ರಿಯಲ್ ಎಸ್ಟೇಟ್ ಉದ್ಯಮಿ ರಾಮದಾಸ್ ಪರಿಚಯ
ಮೈಸೂರು, ಫೆ. 13: ಮಹಿಳೆಯ ಸಂಗಕ್ಕೆ ಸಿಲುಕಿ ಪರಿತಪಿಸುತ್ತಿರುವ ಬಿಜೆಪಿ ಮಾಜಿ ಸಚಿವ ಎಸ್ ಎ ರಾಮದಾಸ್ ಕಿರುಪರಿಚಯ ಇಲ್ಲಿದೆ.
ಜನನ 1959ರ ನವೆಂಬರ್ 4ರಂದು. ಎಸ್ ಎ ರಾಮದಾಸ್ ಎಂಬ ವ್ಯಕ್ತಿ ಈಗ್ಗೆ 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಣ್ಣಪುಟ್ಟ ಡೀಲುಗಳನ್ನು ಮಾಡಿಕೊಂಡಿದ್ದವರು. ಕಾಲಾಂತರದಲ್ಲಿ ಬಿಜೆಪಿ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದವರು. ಆ ವೇಳೆ ಹಿಂದೂ ಸಂಘಟನೆಗಳು, ಆರ್ ಎಸ್ಎಸ್, ಬಿಜೆಪಿ ಜತೆ ಢಾಳಾಗಿ ಗುರುತಿಸಿಕೊಂಡರು.

ಎರಡ್ಮೂರು ಬಾರಿ ಮೈಸೂರು ಪಾಲಿಕೆಗೆ ಸ್ಪರ್ಧಿಸಿ, ಸೋತವರು. ಮುಂದೆ ಸೋಲನ್ನೇ ಗೆಲುವಿಗೆ ಸೋಪಾನವಾಗಿಸಿಕೊಂಡು ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿಬಂದವರು.
1994 ಮತ್ತು 1999ರಲ್ಲಿ ಬಿಜೆಪಿ ಟಿಕೆಟ್ ಮೇಲೆ ಗೆದ್ದು ಶಾಸಕರಾದರು. ಮುಂದೆ, 2004ರಲ್ಲಿ ಕಾಂಗ್ರೆಸ್ಸಿನ ಎಂಕೆ ಸೋಮಶೇಖರ್ ವಿರುದ್ಧ ಸೋತರು. 2008ರಲ್ಲಿ ಇದೇ ಸೋಮಶೇಖರ್ ವಿರುದ್ಧ ಭಾರಿ ಅಂತರದಿಂದ ಗೆದ್ದವರು. 2010 ವೇಳೆಗೆ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೃಪಾಕಟಾಕ್ಷ ಸಂಪಾದಿಸಿದರು. ಅವರಿಗೆ ರಾಜಕೀಯ ಕಾರ್ಯದರ್ಶಿಯಾದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದರು, ಪಕ್ಷದ ವಕ್ತಾರರೂ ಆದರು. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದವರು ಮುಂದೆ ಸದಾನಂದ ಗೌಡರ ಸಂಪುಟದಲ್ಲೂ ಸಚಿವರಾಗಿಯೇ ಮುಂದುವರಿದರು. ಆದರೆ ಆ ವೇಳೆಗೆ ರಾಜಕೀಯ ಗುರು ಯಡಿಯೂರಪ್ಪ ಅವರ ವಿರುದ್ಧವೇ ತಿರುಗಿಬೀಳುವಷ್ಟು ಛಾತಿ ಬೆಳೆಸಿಕೊಂಡರು. ಮಧ್ಯೆ ಆಸರೆ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಕಟ್ಟಿಬೆಳೆಸಿದರು.
ಆದರೆ 2013ರ ಚುನಾವಣೆ ವೇಳೆಗೆ ಭೂಹಗರಣಗಳಲ್ಲಿ ಸಿಲುಕಿದ್ದರು. ಸಚಿವರಾಗಿ ಆಸ್ಪತ್ರೆಗಳಿಗೆ ದಿಢೀರ್ ದಾಳಿಯಿಡುವುದು ಟೀಕೆಗೆ ಗುರಿಯಾಗಿತ್ತು. ಮುಖ್ಯವಾಗಿ ಯಡಿಯೂರಪ್ಪ ಜತೆಗಿನ ನಿಷ್ಠೆ ಬದಲಾಗಿತ್ತು. ಪಕ್ಷದ ಕಾರ್ಯಕರ್ತರೂ ತಿರುಗಿಬಿದ್ದರು. ಹಾಗಾಗಿ ರಾಮದಾಸ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮತ್ತದೇ ಎಂಕೆ ಸೋಮಶೇಖರ್ ವಿರುದ್ಧ ಹೀನಾಯವಾಗಿ ಸೋತರು.












Click it and Unblock the Notifications