New Railway Line: ಸವದತ್ತಿ, ಕೊಲ್ಲಾಪುರ ಹೊಸ ರೈಲ್ವೆ ಮಾರ್ಗ, ಕಾಮಗಾರಿಗಳ ಅಪ್ಡೇಟ್: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಸೆಪ್ಟಂಬರ್ 25: ಬೆಳಗಾವಿಯಿಂದ ಸವದತ್ತಿ ಬಳಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನೂತನ ರೈಲು ಸಂಪರ್ಕ ಕಲ್ಪಿಸುವುದು, ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಹಾಗೂ ನೈಋತ್ಯ ರೈಲ್ವೆಯ ವಿವಿಧ ಕಾಮಗಾರಿಗಳ ಕುರಿತು ಬೆಳಗಾವಿ ಸಂಸದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರೈಲ್ವೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಹಾಗೂ ವಂದೇ ಭಾರತ್ ರೈಲು ವಿಸ್ತರಣೆ ಬಗ್ಗೆ ಮಹತ್ವದ ಮಾತುಕತೆ ನಡೆಸಿದೆ.

ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಈಗಾಗಲೇ ಬೆಳಗಾವಿಯಿಂದ ಸವದತ್ತಿಯ ಆರಾಧ್ಯ ಧೈವ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ನೂತನ ರೈಲು ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಯೋಜನೆ ಆರಂಭಿಕ ಸಮೀಕ್ಷೆ ನಡೆಸಬೇಕು. ಅದರ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಅವರು ಸೂಚಿಸಿದರು.
ಇನ್ನೂ ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲ್ವೆ ಮಾರ್ಗ ಕಾಮಗಾರಿ ಪ್ರಗತಿ ಕುರಿತು ಶೆಟ್ಟರ್ ವರದಿ ಕೇಳಿದರು. ಪಡೆದ ಜಗದೀಶ ಶೆಟ್ಟರ್, ಶೀಘ್ರ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ತಾಂತ್ರಿಕ ತೊಡಕಿಲ್ಲ
ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡುವಂತೆ ಈಗಾಗಲೇ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಲಿಖಿತ ಮನವಿ ಮಾಡಿದ್ದಾರೆ. ಸಭೆಯಲ್ಲಿ ಮತ್ತೆ ಅದನ್ನು ಪ್ರಸ್ತಾಪಿಸಿ ಅಧಿಕಾರಿಗಳ ಗಮನಕ್ಕೆ ತಂದರು.
ಪುಣೆ-ಬೆಳಗಾವಿ ಧಾರವಾಡ ವಂದೇ ಭಾರತ್ ರೈಲಿನ ಮಾದರಿಯಲ್ಲಿ ಬೆಂಗಳೂರು -ಧಾರವಾಡ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸುವ ಬಗ್ಗೆ ಯಾವುದೇ ತಾಂತ್ರಿಕ ದೋಷ ಇಲ್ಲ ಎಂಬುದು ಕಂಡುಬಂದಿದೆ. ಹೀಗಾಗಿ, ಶೀಘ್ರವಾಗಿ ಬೆಳಗಾವಿಯವರೆಗೆ ವಂದೇ ಭಾರತ್ ರೈಲು ಸಂಚಾರ ವಿಸ್ತರಿಸುವಂತೆ ಶೆಟ್ಟರ್ ಒತ್ತಾಯಿಸಿದರು.
ಬೆಳಗಾವಿ-ಕೊಲ್ಲಾಪುರ ಮಧ್ಯೆ ನೂತನ ರೈಲು ಮಾರ್ಗ
ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿರುವ ಬೆಳಗಾವಿ-ಸಾವಂತವಾಡಿಯವರೆಗೂ ಸಹ ನೂತನ ಕೊಂಕಣ ರೈಲ್ವೆ ಸಂಪರ್ಕ ಹಾಗೂ ಬೆಳಗಾವಿ -ಕೊಲ್ಲಾಪುರ ಮಧ್ಯೆ ನೂತನ ರೈಲು ಮಾರ್ಗ ನಿರ್ಮಾಣ ಮಾಡುವಂತೆ ನಿರ್ದೇಶಿಸಿದರು.
ಬೆಳಗಾವಿ-ಮಿರಜ್-ಬೆಳಗಾವಿ ಮಧ್ಯೆ ಪ್ಯಾಸೆಂಜರ್ ರೈಲು ಸಂಚಾರ ಸೇವೆ ಇದೇ ಸೆಪ್ಟೆಂಬರ್ ಅಂತ್ಯಕ್ಕೆ ಅಂತ್ಯಗೊಳ್ಳಲಿದೆ. ಈ ಸೇವೆಯನ್ನು ಇನ್ನೂ ಹೆಚ್ಚಿನ ಅವಧಿವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಮುಂದುವರಿಸುವಂತೆ ತಿಳಿಸಿದರು.
ವಿವಿಧೆಡೆ ಹೊಸ ಮಾರ್ಗ ಸಾಕಾರಗೊಳಿಸಬೇಕು: ಶೆಟ್ಟರ್ ಆಗ್ರಹ
ಹುಬ್ಬಳ್ಳಿಯಿಂದ ಕೊಚ್ಚಿವೆಲ್ಲಿವರೆಗೆ ಕಾರ್ಯಾಚರಣೆ ನಡೆಸುವ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಬೇಕಿದೆ. ಮೈಸೂರು- ಅಜೀರ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಬೇಕು. ಅಲ್ಲದೇ ಬೆಳಗಾವಿ-ಪಂಡರಾಪುರ, ಹುಬ್ಬಳ್ಳಿ-ಬೆಳಗಾವಿ, ಶಿರಡಿ -ಕೊಪರ್ಗಾವ್, ಬೆಳಗಾವಿ -ಜೋದಪುರ, ಬೆಳಗಾವಿ -ಮುಂಬೈ ನೂತನ ರೈಲು ಸಂಪರ್ಕ ಕಲ್ಪಿಸುವ ಅಗತ್ಯತೆ, ಪ್ರಯಾಣಿಕರಿಗೆ ಆಗುವ ಅನುಕೂಲಗನ್ನು ಅಧಿಕಾರಿಗಳ ಗಮನಕ್ಕೆ ತಂದರು. ಹೊಸ ಯೋಜನೆಗಳು, ನಡೆಯುತ್ತಿರುವ ಕಾಮಗಾರಿಗಳ ಸಾಕಾರದತ್ತ ಗಮನ ಹರಿಸಬೇಕು ಎಂದು ಹೇಳಿದರು.












Click it and Unblock the Notifications