ಮಲ್ಲಿಕಾರ್ಜುನ್ ಖರ್ಗೆ ಮೈ ಬಣ್ಣ ಬಗ್ಗೆ ಆರಗ ಜ್ಞಾನೇಂದ್ರ ವ್ಯಂಗ್ಯ : ಮುಖ್ಯಮಂತ್ರಿ ಚಂದ್ರು ಕಿಡಿ
ಬೆಂಗಳೂರು, ಆಗಸ್ಟ್ 03: ರಾಷ್ಟ್ರದ ದಲಿತ ನಾಯಕ ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರ ದೇಹದ ಬಣ್ಣ, ರೂಪು, ಮುಖಭಾವಗಳ ಬಗ್ಗೆ ವ್ಯಂಗ್ಯ ಮಾಡಿರುವ ಅರಗ ಜ್ಞಾನೇಂದ್ರ ಮಾತುಗಳು ದುಃಖದ ಹಾಗೂ ಸಹಿಸದ ವಿಚಾರ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.
ಕುಲ ಕುಲವೆಂದು ಹೊಡೆದಾಡಬೇಡಿ ಎಂಬ ಕನಕದಾಸರ ನುಡಿಯಂತೆ ನಾವೆಲ್ಲರೂ ದೇಶದ ಅಸ್ಪೃಶ್ಯತೆಯನ್ನು ನಿವಾರಿಸುವ, ತೊಡೆದು ಹಾಕುವ , ಸರ್ವರಿಗೂ ಸಮಪಾಲು - ಸಮ ಬಾಳನ್ನು ನೀಡುವ ಕಾಲಘಟ್ಟದಲ್ಲಿ ಇರುವಾಗ, ಮನಸ್ಮೃತಿಯ ಹರಿಕಾರರಂತೆ ಅರಗ ಜ್ಞಾನೇಂದ್ರ ಹೇಳಿಕೆ ಇವರ ಸಂಸ್ಕೃತಿಯನ್ನು ತೋರಿಸುತ್ತದೆ. ನಮ್ಮ ಸಂವಿಧಾನಕ್ಕೆ , ರಾಷ್ಟ್ರದ ದಲಿತ ಸಮುದಾಯಗಳಿಗೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ. ಯಾವುದೇ ಕಾರಣಕ್ಕೂ ಇವರ ಹೇಳಿಕೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಸರ್ಕಾರವು ಇವರ ಮೇಲೆ ಮೊಕದ್ದಮೆಯನ್ನು ಹಾಕಿ, ಇವರ ವಿರುದ್ಧ ಎಫ್ಐಆರ್ ಮಾಡಬೇಕಿದೆ. ಇವರ ಶಾಸಕತ್ವವನ್ನು ಅನೂರ್ಜಿತಗೊಳಿಸುವಂತಹ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಂಡಲ್ಲಿ ಮುಂದಿನ ದಿನಮಾನಗಳಲ್ಲಿ ಯಾರೂ ದಲಿತ ವರ್ಗಗಳನ್ನು ತುಚ್ಚವಾಗಿ ನೋಡುವುದು, ಮಾತನಾಡುವುದು ತಪ್ಪುತ್ತದೆ. ಸರ್ಕಾರ ಈ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬೇಕೆಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ಆರಗ ಜ್ಞಾನೇಂದ್ರ ಹೇಳಿದ್ದೇನು?
ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಶಿವಮೊಗ್ಗ ಜಿಲ್ಲೆಯ ಆರಗ ಜ್ಞಾನೇಂದ್ರ ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಆಗಸ್ಟ್ 1 ರಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬೀದರ್ನ ಜನರಿಗೆ ಮರಗಳು, ಗಿಡಗಳು ಅಥವಾ ನೆರಳಿನ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಅರಣ್ಯ ಸಚಿವರಿಗೆ ಪಶ್ಚಿಮ ಘಟ್ಟದ ಜನರ ಜೀವನಕ್ರಮ, ಗಿಡ- ಮರಗಳ ಕುರಿತು ತಿಳಿವಳಿಕೆ ಇಲ್ಲ. ಅವರಿಗೆ ಮಲೆನಾಡು ಜನರ ಜೀವನ ಅಥವಾ ಪಶ್ಚಿಮ ಘಟ್ಟಗಳ ಹತ್ತಿರ ಇರುವವರು ಎದುರಿಸುತ್ತಿರುವ ಸಮಸ್ಯೆಗಳು ತಿಳಿದಿಲ್ಲ. ಪಶ್ಚಿಮ ಘಟ್ಟಗಳ ಬಗ್ಗೆ ವರದಿ ನೀಡಿರುವ, ವಿಜ್ಞಾನಿ ಕಸ್ತೂರಿ ರಂಗನ್ ಪರಿಸರ ತಜ್ಞ ಅಲ್ಲ ಎಂದು ಕಿಡಿಕಾರಿದ್ದಾರೆ.
ಅವರಿಗೆ ಮರ - ಗಿಡದ ಬಗ್ಗೆ ಗೊತ್ತಿಲ್ಲ. ಮರದ ನೆರಳಿನ ಮಹತ್ವ ಗೊತ್ತಿಲ್ಲ. ಅಲ್ಲಿನವರು ನೆರಳನ್ನೇ ಕಂಡಿರೋದಿಲ್ಲ. ಆ ಪ್ರದೇಶದ ಜನರು ಸುಡುವ ಸೂರ್ಯನ ಕೆಳಗೆ ಸುಟ್ಟು ಕರಕಲಾದಂತೆ ಇರ್ತಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೇ ಗೊತ್ತಾಗೋದಿಲ್ವಾ...? ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ. ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಅವರಿಗೆ ಗೊತ್ತಿಲ್ಲ ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿಯೇ ಅವರ ಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.












Click it and Unblock the Notifications