ಜೂನ್ ಮೊದಲ ವಾರ ಮುಂಗಾರು ಪ್ರವೇಶ; ರಾಜ್ಯಕ್ಕೆ ಭಾರಿ ಮಳೆ ಸೂಚನೆ
ಬೆಂಗಳೂರು, ಜೂನ್ 01: ಕೇರಳ ಕರಾವಳಿ ಪ್ರದೇಶಗಳಿಗೆ ಜೂನ್ 3ರಂದು ಮುಂಗಾರು ಪ್ರವೇಶಿಸಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಜೂನ್ 3ರ ನಂತರ ಮುಂಗಾರು ತೀವ್ರಗೊಳ್ಳಲಿದೆ. ಬುಧವಾರ ನೈಋತ್ಯ ಮುಂಗಾರು ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿರುವುದಾಗಿ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣದ ಕೇರಳ ಕರಾವಳಿ ತೀರಗಳಲ್ಲಿ ಬುಧವಾರ ಮುಂಗಾರು ಅಪ್ಪಳಿಸಬಹುದು. ಇದಕ್ಕೆ ಅನುಕೂಲಕರ ವಾತಾವರಣವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೇರಳ ನಂತರ ಕರ್ನಾಟಕದಲ್ಲಿ ಮುಂಗಾರು ಅನುಭವವಾಗಲಿದ್ದು, ಜೂನ್ 1ರಿಂದ 3ರವರೆಗೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ. ಜೊತೆಗೆ ಈ ಬಾರಿ ಸರಾಸರಿ ಮುಂಗಾರು ಮಳೆಯಾಗುವ ಸಾಧ್ಯತೆಯಿರುವುದಾಗಿಯೂ ತಿಳಿಸಿದೆ. ಮುಂದೆ ಓದಿ...

ಜೂನ್ ಮೊದಲ ವಾರ ಮುಂಗಾರು ಆರ್ಭಟ
ನೈಋತ್ಯ ಮುಂಗಾರು ಮಾರುತಗಳು ಜೂನ್ 3ರಂದು ಕೇರಳದ ಕರಾವಳಿ ಪ್ರವೇಶಿಸಲಿದ್ದು, ಅಲ್ಲಿ ಭಾರೀ ಮಳೆಯಾಗಲಿದೆ. ಜೂನ್ ಮೊದಲ ವಾರ ಮುಂಗಾರು ಆರ್ಭಟಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿಯೂ ಜೂನ್ 3ರಂದು ಮುಂಗಾರು ಆರ್ಭಟಿಸುವುದಾಗಿ ಮುನ್ಸೂಚನೆ ನೀಡಿದೆ.

ಕರ್ನಾಟಕದ ಕರಾವಳಿ ಪ್ರದೇಶಗಳಿಗೆ ಸೂಚನೆ
ನೈಋತ್ಯ ಮುಂಗಾರು ಹಾಗೂ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿನ ಸುಳಿಗಾಳಿ ತೀವ್ರಗೊಂಡ ಪರಿಣಾಮ ರಾಜ್ಯದಲ್ಲಿ ಜೂನ್ 4ರವರೆಗೂ ಭಾರೀ ಮಳೆಯಾಗಲಿರುವುದಾಗಿ ಇಲಾಖೆ ತಿಳಿಸಿದೆ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವುದಾಗಿ ತಿಳಿಸಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಜೂನ್ 3ರ ನಂತರ ಪ್ರಬಲವಾಗುವ ನೈಋತ್ಯ ಮಾರುತ
ಈ ಬಾರಿ ತೌಕ್ತೆ ಹಾಗೂ ಯಾಸ್ ಚಂಡಮಾರುತ ಒಂದಾದ ನಂತರ ಒಂದರಂತೆ ಕಂಡುಬಂದ ಕಾರಣ ದೇಶದಲ್ಲಿ ಬಿಸಿಗಾಳಿಯ ಅನುಭವವಾಗಿಲ್ಲ. ಬೇಸಿಗೆ ಅವಧಿ ಮುಗಿದು ಮುಂಗಾರು ಆಗಮನವಾಗುತ್ತಿದೆ. ನೈಋತ್ಯ ಮಾರುತ ಜೂನ್ 3ರ ಬಳಿಕ ಪ್ರಬಲವಾಗುತ್ತದೆ. ಐದು ದಿನಗಳ ಕಾಲ ದೇಶದಲ್ಲಿ ಹೆಚ್ಚಿನ ಮಟ್ಟದ ಮಳೆ ನಿರೀಕ್ಷಿಸಬಹುದು ಎಂದು ಐಎಂಡಿ ಮಾಹಿತಿ ನೀಡಿದೆ.
Recommended Video

ಜೂನ್ನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಳೆ
ಕೇರಳದಲ್ಲಿ ಮುಂಗಾರು ಆಗಮನವಾಗುವುದರಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಮುಂದಿನ ನಾಲ್ಕು ತಿಂಗಳ ಕಾಲ ಮಳೆ ಇರಲಿದೆ. ದೇಶವು ಜೂನ್ನಿಂದ ಸೆಪ್ಟೆಂಬರ್ವರೆಗೂ ನೈಋತ್ಯ ಮುಂಗಾರು 75% ವಾರ್ಷಿಕ ಮಳೆ ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೃಷಿ ಚಟುವಟಿಕೆಗಳನ್ನು ಆರಂಭಿಸಲು ರೈತರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.












Click it and Unblock the Notifications