ನೀತಿ ಸಂಹಿತೆ ಜಾರಿ; ಹಣ ಸಾಗಣೆಗೆ ಇರುವ ಮಾರ್ಗಸೂಚಿಗಳು
ಬೆಂಗಳೂರು, ಮಾರ್ಚ್ 30; ಕರ್ನಾಟಕದ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡುತ್ತಿದ್ದಂತೆಯೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ ಬಳಿಕ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಈ ಸಮಯದಲ್ಲಿ ಜಿಲ್ಲಾ ಗಡಿಗಳಲ್ಲಿ, ನಗರ ಪ್ರದೇಶದಲ್ಲಿ, ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಚೆಕ್ಪೋಸ್ಟ್ಗಳನ್ನು ರಚನೆ ಮಾಡಿಕೊಂಡು ಚುನಾವಣಾ ಅಕ್ರಮ ನಡೆಯದಂತೆ ಕಣ್ಗಾವಲು ಇಡಲಾಗುತ್ತದೆ.

ಚುನಾವಣಾ ಸಮಯದಲ್ಲಿ ಅಕ್ರಮಗಳನ್ನು ತಡೆಯಲು ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆ, ಪೊಲೀಸ್, ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡಲಿವೆ. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 2,400 ವಿಚಕ್ಷಣ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಅಕ್ರಮಗಳ ಮೇಲೆ ನಿಗಾವಹಿಸಲು 2016 ಸಂಚಾರಿ ತಂಡ ನಿಯೋಜಿಸಲಾಗಿದ್ದು ಎಲ್ಲಾ ವಿಮಾನ ನಿಲ್ದಾಣ, ಬಂದರು, ಹೆದ್ದಾರಿಗಳಲ್ಲಿ ತಪಾಸಣೆ ಮಾಡಲಾಗುತ್ತದೆ.
ಚೆಕ್ಪೋಸ್ಟ್ಗಳಲ್ಲಿ ಹಣ ಪತ್ತೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಲೇ ಇರುತ್ತದೆ. ಹಾಗಾದರೆ ಒಬ್ಬ ವ್ಯಕ್ತಿ ಎಷ್ಟು ಹಣವನ್ನು ಸಾಗಣೆ ಮಾಡಬಹುದು?, ದಾಖಲೆ ಇಲ್ಲದೇ ಹಣ ಸಾಗಣೆ ಮಾಡುತ್ತಿದ್ದರೆ ಏನು? ಮಾಡುತ್ತಾರೆ ಎಂಬ ಮಾಹಿತಿ ಇಲ್ಲಿದೆ. ಪ್ರತಿ ಜಿಲ್ಲೆಯ ಗಡಿಯಲ್ಲಿಯೂ ಚೆಕ್ಪೋಸ್ಟ್ ಇರುವುದರಿಂದ ಹಣವನ್ನು ಸಾಗಣೆ ಮಾಡುವಾಗ ಜನರು ಈ ಮಾಹಿತಿ ತಿಳಿದಿರುವುದು ಉತ್ತಮ.

ಎಷ್ಟು ಹಣ ಸಾಗಿಸಬಹುದು?; ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಒಬ್ಬ ವ್ಯಕ್ತಿ 50 ಸಾವಿರ ಮೊತ್ತದ ಹಣ ತೆಗೆದುಕೊಂಡು ಸಂಚಾರ ನಡೆಸಬಹುದು. ಆದರೆ ಪೂರಕ ದಾಖಲೆ ಇಟ್ಟುಕೊಂಡಿರಬೇಕು. ತಪ್ಪಿದ್ದಲ್ಲಿ ತಪಾಸಣಾ ಅವಧಿಯಲ್ಲಿ ಮುಟ್ಟುಗೋಲು ಹಾಕಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 50 ಸಾವಿರಕ್ಕಿಂತ ಹೆಚ್ಚು ಮೊತ್ತವನ್ನು ದಾಖಲೆಯೊಂದಿಗೆ ಇಟ್ಟುಕೊಂಡು ತೆರಳಿದ ಸಂದರ್ಭ ತಪಾಸಣಾ ಅವಧಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಮೊತ್ತವನ್ನು ಮುಟ್ಟುಗೋಲು ಹಾಕಲಾಗುತ್ತದೆ.
ವಾಹನಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚು ನಗದು ಇರುವುದು ತಪಾಸಣಾ ಅವಧಿಯಲ್ಲಿ ಕಂಡುಬಂದಲ್ಲಿ ಈ ಮೊತ್ತವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗುವುದು. ವಾಹನಗಳಲ್ಲಿ ಅನುಮಾನಾಸ್ಪದ ಸಾಮಗ್ರಿಗಳಾದ ಗೃಹ ಉಪಯೋಗಿ ವಸ್ತುಗಳು, ಮದ್ಯ, ಮಾದಕ ದ್ರವ್ಯಗಳು ಮತ್ತು ಆಯುಧಗಳನ್ನು ಸಾಗಿಸುವುದು ತಪಾಸಣಾ ಅವಧಿಯಲ್ಲಿ ಕಂಡುಬಂದರೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.
ಕಾರ್ಯಕ್ರಮ ನಡೆಸಬಹುದೇ?; ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ ನಿಶ್ಚಿತಾರ್ಥ, ಮದುವೆ, ನಾಮಕರಣ ಮತ್ತಿತರ ಖಾಸಗಿ ಸಮಾರಂಭಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಈ ಸಮಾರಂಭಗಳು ರಾಜಕೀಯ ಪ್ರೇರಿತವಾಗಿರಬಾರದು ಮತ್ತು ಯಾವುದೇ ಪಕ್ಷದ ಪ್ರಚಾರಕ್ಕೆ ವೇದಿಕೆಯಾಗಿರಬಾರದು ಎಂದು ಸೂಚನೆ ನೀಡಲಾಗಿದೆ.
ಮೆರವಣಿಗೆ, ವಾರ್ಷಿಕೋತ್ಸವ, ಜಾತ್ರೆ, ಸಾಮೂಹಿಕ ವಿವಾಹ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಚುನಾವಣಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು 24 ಗಂಟೆಯೊಳಗೆ ಅನುಮತಿ ನೀಡಲಿದ್ದಾರೆ.
ಕರ್ನಾಟಕವು 19 ಜಿಲ್ಲೆಗಳ ಜೊತೆ ಅಂತರರಾಜ್ಯ ಗಡಿಯನ್ನು ಹಂಚಿಕೊಂಡಿದೆ. 171 ಚೆಕ್ಪೋಸ್ಟ್ಗಳನ್ನು ಸ್ಥಾಪನೆ ಮಾಡಲಾಗಿದೆ. 6 ಜಿಲ್ಲೆಗಳು ಎರಡು ರಾಜ್ಯಗಳೊಂದಿಗೆ, 13 ಜಿಲ್ಲೆಗಳು ಒಂದು ರಾಜ್ಯದೊಂದಿಗೆ ಗಡಿ ಹಂಚಿಕೊಂಡಿವೆ. ಅಬಕಾರಿ ಇಲಾಖೆ 16 ಶಾಶ್ವತ ಚೆಕ್ಪೋಸ್ಟ್ ರಚನೆ ಮಾಡಿದ್ದು 24*7 ಇವು ಕಾರ್ಯ ನಿರ್ವಹಣೆ ಮಾಡಲಿವೆ. ನಿಗದಿತ ಪ್ರದೇಶದಲ್ಲಿ ತಾತ್ಕಾಲಿಕ ಚೆಕ್ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಒಟ್ಟು 2,400 ವಿಚಕ್ಷಣ ತಂಡ, 2016 ಸಂಚಾರಿ ತಂಡಗಳನ್ನು ಅಕ್ರಮ ಪತ್ತೆ ಹಚ್ಚಲು ನಿಯೋಜಿಸಲಾಗಿದೆ.












Click it and Unblock the Notifications