Janardhan Reddy: ಗ್ಯಾರಂಟಿ ಯೋಜನೆ; ಕಾಂಗ್ರೆಸ್ನವರು ನನ್ನ ಯೋಜನೆಗಳನ್ನು ಕಾಪಿ ಮಾಡಿದ್ದಾರೆ ಎಂದ ಜನಾರ್ದನ ರೆಡ್ಡಿ
ಕೊಪ್ಪಳ, ಆಗಸ್ಟ್ 31: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳೆಲ್ಲಾ ನನ್ನ ಯೋಜನೆಗಳು, ನನ್ನ ಯೋಜನೆಗಳನ್ನ ಕಾಂಗ್ರೆಸ್ನವರು ಕಾಪಿ ಮಾಡಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿಯಿಂದ ಬುಧವಾರ ಹಮ್ಮಿಕೊಂಡ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಜಾರಿಗೊಳಿಸಿರುವ ಕಾರ್ಯಕ್ರಮಗಳು ನನ್ನ ಕಾರ್ಯಕ್ರಮಗಳು, ನಾನು ಘೋಷಿಸಿರುವ ಯೋಜನೆಗಳನ್ನ ಸಿದ್ದರಾಮಯ್ಯ ಅವರ ಕಿವಿಗೆ ಬಿದ್ದಿವೆ ಎಂದು ಹೇಳಿದ್ದಾರೆ.

ಈ ಯೋಜನೆಗಳನ್ನ ನಾನು ಚುನಾವಣೆಗೂ ಮುನ್ನವೇ ಘೋಷಿಸಿದೆ. ಯಾವುದೋ ಮೂಲದಿಂದ ನಾನು ಘೋಷಿಸಿರುವ ಯೋಜನೆಗಳು ಸಿದ್ದರಾಮಯ್ಯ ಅವರ ಕಿವಿಗೆ ಬಿದ್ದು ಅವುಗಳನ್ನು ಜಾರಿಗೊಳಿಸುತ್ತಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೂ ಮೂರು ತಿಂಗಳು ಮುನ್ನ ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನ ಮಾಡಿದಾಗ ಹಲವು ಯೋಜನೆಗಳನ್ನು ಘೋಷಿಸಿದ್ದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಇನ್ನೂ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಮಾಸಾಶನ, ನಿರುದ್ಯೋಗಿಗಳಿಗೆ ಮಾಸಾಶಾನ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆ. ಅಂಜನಾದ್ರಿಯ ಆಂಜನೇಯ ಸ್ವಾಮಿ ಕೃಪೆಯಿಂದ ನನ್ನ ಕೆಲಸಗಳನ್ನು ಸಿದ್ದರಾಮಯ್ಯ ಅವರು ಜಾರಿಗೊಳಿಸುತ್ತಿದ್ದಾರೆ ಎಂದು ಮಾಜ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸರ್ಕಾರ ನೀಡುವ 2 ಸಾವಿರ ರೂ.ನಿಂದ ನಿಮ್ಮ ಮನೆ ನಡೆಯುತ್ತೆ ಎಂದಲ್ಲ, ಸರ್ಕಾರ ಕೊಟ್ಟರೂ, ಕೊಡದಿದ್ದರೂ ನಿಮ್ಮ ಜೀವನ ನೀವು ಮಾಡ್ತಿದ್ದೀರಿ. ನಿಮ್ಮ ಕಷ್ಟ, ನಿಮ್ಮ ದುಡಿಮೆಯಿಂದ ಜೀವನ ಮಾಡುತ್ತಿದೀರಿ ಎಂದು ಹೇಳಿದ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಹಟ್ಟಿ ಗ್ರಾಮವನ್ನು ಗೃಹಲಕ್ಷ್ಮೀ ಯೋಜನೆ ಜಾರಿಗೆ ಆಯ್ಕೆಮಾಡಿಕೊಂಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಇನ್ನೂ ರಾಜ್ಯದ ಪ್ರತಿ ಕುಟುಂಬವು ಆರ್ಥಿಕವಾಗಿ ತೊಂದರೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ನಾನಾ ಯೋಜನೆಗಳ ಮೂಲಕ ಸವಲತ್ತುಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬರೂ ಅವುಗಳ ಲಾಭ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡುವ ಮೂಲಕ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತಿದೆ. ಇದರಿಂದ ಕುಟುಂಬದವರ ಆರ್ಥಿಕ ಸಂಕಷ್ಟ ದೂರ ಮಾಡಬಹುದು ಎಂದು ಹೇಳಿದರು.












Click it and Unblock the Notifications