ಮೋದಿ ಬಗ್ಗೆ ಅವಹೇಳನ, ವಾಟ್ಸಪ್ ಗ್ರೂಪ್ ಅಡ್ಮಿನ್ ಅಂದರ್
ಮುರ್ಡೇಶ್ವರ, ಮೇ 02: ಯಾರೇ ವಾಟ್ಸಪ್, ಫೇಸ್ ಬುಕ್ ಗ್ರೂಪ್ ಗಳಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಪ್ರಕಟಿಸಿದರೆ ಗ್ರೂಪ್ ಅಡ್ಮಿನ್ ವಿರುದ್ಧ ಕ್ರಮ ಎಂಬ ಕಾನೂನು ಜಾರಿಗೆ ಬಂದ ಕೆಲ ದಿನಗಳಲ್ಲೇ ವಾಟ್ಸಪ್ ಅಡ್ಮಿನ್ ರೊಬ್ಬರನ್ನು ಜೈಲಿಗೆ ಕಳುಹಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾಟ್ಸಪ್ ನಲ್ಲಿ ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರ ಠಾಣೆ ಪೊಲೀಸರು ವಾಟ್ಸಪ್ ಗ್ರೂಪ್ ವೊಂದರ ಅಡ್ಮಿನ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮುರ್ಡೇಶ್ವರದ ಬೈಲೂರು ವ್ಯಾಪ್ತಿಯ ದೊಡ್ಡಬಲ್ಸೆ ನಿವಾಸಿ ಕೃಷ್ಣ ಸಣ್ಣತಮ್ಮ ನಾಯ್ಕ(30) ಬಂಧಿತ ಆರೋಪಿ. ರಿಕ್ಷಾ ಚಾಲಕನಾಗಿದ್ದ ಈತ 'ಡಿ ಬಲ್ಸೆ ಬಾಯ್ಸ್' ಎಂಬ ವಾಟ್ಸ್ ಅಪ್ ಗ್ರೂಪ್ ನ ಅಡ್ಮಿನ್ ಆಗಿದ್ದ.
ಈ ಗ್ರೂಪ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತಿರುಚಿ ಅಶ್ಲೀಲಗೊಳಿಸಿ ಅವಹೇಳನ ಮಾಡಿದ್ದ ಫೋಟೋವೊಂದು ಹರಿದಾಡಿತ್ತು.[ಬಸ್ಸಿನಲ್ಲಿ 1.30 ಕೋಟಿ ರು ಸಾಗಿಸುತ್ತಿದ್ದ ಮೂವರು ಮಹಿಳೆಯರ ಬಂಧನ]
ಈ ಸಂಬಂಧ ಆನಂದ ಮಂಜುನಾಥ ನಾಯ್ಕ ಎಂಬುವರು ಮುರಡೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಗಣೇಶ ನಾಯ್ಕ ಎಂಬಾತನನ್ನೂ ಪೊಲೀಸರು ಬಂಧಿಸಿದ್ದು ಆತನಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಬಾಲಕೃಷ್ಣ ನಾಯ್ಕ ಎಂಬಾತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications