ಗೆಲ್ತೀವಿ ಅನ್ನೋ ಆತ್ಮಸ್ಥೈರ್ಯ, ವಿಶ್ವಾಸ ಬಿಜೆಪಿಗೆ ಇಲ್ಲ: ಪ್ರಜ್ವಲ್ ರೇವಣ್ಣ
ಕೋಲಾರ,ಜನವರಿ17: ಗೆಲ್ತೀವಿ ಅನ್ನೋ ಆತ್ಮಸ್ಥೈರ್ಯ,ವಿಶ್ವಾಸ ಬಿಜೆಪಿಗೆ ಇಲ್ಲ. ಯಾರು ಗೆಲ್ಲುತ್ತಾರೆ ನೋಡೋಣ ಎಷ್ಟು ಕೋಟಿ ಕೊಡಬೇಕು ಎನ್ನುವ ಡೀಲ್ಗೆ ಅವರು ಮುಂದಾಗಿದ್ದಾರೆ ಎಂದು ಸಿ.ಪಿ ಯೋಗೇಶ್ವರ್ ಆಡಿಯೋ ಕುರಿತು ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ, ನಾನೂ ಗೆಲ್ಲುವುದಿಲ್ಲ ಎಚ್.ಡಿ.ಕುಮಾರಸ್ವಾಮಿ ಗೆದ್ದಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಗೆಲ್ಲೋದಿಲ್ಲ ಮತ್ತೊಮ್ಮೆ ಕೋಟಿ ಕೋಟಿ ಹಣ ನೀಡಿ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುವುದಾಗಿಯೂ ಯಾವ ಬಾಯಲ್ಲಿ ಹೇಳಿದ್ದಾರೋ. ಆದರೆ ಈ ಬಾರಿ ಅದ್ಯಾವುದೂ ನಡೆಯುವುದಿಲ್ಲ. ರೈತರು, ಸಾರ್ವಜನಿಕರು ಮೂರೂವರೆ ವರ್ಷದ ಬಿಜೆಪಿ ಸರಕಾರ ನೋಡಿದ್ದಾರೆ ಎಂದು ಸಿ ಪಿ ಯೋಗೇಶ್ವರ್ ವಿರುದ್ದ ಕಿಡಿಕಾರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ನ ಕೆಲವು ಸ್ಥಳೀಯ ನಾಯಕರು ಕೋಲಾರಕ್ಕೆ ಕರೆತಂದು ಹರಕೆಯ ಕುರಿಯಾಗಿ ಮಾಡಲು ಹೊರಟಿದ್ದಾರೆ. ಕೋಲಾರದ ಜನ ಬುದ್ದಿವಂತರು ಅವರಿಗೆ ತಕ್ಕಪಾಠ ಕಲಿಸಿ ವಾಪಸ್ಸು ಕಳುಹಿಸಿಕೊಡಲಿದ್ದಾರೆ. ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ. ಆದರೆ ಅವರ ಪಕ್ಷದ ಕೆಲವು ನಾಯಕರೇ ಕೋಲಾರಕ್ಕೆ ಕರೆತಂದು ಹರಕೆಯ ಕುರಿ ಮಾಡುತ್ತಿರುವುದು ವಾಸ್ತವದ ಸಂಗತಿ ಎಂದರು.

ಮಾಜಿ ಮುಖ್ಯಮಂತ್ರಿಯನ್ನು ಕರೆದುಕೊಂಡು ಬಂದು ಇಲ್ಲಿನ ಕೆಲವು ರಾಜಕಾರಣಿಗಳು ಬಲಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿದೆ , ಸಿದ್ದರಾಮಯ್ಯ ಒಬ್ಬ ಹಿರಿಯ ನಾಯಕರು, ಮಾರ್ಗದರ್ಶನ ಕೊಡುವವರಿಗೆ ನಾವು ಮೊದಲಿನಿಂದಲೂ ಗೌರವ ನೀಡುತ್ತಾ ಬಂದಿರುವುದು ನಮ್ಮ ಸಂಪ್ರದಾಯ. ಸಿದ್ದರಾಮಯ್ಯ ಗೆಲ್ಲಬೇಕು, ಸೋಲಬೇಕು ಎನ್ನುವ ವಿಚಾರ ನಮ್ಮ ಬಳಿ ಇಲ್ಲ. ಆದರೆ, ಅವರದ್ದೇ ಪಕ್ಷದ ಕೆಲವು ನಾಯಕರು ಕೋಲಾರಕ್ಕೆ ಕರೆ ತಂದು ಹರಕೆಯ ಕುರಿ ಮಾಡಲು ನಿಂತಿದ್ದಾರೆ ಎನ್ನುವುದು ವಾಸ್ತವಾಂಶವಾಗಿದೆ .
ಬಿಜೆಪಿ ಯವರು ಡಬಲ್ ಎಂಜಿನ್ ಸರಕಾರ ಎಂದು ಹೇಳಿ ಏನು ಮಾಡಿದ್ದಾರೆ. ಜಿಎಸ್ಟಿಯಲ್ಲಿ ನಮ್ಮ ಪಾಲಿನ ಹಣವನ್ನು ಕೇಂದ್ರದಿಂದ ತರಲು ಸಾಧ್ಯವಾಗಿಲ್ಲ. ಮುಂದೆ ಸರಕಾರ ಬಂದರೆ ಇಂತಹ ಯೋಜನೆ ಜಾರಿಗೆ ತರುತ್ತೇವೆ ಎಂದು ಎಲ್ಲೂ ಹೇಳುತ್ತಿಲ್ಲ. ಆದರೆ, ಕುಮಾರಸ್ವಾಮಿ ಪಂಚರತ್ನ ಯೋಜನೆಗಳನ್ನು ರೂಪಿಸಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಅಂತಹ ಶಕ್ತಿ ಹೊಂದಿರುವ ಏಕೈಕ ಪಕ್ಷ ಜೆಡಿಎಸ್. ಜೆಡಿಎಸ್ ಪಕ್ಷಕ್ಕೆ ಸಿ.ಎಂ.ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾದ ಬಳಿಕ ಅಲ್ಪಸಂಖ್ಯಾತರ ಕೂಗು ನಮ್ಮ ಪಕ್ಷದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೋಲಾರ ಭಾಗದಲ್ಲಿ ಅಭ್ಯರ್ಥಿಗಳನ್ನು ಜೆಡಿಎಸ್ ಬಾವುಟ ಹಾರಿಸಿ, ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಜನರೇ ಹೇಳುತ್ತಿದ್ದಾರೆ. ನಾನು ಸಹ ಮುಂದಿನ ದಿನಗಳಲ್ಲಿ ಈ ಭಾಗದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಅಮಿತ್ ಶಾ 10 ಬಾರಿ ಅಲ್ಲ, 15 ಬಾರಿ ಬಂದರೂ ಅಷ್ಟೇ ಮಂಡ್ಯದಲ್ಲಿ ಕಳೆದ ಬಾರಿ ಪಡೆದಿದ್ದ ರೀತಿಯಲ್ಲೇ ಈ ಭಾರಿಯೂ ಗೆಲ್ಲಲಿದ್ದೇವೆ. ಮಂಡ್ಯ ಎಂದಿಗೂ ದೇವೇಗೌಡರ ಕ್ಷೇತ್ರ , ಅಮಿತ್ ಶಾ ಮಂಡ್ಯಕ್ಕೆ ಒಂದು ಬಾರಿ ಬಂದಾಗಲೇ ಬಾಂಬ್ ಒಂದನ್ನು ಹಾಕಿ ಹೋಗಿದ್ದಾರೆ. ಅಮುಲ್ಗೆ ನಂದಿನಿಯನ್ನು ಸೇರಿಸುತ್ತೇವೆ ಎಂದರೆ ಅದು ಯಾರಪ್ಪನ ಆಸ್ತಿ, ನಂದಿನಿ ಎಂಬ ಬಡ ಸಂಸ್ಥೆಯನ್ನು ನಮ್ಮ ರೈತರು, ಸಾರ್ವಜನಿಕರು ಇಷ್ಟು ದೊಡ್ಡ ಮಟ್ಟಕ್ಕೆ ಶಕ್ತಿಯಾಗಿ ಬೆಳೆಸಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಸಚಿವರಿಗೆ ಸಮಾನವಾಗಿದೆ. ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಡೈರಿ ಸ್ಥಾಪನೆಯಾಗಿರುವುದರಿಂದಲೇ ಸಿಲ್ಕ್-ಮಿಲ್ಕ್-ಚಿನ್ನಕ್ಕೆ ಹೆಸರುವಾಸಿಯಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.











Click it and Unblock the Notifications