ಚಾಮರಾಜನಗರದಲ್ಲಿ ಸಿನಿಮೀಯ ರೀತಿಯಲ್ಲಿ ಕೊಲೆ ಯತ್ನ
ಚಾಮರಾಜನಗರ, ಜುಲೈ 14 : ಹಾಡುಹಗಲೇ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಲು ಯತ್ನಿಸಿದ ಘಟನೆ ಚಾಮರಾಜನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ನಡೆದಿದೆ. ಕೊಲೆಯ ಸಂಚು ರೂಪಿಸಿ, ಕೊಲೆ ಯತ್ನ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಂಗ ಬಂಧನದಿಂದ ಹೊರಬಂದ ಸುಲ್ತಾನ್ ಬತೇರಿ ಮೂಲದ ಜೋಷ್ ಎಂಬಾತನ ಕೊಲೆಗೆ ಸಂಚು ರೂಪಿಸಲಾಗಿತ್ತು. ಸಂಚು ರೂಪಿಸಿದವರು ಕೇರಳದ ಟೋಯೋಟೋ ಇಟಿಯೋಸ್ ಮತ್ತು ಕರ್ನಾಟಕದ ನೋಂದಣಿ ಸಂಖ್ಯೆ ಹೊಂದಿರುವ ಇನ್ನೋವಾ ಕಾರಿನಲ್ಲಿ ಬಂದಿದ್ದರು. [ಇನ್ಫೋಸಿಸ್ ಟೆಕ್ಕಿ ಸ್ವಾತಿ ಕೊಂದವನ ಆತ್ಮಹತ್ಯೆ ಹೈಡ್ರಾಮ]

ಜೋಷ್ 2013ರಲ್ಲಿ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ 11 ಜನರು ಭಾಗಿಯಾಗಿದ್ದರು ಎಂಬ ಆರೋಪವಿದ್ದು, 7 ಜನರು ಜಾಮೀನು ಪಡೆದಿದ್ದರು. ಆದರೆ, ಮತ್ತೊಂದು ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು. [ಕರಾಚಿಯಲ್ಲಿ ಖವ್ವಾಲಿ ಗಾಯಕ ಅಮ್ಜದ್ ಸಬ್ರಿ ಕಗ್ಗೊಲೆ]
ಘಟನೆಯ ವಿವರ : ಮಂಗಳವಾರ ಚಾಮರಾಜನಗರ ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು. ಪತಿ ಜೋಷ್ ಕರೆದುಕೊಂಡು ಹೋಗಲು ಆತನ ಪತ್ನಿ ಝಾನ್ಸಿ ಮಾರುತಿ ಶಿಫ್ಟ್ ಕಾರಿನಲ್ಲಿ ಬಂದಿದ್ದಳು. ಜಾಮೀನು ನೀಡಿದ ಸುರೇಶ್ ಹಾಗೂ ಮರಿಯಯ್ಯ ಜೊತೆ ಕಾರಾಗೃಹದಿಂದ ಪತಿ ಹೊರಬರುವುದನ್ನೇ ಆಕೆ ಕಾಯುತ್ತಿದ್ದಳು. ಜೋಷ್ ಹೊರಬಂದು ಕಾರಿನಲ್ಲಿ ಹೊರಟ ಬಳಿಕ ಆರೋಪಿಗಳು ಅವರನ್ನು ಹಿಂಬಾಲಿಸಿದ್ದಾರೆ. [ಚಾಮರಾಜನಗರ SP ಕುಲದೀಪ್ ಕುಮಾರ್ ಜೈನ್ ಸಂದರ್ಶನ]
ಕಾರಾಗೃಹದಿಂದ ಹೊರಬಂದು ಮುಂದೆ ಹೋಗುತ್ತಿದ್ದಂತೆ ಹತ್ಯೆ ಮಾಡಲು ಹೊಂಚು ಹಾಕುತ್ತಿರಬಹುದೆಂಬ ಅಂಶವನ್ನು ಅರಿತ ಜೋಷ್ ಕಾರಿನ ಚಾಲಕ ಯೂಸೂಫ್ ದಾರಿತಪ್ಪಿಸಿ ರಾಮಸಮುದ್ರವರೆಗೂ ತಲುಪಿದ. ನಂತರ ಜೋಡಿರಸ್ತೆಯ ಅದೇ ಮಾರ್ಗವಾಗಿ ಬರುತ್ತಿದ್ದ ವೇಳೆಯಲ್ಲಿ ಸಮೀಪದಲ್ಲಿದ್ದ ಪೋಲೀಸ್ ಉಪ ಅಧೀಕ್ಷಕರ ಕಚೇರಿಗೆ ಏಕಾಏಕಿ ವಾಹನ ನುಗ್ಗಿಸಿದ್ದಾನೆ. [ಆಷಾಢದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವದ ಬಗ್ಗೆ ತಿಳಿಯಿರಿ]
ಆ ವೇಳೆ ಹಿಂಬಾಲಿಸಿಕೊಂಡು ಬಂದ ಎರಡು ವಾಹನದವರು ಆತಂಕಗೊಂಡಿದ್ದು, ಯಾರಿಗೂ ಸಿಗದೆ ಪರಾರಿಯಾಗಲು ಯತ್ನಿಸಿದರು.
ಜೋಡಿರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಶಿಫ್ಟ್ ಕಾರು, ಟೋಯೋಟೋ ಇಟಿಯೋಸ್, ಇನ್ನೋವಾ ಮೂರೂ ವಾಹನಗಳು ಸಿನಿಮಾ ಮಾದರಿಯಲ್ಲಿ ಒಂದರ ಹಿಂದೆ ಒಂದರಂತೆ ಅತಿ ವೇಗದಲ್ಲಿ ಬಂದಿದ್ದು ನೋಡಿ ಜನರು ಗಾಬರಿಗೊಂಡಿದ್ದಾರೆ.
ನಂತರ ಜನರ ಸಹಕಾರದಿಂದ ಇಬ್ಬರನ್ನು ಸರೆ ಹಿಡಿಯಲಾಗಿದೆ. ಡಿವೈಎಸ್ಪಿ ಗಂಗಾಧರಸ್ವಾಮಿ ಅವರು ಘಟನೆಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದರು. ಜೋಷ್ ಹಿಂದಿನ ಹಾಗೂ ಹಾಲಿ ಪ್ರಕರಣಗಳ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಪಟ್ಟಣ ಠಾಣಾ ಇನ್ಸ್ಪೆಕ್ಟರ್ ಅವರಿಗೆ ಸೂಚಿಸಿದ್ದಾರೆ.












Click it and Unblock the Notifications