ಮಗನ ಶವದ ಪಕ್ಕವೇ ಮೂರು ದಿನ ಕಳೆದ ತಾಯಿ!
ಕಾರವಾರ, ಜುಲೈ 10 : ಅನಾರೋಗ್ಯದಿಂದ ಮಗ ಸತ್ತಿದ್ದ ವಿಚಾರ ತಿಳಿಯದೇ, ಆತನ ಶವವಿದ್ದ ಪಕ್ಕದ ಕೊಠಡಿಯಲ್ಲಿ ಮಲಗಿ ವೃದ್ಧೆಯೊಬ್ಬಳು ಮೂರು ದಿನ ಕಳೆದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಮಠಕೇರಿಯಲ್ಲಿ ನಡೆದಿದೆ.
ವಿವಾಹಿತ ವಿನಯ ಭಟ್ (56) ಎಂಬುವವರು ಮದ್ಯವ್ಯಸನಕ್ಕೆ ಒಳಗಾಗಿದ್ದರು. ಪತಿಯ ವರ್ತನೆಯನ್ನು ಸಹಿಸಲಾಗದೇ ಪತ್ನಿ ಮಗನೊಂದಿಗೆ ಹಲವು ವರ್ಷಗಳ ಹಿಂದೆಯೇ ತವರು ಮನೆಗೆ ತೆರಳಿದ್ದರು. ಹೀಗಾಗಿ ಈ ಮನೆಯಲ್ಲಿ ತಾಯಿ ಆಶಾ ಭಟ್, ಮಗ ವಿನಯ ಭಟ್ ಇಬ್ಬರೇ ವಾಸವಾಗಿದ್ದರು. ಅನಾರೋಗ್ಯದಿಂದ ವಿನಯ್ ಭಟ್ ತಮ್ಮ ಮನೆಯ ಕೋಣೆಯಲ್ಲಿ ಮೃತ ಪಟ್ಟಿದ್ದರು.

ಇತ್ತ ತಾಯಿ ಆಶಾ ಭಟ್ (85) ಕೂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮಾತನಾಡುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ. ಸತ್ತ ಮಗನ ಕೋಣೆಯ ಪಕ್ಕದಲ್ಲೇ ಮಲಗಿದ್ದ ಆಶಾ ಭಟ್, ಮಗನ ಕೊಳೆತ ಶವದ ಕೆಟ್ಟ ವಾಸನೆ ಬರುತ್ತಿದ್ದರೂ ಯಾರಿಗೂ ಹೇಳಲಾಗದೇ, ಕೋಣೆಯಿಂದ ಹೊರಗೆ ಕದಲಲಾಗದೆ ಅಲ್ಲಿಯೇ ಮೂರು ದಿನ ಕಳೆದಿದ್ದಾರೆ.
ಮೂರು ದಿನಗಳಿಂದ ಬಾಗಿಲು ತೆರೆಯದ ಈ ತಾಯಿ- ಮಕ್ಕಳ ಮನೆಯಿಂದ ಕೆಟ್ಟ ವಾಸನೆ ಹರಡಲು ಶುರುವಾದಾಗ ಅಕ್ಕ ಪಕ್ಕದ ನಿವಾಸಿಗರು ಗಮನ ಹರಿಸಿದ್ದಾರೆ. ಮನೆಯ ಬಾಗಿಲು ತಟ್ಟಿದರೂ ಬಾಗಿಲನ್ನು ತೆರೆಯದಿದ್ದಾಗ, ಮನೆಯಲ್ಲಿ ವಾಸವಿದ್ದ ತಾಯಿ, ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯ ಮೇಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಒಡೆದು ಒಳ ನುಗ್ಗಿ ಪರಿಶೀಲನೆ ನಡೆಸಿದಾಗ ಕೊಠಡಿಯೊಂದರಲ್ಲಿ ವಿನಯ ಭಟ್ ಮೃತ ಪಟ್ಟು ಕೊಳೆಯುತ್ತಿರುವ ಸ್ಥಿತಿಯಲ್ಲಿರುವುದು ಹಾಗೂ ವೃದ್ಧೆ ಆಶಾ ಭಟ್ ಪಕ್ಕದ ರೂಮಿನಲ್ಲಿ ನಿತ್ರಾಣ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ.
ಹಲವು ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಆಶಾ ಭಟ್ ಸತತ ಮೂರು ದಿನಗಳವರೆಗೆ ಅನ್ನ, ನೀರು ಸೇವಿಸದೆ ಮಂಚದ ಮೇಲೆ ಮಲಗಿದ್ದರು. ಅವರನ್ನು ಮನೆಯಿಂದ ಹೊರಗೆ ಕರೆತಂದಾಗ 'ಏಕೆ ನಮ್ಮ ಮನೆಗೆ ಬಂದಿರಿ. ಇಲ್ಲಿ ಏನಾಗಿದೆ' ಎಂದು ಪ್ರಶ್ನಿಸಿದ್ದು ಕೇಳಿದ್ದು ಮನಸ್ಸು ಮಿಡಿಯುವಂತಿತ್ತು.












Click it and Unblock the Notifications