ಬಿಜೆಪಿಯವರು ಬಾಯಲ್ಲಿ ಬರಿ ಹಿಂದುತ್ವ; ಗಾಲಿ ಜನಾರ್ದನ ರೆಡ್ಡಿ ಹೀಗೆ ಹೇಳಿದ್ಯಾಕೆ?
ಕೊಪ್ಪಳ, ಜುಲೈ 27: ಬಿಜೆಪಿಯವರು ಬಾಯಲ್ಲಿ ಬರಿ ಹಿಂದುತ್ವ ಅಂತ ಹೇಳೋದು ಬಿಟ್ಟು ಭಗವಂತನ ಸೇವೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ರಾಮ ಜಪ, ಹನುಮ ಜಪ ನಡೆದಿತ್ತು. ಅಂಜನಾದ್ರಿಯಲ್ಲಿ ಕೆಲಸ ಮಾಡಬಹುದಿತ್ತು. ಆದರೆ ಬಿಜೆಪ ಸರಕಾರ ಗಮನ ನೀಡಲಿಲ್ಲ ಎಂದು ಆರೋಪಿಸಿದ ಅವರು, ಈ ಸರಕಾರದ ಸಿಎಂ ಸಿದ್ದರಾಮಯ್ಯ ಅವರಿಗೆ ಅಂಜನಾದ್ರಿ ಆಭಿವೃದ್ದಿ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಇನ್ನೂ ಅಂಜನಾದ್ರಿಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಉಳಿದುಕೊಳ್ಳಲು ಸೌಲಭ್ಯವಿಲ್ಲ. ಹೀಗಾಗಿ ಹೆಚ್ಚೆಚ್ಚು ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಅಂಜನಾದ್ರಿ ಅಭಿವೃದ್ಧಿ ವಿಚಾರ ಕುರಿತು ಜಿಲ್ಲಾಧಿಕಾರಿಗಳನ್ಜು ಭೇಟಿ ಮಾಡಿ ವಿವರಿಸುತ್ತೇನೆ. ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಬರುವ ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅಭಿವೃದ್ಧಿಗೆ ಭೂಸ್ವಾದೀನ ಕುರಿತು ರೈತರೊಂದಿಗೆ ಮಾತನಾಡುತ್ತೇನೆ. ಮೂಲ ಪ್ರಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದರು.
ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದ ಕುರಿತು ತನ್ವೀರ್ ಸೇಠ್ ಸರಕಾರಕ್ಕೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗನಿಸಿದಂತೆ ಆ ಪ್ರಕರಣ ಈಗ ಚಾರ್ಜ್ ಶೀಟ್ ಹಂತದಲ್ಲಿರಬಹುದು. ಅದನ್ನು ಕೋರ್ಟ್ ತೀರ್ಮಾನ ಮಾಡುತ್ತೆ ಎಂದರು. ಯಾರ ಸರಕಾರ ಇರುತ್ತೋ, ಇಲ್ಲವೋ ಅನ್ನೋದು ನನಗೆ ಸಂಬಂಧವಿಲ್ಲ. ಆಗಸ್ಟ್ ನಿಂದ ನಮ್ಮ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ.ರಾಜ್ಯ ಪ್ರವಾಸದ ನಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ತೀರ್ಮಾನಿಸಲಾಗುವದು ಎಂದು ಹೇಳಿದರು.
ಆನೆಗುಂದಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾನೂನಾತ್ಮಕ ಕ್ರಮಕ್ಕೆ ಸರಕಾರಕ್ಕೆ ಒತ್ತಾಯಿಸುತ್ತೇನೆ. ರಾಜ್ಯ ಸರಕಾರದ ಸಹಕಾರದ ಜೊತೆಗೆ ಕೇಂದ್ರ ಸರಕಾರದ ಸಹಕಾರ ಹಾಗೂ ಖಾಸಗಿಯವರ ಸಹಕಾರದೊಂದಿಗೆ ಅಂಜನಾದ್ರಿ ಅಭಿವೃದ್ಧಿ ಮಾಡುವ ಯೋಚನೆ ಇದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ರಸ್ತೆಗಳು ತುಂಬಾ ಹದಗೆಟ್ಟಿವೆ ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ನೀರು ಬಂದಾಗ ನಾಲೆಗೆ ನೀರು ಬಿಡುವ ಸಂದರ್ಭದಲ್ಲಿ ಕಾಲುವೆ ದುರಸ್ಥಿ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ತಕ್ಷಣ ನೀರು ಬಿಡಬೇಕು. ಈ ಹಿಂದೆ 30 ಟಿಎಂಸಿ ನೀರು ಸಂಗ್ರಹವಾದರೆ ಐಸಿಸಿ ಮೀಟಿಂಗ್ ಮಾಡದೆಯೇ ನಾಲೆಗಳಿಗೆ ನೀರು ಹರಿಸಬಹುದು.ಈಗ ಕಾಲುವೆ ದುರಸ್ಥಿ ಮಾಡುತ್ತಿದ್ದಾರೆ. ಇನ್ನೂ ಒಂದು ವಾರವಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂದರು.












Click it and Unblock the Notifications