ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಜನ ರೊಚ್ಚಿಗೇಳುತ್ತಾರೆ, ಕ್ರಾಂತಿಯಾಗತ್ತೆ: ರೇಣುಕಾಚಾರ್ಯ ಎಚ್ಚರಿಕೆ
ದಾವಣಗೆರೆ, ಡಿಸೆಂಬರ್ 16: ಮೈಸೂರಿನಲ್ಲಿ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮತಾಂಧ ಹಾಗೂ ಹಿಂದು ದೇವಾಲಯಗಳನ್ನ ದ್ವಂಸಗೊಳಿಸಿರುವ ಟಿಪ್ಪು ಸುಲ್ತಾನ್ ನ ಹೆಸರಿಡುವುದು ಯಾಕೆ, ಅದನ್ನು ಬಿಟ್ಟು ಮೈಸೂರು ಮಹಾರಾಜರ ಹೆಸರನ್ನ ನಾಮಕರಣ ಮಾಡಿ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಟಿಪ್ಪು ಸುಲ್ತಾನ್ ನ ಹೆಸರು ನಾಮಕರಣ ಮಾಡಿದರೆ ಜನರು ರೊಚ್ಚಿಗೇಳುತ್ತಾರೆ, ಕ್ರಾಂತಿಯಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಬದಲು ಮೈಸೂರು ಮಹಾರಾಜರ ಹೆಸರಿಡುವಂತೆ ಒತ್ತಾಯ ಮಾಡಿದ್ದಾರೆ. ಸರ್ಕಾರ ನಾಲ್ಕು ವಿಮಾನ ನಿಲ್ದಾಣಗಳ ನಾಮಕರಣಕ್ಕೆ ಮುಂದಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರು ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ನಾವು ಇದನ್ನ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಆದರೆ, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನ ಕೆಲವು ಮುಖಂಡರು ಟಿಪ್ಪು ಸುಕ್ತಾನ್ ಹೆಸರಿಡಲು ಮುಂದಾಗಿದ್ಧಾರೆ. ಮೈಸೂರು ಅಂದ್ರೆ ಮಹಾರಾಜರು ಆಳಿರುವ ನಾಡು, ಅದು ಪುಣ್ಯ ಭೂಮಿ. ಟಿಪ್ಪು ಒಬ್ಬ ಮತಾಂಧ, ದೇಶ ದ್ರೋಹಿ, ಹಿಂದು ದೇವಸ್ಥಾನಗಳನ್ನ ನಿರ್ನಾಮ ಮಾಡಿದ ವ್ಯಕ್ತಿ. ಆತನ ಹೆಸರಿಡಲು ಮುಂದಾದರೆ ರಾಜ್ಯದ ಜನರು ಸುಮ್ಮನಿರಲ್ಲ. ಸರ್ಕಾರದ ವಿರುದ್ದವೇ ಜನರು ರೊಚ್ಚಿಗೇಳುತ್ತಾರೆ, ಕ್ರಾಂತಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕೇವಲ ಮತಾಂಧರೇನಾ ನಿಮಗೆ ಕಣ್ಣಿಗೆ ಕಾಣೋದು..?, ಮಹಾರಾಜರ ಹೆಸರು ನಿಮಗೆ ಕಣ್ಣಿಗೆ ಕಾಣಲಿಲ್ವಾ..? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ನೀವು ಟಿಪ್ಪು ಹೆಸರಿಡಲು ಪ್ರಯತ್ನ ಮಾಡಿದರೆ ನಾವು ಸಹಿಸಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ರೇಣುಕಾಚಾರ್ಯ, ಮೈಸೂರು ಮಹಾರಾಜರ ಹೆಸರಿಟ್ಟರೆ ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಟಿಪ್ಪು ಸುಲ್ತಾನ್ ಭಾರತ ದೇಶದ ಒಬ್ಬ ಖಳ ನಾಯಕ: ಮುನಿಸ್ವಾಮಿ
ಟಿಪ್ಪು ಸುಲ್ತಾನ್ ಭಾರತ ದೇಶದ ಒಬ್ಬ ಖಳ ನಾಯಕ. ಹಿಂದೂಸ್ಥಾನ್ ಹೆಸರಿರುವ ಭಾರತಕ್ಕೆ ಮತಾಂತರ ಮಾಡಿ ಸಾವಿರಾರು ಜನರನ್ನ ಬಲಿ ಪಡೆದವನು. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಮ್ಮ ವಿರೋಧವಿದೆ ಎಂದು ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ ಅವರು, ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ಅಪರಿಚಿತರನ್ನು ಸೆರೆಹಿಡಿದ ಬಗ್ಗೆ ವಿವರಿಸಿದರು. ಇನ್ನು ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಹಿಸದೆ ಕೆಲವರು ಪಿತೂರಿ ನಡೆಸಿದ್ದಾರೆ. ನರೇಂದ್ರ ಮೋದಿಯವರು ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಮೂರನೇ ಬಾರಿ ಪ್ರಧಾನಿಯಾಗ್ತಾರೆ ಅಂತ ಹಲವು ರಾಜ್ಯಗಳು ಭಾಗಿಯಾಗಿ ಈ ರೀತಿ ಮಾಡಿದ್ದಾರೆ. ಘಟನೆ ಆಕಸ್ಮಿಕವಾಗಿ ಕ್ಷಣಾರ್ಧದಲ್ಲಿ ಆದ ಕಾರಣ ಹಲವಾರು ಸಂಸದರು ಭಯಭೀತರಾಗಿ ಓಡಿಹೋಗಲು ಯತ್ನಿಸಿದರು. ಒಂದು ವೇಳೆ ಅಲ್ಲಿದ್ದ ಸೇನಾ ಸಿಬ್ಬಂದಿ ಅವರನ್ನು ಶೂಟೌಟ್ ಮಾಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕ್ರಮಕ್ಕೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪಿಎಂ? ಹೋಮ್ ಮಿನಿಸ್ಟರಾ? ಇಲ್ಲಾ ತನಿಖಾಧಿಕಾರಿಯ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದಲ್ಲಿರುವ ಅನೇಕರು ಚೀನಾಗೆ, ಪಾಕಿಸ್ತಾನಕ್ಕೆ ನಮ್ಮ ದೇಶದ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಎಷ್ಟೋ ಕಿಲೋ ಮೀಟರ್ ರಸ್ತೆಯನ್ನ ಪಾಕಿಸ್ತಾನ, ಚೀನಾಗೆ ಬಿಟ್ಟುಕೊಟ್ರು. ಅಲ್ಲದೆ ವಿಧಾನಸೌಧಕ್ಕೆ ಕೂಡ ಅಪರಿಚಿತ ವ್ಯಕ್ತಿ ನುಗ್ಗಿದ್ದ. ಅವರ ಮೇಲೆ ಏನು ಕ್ರಮ ತೆಗೆದುಕೊಂಡ್ರು. ನಿಮ್ಮದೆ ಸರ್ಕಾರ, ನೀವೇ ಸಿಎಂ ಆಗಿದ್ರಿ ನೀವೇನ್ ರಾಜೀನಾಮೆ ಕೊಟ್ರಾ? ಎಂದು ಪ್ರಶ್ನಿಸಿದ್ರು.












Click it and Unblock the Notifications