karnataka rain: ಮಳೆಗಾಲದಲ್ಲಿಯೇ ತಗ್ಗಿದ 'ಮುಂಗಾರು ಮಳೆ' ಅಬ್ಬರ, ಮುನ್ಸೂಚನೆ ಏನಿದೆ?
ಬೆಂಗಳೂರು, ಸೆಪ್ಟಂಬರ್ 13: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿ ಬರೋಬ್ಬರಿ ಮೂರು ತಿಂಗಳು ಕಳೆದಿದೆ. ಈ ಪೈಕಿ ನಡುವೆ ಒಂದೆರಡು ವಾರ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಆಗಿದ್ದು ಬಿಟ್ಟರೆ ನಿರಂತರವಾಗಿ ಮಳೆ ಆಗಲಿಲ್ಲ. ಕರಾವಳಿ, ಮಲೆನಾಡು ಭಾಗದಲ್ಲಿ ಅಬ್ಬರಿಸಿದ್ದರೂ ಅಲ್ಲಿ ವಾಡಿಕೆಯಷ್ಟು ಆಗಿದೆ ಎಂಬುದು ಅನುಮಾನ. ಬೆಂಗಳೂರು ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಗುರ ಮಳೆ, ಮಬ್ಬು ವಾತಾವರಣ ಬಿಟ್ಟರೆ ಭಾರೀ ಮಳೆ ಆಗಿಲ್ಲ.
ಹವಾಮಾನ ಇಲಾಖೆ ಪ್ರಕಾರ, ಜನ ಮುನ್ಸೂಚನೆ ಗಮನಿಸುತ್ತಲೇ ಇದ್ದಾರೆ. ಚಂಡಮಾರುತ, ವಾಯುಭಾರ ಕುಸಿತ ಸಂದರ್ಭದಲ್ಲಿ ರಾಜ್ಯದ ಅರ್ಧ ಭಾಗಕ್ಕೆ ಮಳೆ ಆದರೆ, ಇನ್ನರ್ಧ ಭಾಗದಲ್ಲಿ ಮಳೆಯ ಸುದ್ದಿಯೇ ಇಲ್ಲ. ಪ್ರತಿ ಭಾರಿ ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದ ಮಳೆ ಈ ಭಾರಿ ಇಲ್ಲಿ ಮಂಕಾಗಿದೆ.

ಕರ್ನಾಟಕದಲ್ಲಿ ಮಳೆಗಾದಲ್ಲಿಯೇ ಮುಂಗಾರಿನ ಅಬ್ಬರ ತಗ್ಗಿದ ವಾತಾವರಣ ಎದುರಿಸುತ್ತಿದ್ದೇವೆ. ಇದೀಗ ಮಳೆಗಾಲದ ಕೊನೆಯ ತಿಂಗಳಲ್ಲಿದ್ದೇವೆ. ಈ ಸೆಪ್ಟಂಬರ್ ಮುಗಿಯುತ್ತಿದ್ದಂತೆ ಹಿಂಗಾರಿ ಮಳೆ ಶುರುವಾಗಲಿದೆ. ಎಲ್ಲವು ಅಂದುಕೊಂಡಂತೆ ಆದರೆ ಉತ್ತಮ ಮಳೆ ಬಂದರೆ, ಹಿಂಗಾರು ಬಿತ್ತನೆಗೆ, ಕೃಷಿಗೆ ಸಾಕಷ್ಟು ಅನುಕೂಲವಾಗಲಿದೆ.
ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಯಾದಗಿರಿ, ಗದಗ, ಹಾವೇರಿ, ಭಾಗದಲ್ಲಿ ಅಲ್ಲಲ್ಲಿ ಹಗುರ ಮಳೆ ಆಗುತ್ತಿದೆ, ಬಿಟ್ಟರೆ ದೊಡ್ಡ ಮಳೆ ಆಗಿ ತುಂಬ ದಿನಗಳಾಗಿವೆ. ಇನ್ನು ಧಾರವಾಡ, ವಿಜಯಪುರ, ಬೆಳಗಾವಿ, ಬಾಗಲಕೋಟೆಗಳಲ್ಲಿ ಆಗಾಗ ಮಳೆ ಸುರಿದಿದೆ.
ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ಹಾಸನ, ತುಮಕೂರು, ದಾವಣಗೆರೆ, ಬಳ್ಳಾರಿ ಕಡೆಗಳಲ್ಲಿ ಹಗರು ಮಳೆ, ಕೆಲವೊಮ್ಮೆ ಜೋರು ಮಳೆ ಆಗಿದೆ. ಉಳಿದಂತೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆ ಈವರೆಗೆ ದಾಖಲಾಗಿದೆ.
ಕರ್ನಾಟಕ ಮಳೆ ಮುನ್ಸೂಚನೆ ಮಾಹಿತಿ
ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಸಾಧಾರಣದಿಂದ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಇದರೊಂದಿಗೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡುಗು, ಹಾಸನ ಭಾಗದಲ್ಲಿ ವ್ಯಾಪಕ ಮಳೆ ಮುಂದಿನ ಮೂರು ದಿನಗಳಲ್ಲಿ ಸುರಿಯುವ ಸಾಧ್ಯತೆ ಇದೆ.
ಇನ್ನೂ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಬ್ಬು ವಾತಾವರಣ ಕಂಡು ಬರಲಿದೆ. ಆದರೆ ಕೆಲವು ಕಡೆಗಳಲ್ಲಿ ಚದುರಿದಂತೆ ಹಗುರ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications