NDA: ಪ್ರಧಾನಿ ಮೋದಿ ಸಂಪುಟ: ಲಿಂಗಾಯತ ಕೋಟಾದಡಿ 'ಜಗದೀಶ್ ಶೆಟ್ಟರ್'ಗೆ ಸ್ಥಾನ?
ಬೆಂಗಳೂರು, ಜೂನ್ 09: ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನ ಗೆದ್ದ ಎನ್ಡಿಎ ನಾಯಕರ ಸಮ್ಮುಖದಲ್ಲಿ ನರೇಂದ್ರ ಮೋದಿಯವರು ಇಂದು ಮೂರನೇ ಭಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇತ್ತ ರಾಜ್ಯದ ಮೂವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಹಾಗಾದ್ರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಯಾವ ಸ್ಥಾನ ಸಿಗಲಿದೆ?, ಅವರು ಮಂತ್ರಿಗಿರಿ ರೇಸ್ನಲ್ಲಿದ್ದಾರೆಯೇ? ಈ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಉತ್ತರ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 55.1ರಷ್ಟು ಮತಗಳ ಮೂಲಕ ಭರ್ಜರಿ ಜಯ ಗಳಿಸಿರುವ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಲ್ಲಿ ಒಬ್ಬರು. ಕರ್ನಾಟಕದ ಮುಖ್ಯಮಂತ್ರಿ, ಗುಪ್ತಚರ, ಹಣಕಾಸು, ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗಣಿ ಭೂ ವಿಜ್ಞಾನ ಖಾತೆ ನಿಭಾಯಿಸಿರುವ ಅನುಭವ ಅವರಿಗೆ ಇದೆ.

ಮಂತ್ರಿಗಿರಿಗೆ ಗುಪ್ತ ಕಸರತ್ತು?
ಫಲಿತಾಂಶ ಹೊರ ಬಿದ್ದು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಅವರು ಜೂನ್ 6 ರಂದು ದೆಹಲಿಗೆ ದೌಡಾಯಿಸಿದ್ದರು. ಶೆಟ್ಟರ್ ಸಹ ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರು ತೋರಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಮೊನ್ನೆ ಅವರು ದೆಹಲಿಗೆ ತೆರಳಿದ್ದ ವೇಳೆಯಲ್ಲೂ ಮಂತ್ರಿಗಿರಿಗೆ ಗುಪ್ತವಾಗಿ ಕಸರತ್ತು, ಲಾಭಿ ನಡೆಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ನಿಂದ ಅವರು ಬಿಜೆಪಿಗೆ ಮರಳುವಾಗ ಮುನ್ನ ಕೇಂದ್ರದ ಮಟ್ಟದಲ್ಲಿ ನಿಮಗೆ ಸ್ಥಾನಮಾನ ಸಿಗುವ ಭರವಸೆಯನ್ನು ಪಕ್ಷ ನೀಡಿ ಕರೆತಂದಿತ್ತು. ಅದಾದ ಬಳಿಕ ಅವರಿಗೆ ಬೆಳಗಾವಿ ಲೋಕಸಭಾ ಚುನಾವಣೆ ಟಿಕೆಟ್ ನೀಡಲಾಯಿತು. ಶೆಟ್ಟರ್ ಅವರ ವಿಷಯದಲ್ಲಿ ಈವರೆಗೆ ಎಲ್ಲವು ಅಂದುಕೊಂಡಂತೆ ಆಗಿದೆ. ಅವರು ಬೆಳಗಾವಿಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದಾರೆ.

ಕೇಂದ್ರ ಮಂತ್ರಿ ಸ್ಥಾನದ ಆಕಾಂಕ್ಷಿಗಳು?
ಹೀಗಾಗಿ ಅವರಿಗೆ ಮಂತ್ರಿಗಿರಿ ಭಾಗ್ಯ ಸಿಗಬೇಕು ಎಂದು ಅವರ ಬೆಂಬಲಿಗರ ಆಶಯವಾಗಿದೆ. ಕರ್ನಾಟಕದ ಬಿಜೆಪಿಯಿಂದ ಚುನಾಯಿತರಾದ ಹಿರಿಯ ಸಂಸದರದಲ್ಲಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಎಚ್ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಡಾ.ಸಿ.ಎನ್. ವಿಶ್ವನಾಥ್, ಗೋವಿಂದ್ ಕಾರಜೋಳ, ಪಿಸಿ ಮೋಹನ್ ಅವರು ಕೇಂದ್ರ ಮಂತ್ರಿಗಿರಿ ರೇಸ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮೂರನೇ ಭಾರಿಗೆ ಅಧಿಕಾರಕ್ಕೆ ಬರುವ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಮಂತ್ರಿ ಸ್ಥಾನ ಸಿಗಲಿದೆ ಎಂಬುದೇ ಕುತೂಹಲ ಹೆಚ್ಚಿಸಿದೆ. ಮತ್ತೊಂದು ಕಡೆ ಇದು ಕಗ್ಗಂಟಾಗಲಿದೆ ಅಂತಲೂ ವಿಶ್ಲೇಷಿಸಲಾಗಿದೆ. ಕರ್ನಾಟಕದ ಮಟ್ಟಿಗೆ ಮೂವರ ಹೆಸರುಗಳು ಕೇಳಿ ಬಂದಿವೆ.
ಪಿಎಂ ಮೋದಿ ಕ್ಯಾಬೆನೆಟ್ ಭಾಗವಾಗಲಿದ್ದಾರೆ ಶೆಟ್ಟರ್
ಆ ಪೈಕಿ ಹಲವು ಖಾತೆ, ಮುಖ್ಯಮಂತ್ರಿ ಸ್ಥಾನ ನಿರ್ವಹಿಸಿದ ಜಗದೀಶ್ ಶೆಟ್ಟರ್ ಅವರು ಇದ್ದಾರೆ. ಅವರೂ ಸಹ ಪ್ರಧಾನಿ ಮೋದಿ ಮಂತ್ರಿಮಂಡಲದ ಭಾಗವಾಲಿದ್ದಾರೆ. ಆದರೆ ಯಾವ ಖಾತೆ ಅವರಿಗೆ ಸಿಗಲಿದೆ ಎಂಬುದು ನಿಕ್ಕಿ ಆಗಬೇಕಿದೆ.
ಕೇಂದ್ರ ಕೃಷಿ ಖಾತೆ ಮೇಲೆ ಎಚ್ಡಿ ಕುಮಾರಸ್ವಾಮಿ ಅವರು ಕಣ್ಣಿಟ್ಟಿದ್ದಾರೆ. ಕಲ್ಲಿದ್ದರು-ಸಂಸದೀಯ ವ್ಯವಹಾರ ಈಗಾಗಲೇ ಪ್ರಹ್ಲಾದ್ ಜೋಶಿಯವರು ನಿರ್ವಹಿಸಿದ್ದಾರೆ. ಆರೋಗ್ಯ ಖಾತೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಡಾ.ಸಿ.ಎನ್ ಮಂಜುನಾಥ್ ಅವರಿಗೆ ನೀಡಬೇಕು ಎಂಬ ಒತ್ತಾಯ ಜೋರಾಗಿದೆ.
ಮಂತ್ರಿ ಆಯ್ಕೆ ಪ್ರಧಾನಿಗೆ ಬಿಟ್ಟದ್ದು: ಗುಟ್ಟು ಬಿಟ್ಟು ಕೊಡದ ಶೆಟ್ಟರ್
ಈ ಮಧ್ಯೆ ಜಗದೀಶ್ ಶೆಟ್ಟರ್ ಅವರಿಗೆ ಯಾವ ಖಾತೆ ನೀಡಲಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಈ ಬಗ್ಗೆ ಸುದ್ದಿಗಾರರಿಗೆ ಒಂದೆರಡು ಭಾರಿ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್ ಅವರು, ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮಂತ್ರಿಗಿರಿ ಆಯ್ಕೆ ಪ್ರಧಾನಿಯವರಿಗೆ ಬಿಟ್ಟದ್ದು. ಆ ಬಗ್ಗೆ ನಾನು ಚರ್ಚಿಸಿಲ್ಲ
ಕೇಂದ್ರ ಹೈಕಮಾಂಡ್ ನನಗೆ ಯಾವುದೇ ಜವಾಬ್ದಾರಿ ಕೊಟ್ಟರು ನಾನು ನಿಭಾಯಿಸುತ್ತೆನೆ. ಬಿಜೆಪಿ ಪಕ್ಷ, ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಆ ಮಾತಿಗೆ ನಾನು ಬದ್ಧ ಎನ್ನುವ ಅವರು ಮಂತ್ರಿ ಸ್ಥಾನದ ಆಕಾಂಕ್ಷಿ, ಇಲ್ಲವೇ ಇಂತಹ ಹುದ್ದೆಯ ಆಕಾಂಕ್ಷಿ ಎಂಬುದರ ಬಗ್ಗೆ ಗುಟ್ಟು ಬಿಟ್ಟುಕೊಡದಿರುವುದೇ ಕುತೂಹಲ ಹೆಚ್ಚಾಗಲು ಕಾರಣವಾಗದೆ.
ಪ್ರಧಾನಿ ಬಗ್ಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
ದೇಶದಲ್ಲಿ ಕಳೇದ ಹತ್ತು ವರ್ಷ ಯಶಸ್ವಿಯಾಗಿ ಪ್ರಧಾನಿ ಸ್ಥಾನ ನಿರ್ವಹಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಪ್ರಧಾನಿ ಮೋದಿಯವರು ಚುನಾಯಿತರಾಗಿದ್ದಾರೆ. ನಾವು ಎನ್ಡಿಎ ಎಲ್ಲ ನಾಯಕರು ನಮ್ಮ ಪ್ರಧಾನಿಯಾಗಿ ಮೋದಿಯವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಮೂರನೇ ಭಾರಿಗೆ ಪ್ರಧಾನಿ ಆಗಿ ಅವರು ಅಧಿಕಾರ ಸ್ವೀರಿಸುತ್ತಿದ್ದಾರೆ. ಈ ಮೂಲಕ ದಿ.ಜವಾಹರ್ ಲಾಲ್ ನೆಹರು ನಂತರ ಅವರ ದಾಖಲೆಯನ್ನು ಮೋದಿಯವರು ಮುರಿದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.












Click it and Unblock the Notifications