ಇನ್ನೆರಡು ದಿನಗಳಲ್ಲಿ ರಾಜ್ಯಾದ್ಯಂತ ಮುಂಗಾರು ಚುರುಕು
ಬೆಂಗಳೂರು, ಜೂನ್ 02: ಕೇರಳ ಹಾಗೂ ಕರಾವಳಿ ಭಾಗದಲ್ಲಿ ಮೇ 29ಕ್ಕೆ ಮುಂಗಾರು ಪ್ರವೇಶಿಸಿತ್ತು. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾವೇರಿ, ಧಾರವಾಡ, ಕೊಡಗು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ಒಂದು ದಿನ ಬಿಡುವು ನೀಡಿದ್ದು ಮತ್ತೆ ಶುಕ್ರವಾರದಿಂದ ರಾಜ್ಯದೆಲ್ಲೆಡೆ ಮಳೆ ಆರಂಭವಾಗಿದೆ.
ಸತತ ಮೂರನೇ ವರ್ಷವೂ ದೇಶಾದ್ಯಂತ ಸಾಮಾನ್ಯ ಮುಂಗಾರು!
ಶನಿವಾರ ಕೂಡ ಎಲ್ಲೆಡೆ ಮಳೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದೆ. ಜಯನಗರ, ಬನಶಂಕರಿ, ಮೈಸೂರು ರಸ್ತೆ, ವಿಧಾನಸೌಧ, ಮೆಜೆಸ್ಟಿಕ್, ರೇಸ್ಕೋರ್ಸ್ ರಸ್ತೆ ಸೇರಿದಂತೆ ಬೆಂಗಳೂರಿನ ಮುಕ್ಕಾಲು ಭಾಗಗಳಲ್ಲಿ ಮಳೆಯಾಗಿದೆ.
ಈ ವರ್ಷ ವಾಡಿಕೆಗಿಂತ ವಾಡಿಕೆಗಿಂತ 3 ದಿನ ಮೊದಲೇ, ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು , ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಶಿವಮೊಗ್ಗಕ್ಕೆ ಪ್ರವೇಶಿಸಿದೆ. ಉತ್ತರ ಕರ್ನಾಟಕದಲ್ಲಿ ಕೂಡ ಮಳೆಯ ಅಬ್ಬರ ಹೆಚ್ಚಾಗಿದೆ. ಬೆಳಗಾವಿಯಲ್ಲಿ ಶುಕ್ರವಾರ ಸತತ ಎರಡು ತಾಸು ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದು, ವಿದ್ಯುತ್ ಕಂಬಗಳು ಧರೆಗುರುಳಿರುವ ಘಟನೆಯೂ ನಡೆದಿದೆ.
ತೆಲಂಗಾಣ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಜೂ.6ರವರೆಗೂ ಮಳೆ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.