ಕರ್ನಾಟಕದ ಅಭಿವೃದ್ಧಿ ಅಳೆಯುವಲ್ಲಿ ಸೋತ ಮೋದಿ?
ಬೆಂಗಳೂರು, ನವೆಂಬರ್ 01 : ಅಕ್ಟೋಬರ್ 29ರ ಭಾನುವಾರ ಮಧ್ಯಾಹ್ನ ಧರ್ಮಸ್ಥಳದಲ್ಲಿ ಮಂಜುನಾಥನ ಆಶೀರ್ವಾದ ಪಡೆದುಕೊಂಡು ಸಂಜೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಎಎಲ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಬಲವಂತದ ಮತ್ತು ಭಾವಾವೇಶದ ಭಾಷಣ ಮಾಡಿದ್ದರು.
ಕನ್ನಡ ರಾಜ್ಯೋತ್ಸವ, ಶುಭಾಶಯ ತಿಳಿಸಿದ ನರೇಂದ್ರ ಮೋದಿ
ಕರ್ನಾಟಕದ ಜನತೆಗೆ ಚುನಾವಣೆಗೆ ಕಾಯುವುದು ಬೇಕಾಗಿಲ್ಲ. ಕಾಂಗ್ರೆಸ್ ಬಗ್ಗೆ ಜನತೆ ಯಾವ ಆಶಯವನ್ನೂ ಇಟ್ಟುಕೊಂಡಿಲ್ಲ. ಅಭಿವೃದ್ಧಿಯ ಪಥದಲ್ಲಿ ಹಿಂದೆ ಬಿದ್ದಿರುವ ಕರ್ನಾಟಕ ಇತರ ಬಿಜೆಪಿ ರಾಜ್ಯಗಳಂತೆ ಅಭಿವೃದ್ಧಿಯತ್ತ ಸಾಗಲು ಬಯಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಜನರು ಅಧಿಕಾರಕ್ಕೆ ತಂದೇ ತರುತ್ತಾರೆ...
ಅಭಿವೃದ್ಧಿಯಲ್ಲಿ ಈಗಾಗಲೆ ಸಾಕಷ್ಟು ಮುಂದಿರುವ ಇತರ ಅನೇಕ ರಾಜ್ಯಗಳನ್ನು ಕರ್ನಾಟಕ ಕೂಡ ಸೇರಬಯಸುತ್ತದೆ ಎಂದು ತರಾತುರಿಯಲ್ಲಿ ಮೋದಿ ಅವರು ಕೆಲವೇ ನಿಮಿಷಗಳ ಭಾಷಣ ಮಾಡಿ ಟಾಟಾ ಹೇಳಿದ್ದರು. ಮೋದಿಯವರ ಈ ಮಾತುಗಳೇ ಹಲವರ ಕಣ್ಣು ಕೆಂಪಾಗುವಂತೆ ಮಾಡಿವೆ. ಬಹುಶಃ ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಮೋದಿಯವರಿಗೆ ಎಳ್ಳಷ್ಟೂ ಅರಿವಿಲ್ಲ ಎಂದು ಕರ್ನಾಟಕವನ್ನು ಬಿಂಬಿಸುವ ರೀತಿಗೆ ಅವರು ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರ @narendramodi ರೈತರ ಸಾಲ ಮನ್ನಾ ಮಾಡಿದೆಯೇ? ಬರಗಾಲದ ಸಮಯದಲ್ಲಿ ವಿಶೇಷ ಅನುದಾನ ನೀಡಿದೆಯೇ? 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದೆಯೇ? @siddaramaiah
— CM of Karnataka (@CMofKarnataka) October 29, 2017
ಇದಕ್ಕೆ ಪ್ರತಿಯಾಗಿ ಟ್ವೀಟ್ ಗಳ ಸುರಿಮಳೆಯನ್ನೇ ಸುರಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆಯೇ? ಬರಗಾಲದ ಸಮಯದಲ್ಲಿ ವಿಶೇಷ ಅನುದಾನ ನೀಡಿದೆಯೇ? 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದೆಯೇ? ಮೋದಿಯವರ ಮಾತುಗಳು ವಾಸ್ತವ ಅಲ್ಲ ಎಂದು ತಿರುಗೇಟು ನೀಡಿದ್ದರು.
Karnataka is amongst most developed states, @narendramodi promising Vikas is Bakwas !
— Prithvi Reddy (@aapkaprithvi) October 30, 2017
Seems to forget in which state he is campaigning !
ಸಿದ್ದರಾಮಯ್ಯನವರು ಮಾತ್ರವಲ್ಲ, ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದ ಚುಕ್ಕಾಣಿಯನ್ನು ಹಿಡಿದಿರುವ ಪೃಥ್ವಿ ರೆಡ್ಡಿಯವರು, ಕರ್ನಾಟಕ ಮುಂದುವರಿದ ಹಲವಾರು ರಾಜ್ಯಗಳ ಸಾಲಿನಲ್ಲಿದೆ. ಮೋದಿಯವರ ವಿಕಾಸದ ಭರವಸೆ ಬಕ್ವಾಸ್. ಯಾವ ರಾಜ್ಯದಲ್ಲಿ ಮಾತನಾಡುತ್ತಿದ್ದೇನೆ ಎಂಬುದರ ಅರಿವೇ ಅವರಿಗಿಲ್ಲ ಎಂದು ಟೀಕಾಪ್ರಹಾರ ಮಾಡಿದ್ದರು.
Karnataka ranks among the top third of the states in most measures. Even higher if you exclude small states like Delhi & Goa.
— Nitin Pai (@acorn) October 29, 2017
ಈ ಮಾತಿಗೆ ದನಿಗೂಡಿಸಿದ್ದ ತಕ್ಷಶಿಲಾ ಸಂಸ್ಥೆಯ ನಿರ್ದೇಶಕರಾಗಿರುವ ನಿತಿನ್ ಪೈ ಅವರು, ಕರ್ನಾಟಕ ದೇಶದ ಅತ್ಯುತ್ತಮ ರಾಜ್ಯಗಳಲ್ಲಿ ಒಂದಾಗಿದೆ. ದೆಹಲಿ, ಗೋವಾಗಳಂಥ ಸಣ್ಣ ರಾಜ್ಯಗಳನ್ನು ಹೊರತುಪಡಿಸಿದರೆ, ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಸಾಕಷ್ಟು ಮುಂದಿದೆ ಎಂದು ವಾಸ್ತವದ ಪರಿಚಯವನ್ನು ಅವರು ಮೋದಿಗೆ ಮಾಡಿಕೊಟ್ಟಿದ್ದರು.
ಅಭಿವೃದ್ಧಿಗಾಗಿ ಬೇರೆ ರಾಜ್ಯಗಳತ್ತ ಕರ್ನಾಟಕ ನೋಡಬೇಕು ಎಂದು ಕರ್ನಾಟಕಕ್ಕೇ ಹೇಳುವುದು ಚುನಾವಣಾ ಪ್ರಚಾರಕ್ಕೆ ಬಂದ ಯಾವುದೇ ರಾಜಕಾರಣಿಗೆ ಸರಿಹೋಗುತ್ತದೆ, ಪ್ರಧಾನಿ ನರೇಂದ್ರ ಮೋದಿಯವರಂಥವರಿಗಲ್ಲ ಎಂದು ಪತ್ರಕರ್ತ, ಉದ್ಯಮಿ ರೋಹಿನ್ ಧರ್ಮಕುಮಾರ್ ಅವರು ವ್ಯಂಗ್ಯಭರಿತ ಮಾತಿನ ಬಿಸಿ ಮುಟ್ಟಿಸಿದ್ದರು.
ಇದಲ್ಲದೆ, ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ನೋಡಿದರೆ, ಸಾಮಾಜಿಕ ಏರಿಳಿತ, ಆರೋಗ್ಯ, ಕಾನೂನು ಸುವ್ಯವಸ್ಥೆ, ಜನನ ಮರಣಗಳ ಪ್ರಮಾಣವನ್ನು ಗಮನಿಸಿದರೆ ಕರ್ನಾಟಕ ಹಲವಾರು ಅಭಿವೃದ್ಧಿಪರ ರಾಜ್ಯಗಳ ಸಾಲಿನಲ್ಲಿಯೇ ಸಾಗುತ್ತದೆ. ಕರ್ನಾಟಕದ ಸಾರಿಗೆ ಸಂಸ್ಥೆ ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ದಿಟ್ರೂಪಿಕ್ಚರ್ ವೆಬ್ ಸೈಟ್ ಕರ್ನಾಟಕದ ಅಭಿವೃದ್ಧಿಯ ಲೆಕ್ಕ ಕೊಟ್ಟಿದೆ.
ಮೋದಿಯವರು ಕರ್ನಾಟಕಕ್ಕೆ ಬರುವ ಮುನ್ನ ಮತ್ತು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಮುನ್ನ ಸಾಕಷ್ಟು ಸಿದ್ಧತೆ ಮಾಡಿಕೊಂಡು ಬಂದಿರಲಿಲ್ಲವೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಅಂದು ಕರ್ನಾಟಕದಲ್ಲಿ ಒಂದೆರಡಲ್ಲ, ಧರ್ಮಸ್ಥಳ, ಉಜಿರೆ, ಬೆಂಗಳೂರು ಮತ್ತು ಬೀದರದಲ್ಲಿ ಬಿಡುವಿಲ್ಲದ ಕಾರ್ಯಕ್ರಮ ಹಾಕಿಕೊಂಡೇ ಬಂದಿದ್ದರು.