Monsoon Rain: ನೈಋತ್ಯ ಮುಂಗಾರು, ಕರ್ನಾಟಕದಲ್ಲಿ ಹೆಚ್ಚುವರಿಯಾಗಿ ಸುರಿದ ಮಳೆ
ಬೆಂಗಳೂರು, ಸೆಪ್ಟೆಂಬರ್ 08: ನೈಋತ್ಯ ಮುಂಗಾರು ಮಳೆ 2024ರಲ್ಲಿ ದೇಶದ ಜನರಿಗೆ ನಿರಾಸೆ ಮೂಡಿಸಿಲ್ಲ. ಜೂನ್ 1ರಿಂದ ಸೆಪ್ಟೆಂಬರ್ 30ರ ತನಕ ಭಾರತದಲ್ಲಿ ಮುಂಗಾರು ಮಳೆ ಅವಧಿ ಎಂದು ಲೆಕ್ಕಾಚಾರ ಹಾಕಲಾಗುತ್ತದೆ. ಈ ಬಾರಿ ಇದುವರೆಗೂ ದೇಶಾದ್ಯಂತ ವಾಡಿಕೆಗಿಂತ ಶೇ 8ರಷ್ಟು ಹೆಚ್ಚು ಮಳೆಯಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಮಳೆ ಉತ್ತಮವಾಗಿಯೇ ಸುರಿದಿದ್ದು, ಹಲವು ಜಿಲ್ಲೆಗಳಲ್ಲಿ ಈಗಲೂ ಮಳೆಯಾಗುತ್ತಿದೆ.
ಈ ತಿಂಗಳ ಅಂತ್ಯಕ್ಕೆ ನೈಋತ್ಯ ಮುಂಗಾರು ಮಳೆಯ ಅವಧಿ ಮುಕ್ತಾಯವಾಗುತ್ತದೆ. ಸೆಪ್ಟೆಂಬರ್ 7ರ ಮಾಹಿತಿಯಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯೇ ಸುರಿದಿದೆ. ರಾಜಸ್ಥಾನದಲ್ಲಿ ಶೇ 57ರಷ್ಟು ಹೆಚ್ಚು ಮಳೆಯಾಗಿದ್ದರೆ, ಮಣಿಪುರದಲ್ಲಿ ಶೇ 30ರಷ್ಟು ಮಳೆ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಾಮಾನ್ಯವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ದೇಶದಲ್ಲಿ ನೈಋತ್ಯ ಮುಂಗಾರು ಮಾರುತಗಳ ಅವಧಿ ಅಂತ್ಯಗೊಳ್ಳುತ್ತದೆ. ಇದು ಕೇವಲ ವಾಡಿಕೆಯ ದಿನಾಂಕಗಳಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 25ಕ್ಕೆ ಮುಂಗಾರು ಅವಧಿ ಅಂತ್ಯಗೊಂಡಿತ್ತು. ಆದರೆ ಈ ಬಾರಿ ಮುಂಗಾರು ಅವಧಿ ಅಕ್ಟೋಬರ್ 15ರ ತನಕ ವಿಸ್ತರಣೆಗೊಳ್ಳುವ ಮುನ್ಸೂಚನೆಯೂ ಸಿಕ್ಕಿದೆ.
ಸೆಪ್ಟೆಂಬರ್ 7ರ ತನಕ ದೇಶಾದ್ಯಂತ ಸುರಿದ ಹೆಚ್ಚುವರಿ ಶೇ 8ರಷ್ಟು ಮಳೆ ಕೃಷಿಕ ಸಮುದಾಯಕ್ಕೆ ಸಂತಸ ತಂದಿದೆ. ದೇಶದ ಆರ್ಥಿಕತೆಗೆ ಸಹಕಾರಿಯಾಗಿದೆ. ಆದರೆ ಮಣಿಪುರದಲ್ಲಿ ಉಂಟಾಗಿರುವ ಮಳೆ ಕೊರತೆ ಕುಡಿಯುವ ನೀರಿನ ಸಮಸ್ಯೆ, ಕೃಷಿ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಯಾವ ರಾಜ್ಯದಲ್ಲಿ ಎಷ್ಟು ಮಳೆ?; ಭಾರತದ ವೈವಿಧ್ಯಮಯ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಮಳೆ ಪ್ರಮಾಣವನ್ನು 5 ಭಾಗವಾಗಿ ವಿಂಗಡನೆ ಮಾಡಲಾಗಿದೆ. ಭಾರೀ ಮಳೆ ಕೊರತೆ, ಮಳೆ ಕೊರತೆ, ಸಾಮಾನ್ಯ ಮಳೆ, ಹೆಚ್ಚುವರಿ ಮಳೆ, ಅಧಿಕ ಮಳೆ ಎಂದು ಹವಾಮಾನ ಇಲಾಖೆ ವಿಂಗಡನೆ ಮಾಡುತ್ತದೆ. ಆದರೆ ಈ ವರ್ಷ ಈ ಮಾನದಂಡಗಳ ಅನ್ವಯ ದೇಶದ ಯಾವುದೇ ರಾಜ್ಯದಲ್ಲಿ ಭಾರೀ ಮಳೆ ಕೊರತೆ ಎದುರಾಗಿಲ್ಲ.
ಮಣಿಪುರ ಶೇ 30, ಬಿಹಾರ ಶೇ 26, ಪಂಜಾಬ್ ಶೇ 23 ಮತ್ತು ಜಮ್ಮು & ಕಾಶ್ಮೀರ ಶೇ 20ರಷ್ಟು ಮಳೆಯ ಕೊರತೆಯನ್ನು ಎದುರಿಸುತ್ತಿದೆ. ಇದೇ ಮಾದರಿಯಲ್ಲಿ ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶದಲ್ಲಿ ಕ್ರಮವಾಗಿ ಶೇ 21 ಮತ್ತು ಶೇ 22ರಷ್ಟು ಕೊರತೆ ಕಂಡುಬಂದಿದೆ. ಉತ್ತರ ಪ್ರದೇಶದಲ್ಲಿ ವಾಡಿಕೆಗಿಂತ ಶೇ 14, ಅಸ್ಸಾಂನಲ್ಲಿ ಶೇ 13 ಮತ್ತು ಹರ್ಯಾಣ ಮತ್ತು ಕೇರಳದಲ್ಲಿ ಶೇ 10ರಷ್ಟು ಮಳೆ ಕೊರತೆಯಾಗಿದೆ.
ಅತಿ ಹೆಚ್ಚು ಮಳೆ ಸುರಿದ ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಶೇ 57ರಷ್ಟು ಹೆಚ್ಚು ಮಳೆ ರಾಜ್ಯದಲ್ಲಿ ಸುರಿದಿದೆ. ಉಳಿದಂತೆ ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಶೇ 51ರಷ್ಟು ಹೆಚ್ಚು ಮಳೆ ನೈಋತ್ಯ ಮುಂಗಾರು ಅವಧಿಯಲ್ಲಿ ಸುರಿದಿದೆ.
ಗೋವಾದಲ್ಲಿ ಶೇ 45, ಲಡಾಕ್ ಶೇ 44, ಆಂಧ್ರ ಪ್ರದೇಶ ಶೇ 42, ತೆಲಂಗಾಣ ಶೇ 40, ಮಹಾರಾಷ್ಟ್ರ ಶೇ 28, ಕರ್ನಾಟಕ ಶೇ 23, ತ್ರಿಪುರ ಶೇ 22, ಸಿಕ್ಕಿಂ ಶೇ 21 ಹೆಚ್ಚುವರಿ ಮಳೆ ಸೆಪ್ಟೆಂಬರ್ 7ರ ತನಕ ದಾಖಲಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ ಅಂತ್ಯದ ತನಕವೂ ಸಾಮಾನ್ಯ ಮಳೆ ಮುಂದುವರೆಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ 2023ರಲ್ಲಿ ನೈಋತ್ಯ ಮುಂಗಾರು ಕೈಕೊಟ್ಟು ಬರ ಪರಿಸ್ಥಿತಿ ಎದುರಾಗಿತ್ತು. ಆದರೆ ಈ ವರ್ಷದ ಮೇ ತಿಂಗಳಿನಲ್ಲಿ ಪೂರ್ವ ಮುಂಗಾರು ಮಳೆ ಕೆಲವು ಜಿಲ್ಲೆಗಳಲ್ಲಿ ಉತ್ತಮವಾಗಿ ಸುರಿದು ಜನರಲ್ಲಿ ಮುಂಗಾರು ಮಳೆ ಉತ್ತಮವಾಗುವ ಭರವಸೆ ಮೂಡಿಸಿತ್ತು.
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲಾ ಡ್ಯಾಂಗಳು ಭರ್ತಿಯಾಗಿವೆ. ಈ ಬಾರಿಯ ಮಳೆ ಕೃಷಿ ಚಟುವಟಿಕೆಗಳಿಗೆ ಸಹ ಅಪಾರ ಕೊಡುಗೆ ನೀಡಿದ್ದು, ರೈತರು ಈ ವರ್ಷ ಸಂತಸಗೊಂಡಿದ್ದಾರೆ. ಡ್ಯಾಂಗಳು ಭರ್ತಿಯಾಗಿರುವ ಕಾರಣ ಎರಡನೇ ಬೆಳೆಗೆ ಸಹ ನೀರು ದೊರೆಯುವ ಭರವಸೆಯಲ್ಲಿದ್ದಾರೆ.












Click it and Unblock the Notifications