗಳನ್ನು ದಾಖಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಲ್ಪ್ ಲೈನ್ ಆರಂಭಿಸಲಾಗುವುದು ಎಂದರು.
ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?
ಮಹಿಳೆಯರಿಗೆ ಮತಗಟ್ಟೆ ತರಬೇತಿ
ಈ ಬಾರಿ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಿ ಪರೀಕ್ಷೆ ಮಾಡಿ ಸರ್ಟಿಫಿಕೇಟುಗಳನ್ನು ನೀಡಲಾಗಿದೆ. ಮೈಸೂರು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾವುದಾದರೂ ಒಂದು ಮತಗಟ್ಟೆಯನ್ನು ಮಹಿಳಾ ಮತಗಟ್ಟೆಯನ್ನಾಗಿ ರೂಪಿಸಲಾಗುವುದು. ಅಂದರೆ, ಈ ಮತಗಟ್ಟೆಯನ್ನು ಮಹಿಳಾ ಚುನಾವಣಾ ಸಿಬ್ಬಂದಿಯೇ ನಿರ್ವಹಿಸುತ್ತಾರೆ. ಮತದಾರರ ಪಟ್ಟಿಯಲ್ಲಿ ಪುರುಷ, ಮಹಿಳೆ ಇಬ್ಬರೂ ಇರುತ್ತಾರೆ. ಆದರೆ, ಮತಗಟ್ಟೆಯನ್ನು ಮಹಿಳಾ ಚುನಾವಣಾ ಸಿಬ್ಬಂದಿ ನಿರ್ವಹಿಸುತ್ತಾರೆ. ಇಂತಹ 11 ಮತಗಟ್ಟೆಗಳು ಜಿಲ್ಲೆಯಲ್ಲಿ ಇರಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಸುಮಾರು 20 ಸಾವಿರ ವಿಶೇಷ ಚೇತನರಿದ್ದಾರೆ. ಎಲ್ಲ ವಿಶೇಷ ಚೇತನರಿಗೂ ಮತ ಚಲಾಯಿಸಲು ಮತ್ತೊಬ್ಬರ ನೆರವಿನ ಅವಶ್ಯಕತೆ ಇಲ್ಲ. ಕೆಲವರಿಗೆ ಮತ ಚಲಾಯಿಸಲು ಮತ್ತೊಬ್ಬರ ನೆರವಿನ ಅಗತ್ಯವಿದೆ. ಇಂತಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ, ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೊದಲ ಬಾರಿಗೆ ಅಭ್ಯರ್ಥಿಗಳ ಭಾವಚಿತ್ರ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಬ್ಯಾಲೆಟ್ ಯೂನಿಟ್) ಕ್ರಮ ಸಂಖ್ಯೆ, ಅಭ್ಯರ್ಥಿಗಳ ಹೆಸರು, ಚಿಹ್ನೆಯೊಂದಿಗೆ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಭಾವಚಿತ್ರವಿರಲಿದೆ. ಪ್ರತಿ ಮತಗಟ್ಟೆಗಳಿಗೆ ಒಬ್ಬರು ಅಧ್ಯಕ್ಷಾಧಿಕಾರಿ, ನಾಲ್ವರು ಮತಗಟ್ಟೆ ಅಧಿಕಾರಿಗಳು ಇರುತ್ತಾರೆ. ಕೇಂದ್ರ ಸರಕಾರದ ಸಿಬ್ಬಂದಿಯನ್ನು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನಾಗಿ ನೇಮಿಸಲಾಗುವುದು. ಮತಗಟ್ಟೆಗಳಿಗೆ ಒಟ್ಟು 17,160 ಅಧಿಕಾರಿ, ಸಿಬ್ಬಂದಿ ನೇಮಿಸಲಾಗುವುದು ಎಂದು ತಿಳಿಸಿದರು.
ಮತಗಟ್ಟೆಗಳಿಗೆ ಅಗತ್ಯ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ರಾರಯಂಪ್ ವ್ಯವಸ್ಥೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ಗಳನ್ನು ಪೂರೈಸಲಾಗುವುದು.
ಮೈಸೂರಿನ ಒಟ್ಟು ಮತದಾರರು ಸಂಖ್ಯೆ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು 2,89,111 ಮತದಾರರಿದ್ದಾರೆ. ಪಿರಿಯಾಪಟ್ಟಣದಲ್ಲಿ ಅತಿ ಕಡಿಮೆ 1,77,023 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,860 ಮತಗಟ್ಟೆಗಳಿವೆ. ಇದರಲ್ಲಿ 173 ಮತಗಟ್ಟೆಗಳು ಆಕ್ಸಿಲರಿ ಮತಗಟ್ಟೆಗಳಾಗಿವೆ. ಚಾಮುಂಡೇಶ್ವರಿಯಲ್ಲಿ ಅತಿ ಹೆಚ್ಚು 335, ತಿ.ನರಸೀಪುರದಲ್ಲಿ ಅತಿ ಕಡಿಮೆ 222 ಮತಗಟ್ಟೆಗಳಿವೆ.
ಪಿರಿಯಾಪಟ್ಟಣ 1,77,023 ಕೆ.ಆರ್.ನಗರ 2,01,189 ಹುಣಸೂರು 2,21,300, ಎಚ್.ಡಿ.ಕೋಟೆ (ಪರಿಶಿಷ್ಟ ಪಂಗಡ-ಮೀಸಲು) 2,09,502, ನಂಜನಗೂಡು (ಪರಿಶಿಷ್ಟ ಜಾತಿ-ಮೀಸಲು) 2,03,279, ಚಾಮುಂಡೇಶ್ವರಿ 2,89,111, ಕೃಷ್ಣರಾಜ 2,39,192, ಚಾಮರಾಜ 2,28,483, ನರಸಿಂಹರಾಜ 2,53,051, ವರುಣಾ 2,13,809, ತಿ.ನರಸೀಪುರ (ಪರಿಶಿಷ್ಟ ಜಾತಿ-ಮೀಸಲು) 1,96,399, ಒಟ್ಟು 11 ವಿಧಾನಸಭಾ ಕ್ಷೇತ್ರದಲ್ಲಿ 24,32,338 ಮತದಾರರಿದ್ದಾರೆ.