ರಾಜಕೀಯವಾಗಿ ಮತ್ತೆ ಎದ್ದು ಬರ್ತಾರಾ ಬಸನಗೌಡ ಪಾಟೀಲ್ ಯತ್ನಾಳ್?
ಬೆಂಗಳೂರು, ಮಾರ್ಚ್ 31: ಬಿಜೆಪಿಯಲ್ಲಿದ್ದುಕೊಂಡು ಪಕ್ಷದ ವೇದಿಕೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುವ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವನ್ನು ಬಿಜೆಪಿಯ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದರೆ ಇವತ್ತು ಅವರು ಅತಂತ್ರ ಆಗುತ್ತಿರಲಿಲ್ಲ ಅವರು ಮಾಡಿದ್ದನ್ನು ಜನ ಕೂಡ ಒಪ್ಪಿಕೊಳ್ಳುತ್ತಿದ್ದರೇನೋ? ಆದರೆ ಅವರ ನಡವಳಿಕೆ ಅವರ ರಾಜಕೀಯ ಭವಿಷ್ಯದ ಜತೆಗೆ ಬಿಜೆಪಿ ಪಕ್ಷಕ್ಕೂ ಒಂದಷ್ಟು ಹೊಡೆತ ನೀಡುವಂತೆ ಮಾಡಿರುವುದಂತು ಸತ್ಯ. ಆದರೀಗ ಯತ್ನಾಳ್ ಅವರ ಮುಂದಿನ ನಡೆಯೇನು ಎಂಬುದು ಮಾತ್ರ ಕುತೂಹಲಕಾರಿಯಾಗಿದೆ.
ಮಾತು ಆಡಿದರೆ ಹೋಯ್ತು.. ಮುತ್ತು ಒಡೆದರೆ ಹೋಯ್ತು.. ಎಂಬ ಹಿರಿಯರ ಮಾತು ಯತ್ನಾಳ್ ಅವರ ವಿಚಾರದಲ್ಲಿ ನೂರರಷ್ಟು ನಿಜವಾಗಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರ ಮೇಲಿನ ವೈಯಕ್ತಿಕ ದ್ವೇಷವನ್ನು ಬಹಿರಂಗವಾಗಿ ಹೊರ ಹಾಕುವ ಮೂಲಕ ಅಪ್ಪ ಮಕ್ಕಳ ತೇಜೋವಧೆ ಮಾಡುವ ಭರದಲ್ಲಿ ಪಕ್ಷಕ್ಕೆ ಮುಜುಗರ ತಂದಿದ್ದಂತು ನಿಜ. ಪಕ್ಷವನ್ನು ಉದ್ಧಾರ ಮಾಡುತ್ತೇನೆ ಎಂದು ಹೇಳುತ್ತಲೇ ಶಿಸ್ತಿನ ಪಕ್ಷದ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ ಕೀರ್ತಿ ಯತ್ನಾಳ್ ಅವರಿಗೆ ಸಲ್ಲುತ್ತದೆ.

ಯಾವುದೇ ರಾಜಕೀಯ ಪಕ್ಷವಿರಲಿ ಎಲ್ಲ ಪಕ್ಷಗಳಲ್ಲೂ ಸರ್ವ ನಾಯಕರು ಒಗ್ಗಟ್ಟಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಬಣ ಜಗಳಗಳು ಇದ್ದೇ ಇರುತ್ತವೆ. ಆದರೆ ನಾಯಕರಾದವರು ಅದೆಲ್ಲವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಪರಿಹಾರ ಕಂಡು ಕೊಂಡರೆ ನಾಯಕರಾದವರಿಗೊಂದು ಗೌರವವಿರುತ್ತದೆ. ಅದನ್ನು ಹೊರತು ಪಡಿಸಿ ಸ್ವಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಅಸಮಾಧಾನವನ್ನು ಹೊರಹಾಕುವುದೆಷ್ಟು ಸರಿ? ಇದರಿಂದ ಆರೋಪ ಮಾಡುವ ನಾಯಕನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಯತ್ನಾಳ್ ಪ್ರಕರಣದಲ್ಲಿ ಸಾಭೀತಾಗಿದೆ.
ಯಡಿಯೂರಪ್ಪ - ಅನಂತ ಕುಮಾರ್ ವಿರೋಧಿಗಳಾಗಿದ್ದರು!
ಯತ್ನಾಳ್ ಅವರು ಕಳೆದ ಕೆಲವು ವರ್ಷಗಳಿಂದ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ. ಅದಕ್ಕೆ ವೈಯಕ್ತಿಕ ಮತ್ತು ರಾಜಕೀಯ ಕಾರಣಗಳು ಹಲವಾರು ಇರಬಹುದೇನೋ? ಈ ವಿಚಾರದಲ್ಲಿ ಯತ್ನಾಳ್ ಅವರು ಪಕ್ಷದ ನಿಯಮ, ಸಿದ್ಧಾಂತದಂತೆ ನಡೆದುಕೊಂಡಿದ್ದರೆ ಬಹುಶಃ ಉಚ್ಛಾಟನೆಯ ಪರಿಸ್ಥಿತಿ ಬಂದೊದಗುತ್ತಿರಲಿಲ್ಲವೇನೋ? ನಿಜಹೇಳಬೇಕೆಂದರೆ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಇವತ್ತಿಗೂ ಹಲವು ನಾಯಕರಿಗೆ ಅಸಮಾಧಾನವಿದೆ. ಹಿಂದೆ ಕೇಂದ್ರ ನಾಯಕರಾಗಿದ್ದ ಅನಂತ್ ಕುಮಾರ್ ಪ್ರಬಲ ವಿರೋಧಿಗಳಾಗಿದ್ದರು. ಅದು ಎಲ್ಲರಿಗೂ ಗೊತ್ತಿತ್ತು. ಆದರೆ ಯಾವತ್ತೂ ಬೀದಿ ರಂಪ ಮಾಡಿಕೊಂಡಿರಲಿಲ್ಲ.

ಬಿ.ಎಸ್.ಯಡಿಯೂರಪ್ಪ ನನ್ನನ್ನು ರಾಜಕೀಯವಾಗಿ ತುಳಿಯುತ್ತಿದ್ದಾರೆ ಎನ್ನುವ ಆಕ್ರೋಶ ಯತ್ನಾಳ್ ಅವರಿಗಿದೆ. ಹಿಂದೆ ಬಿಜೆಪಿ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಯತ್ನಾಳ್ ಗೆ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಇದು ಅವರನ್ನು ಕೆರಳಿಸಿತ್ತು. ಹೀಗಾಗಿ ತಮ್ಮದೇ ನಾಯಕರ ಮೇಲೆ ಆಗಾಗ್ಗೆ ಆರೋಪ, ಟೀಕೆ ಮಾಡುವ ಮೂಲಕ ಸಮಾಧಾನಪಟ್ಟುಕೊಳ್ಳುವ ಕೆಲಸಕ್ಕೆ ಕೈ ಹಾಕಿಬಿಟ್ಟರು. ಇದರಿಂದ ಯತ್ನಾಳ್ ಗೆ ಒಂದಷ್ಟು ಸಮಾಧಾನ ಸಿಗುತ್ತಿತ್ತು. ಜತೆಗೆ ದೊಡ್ಡ ಮಟ್ಟದಲ್ಲಿ ಪ್ರಚಾರವಾಗುತ್ತಿದ್ದರು. ಆದರೆ ಇವರ ನಡವಳಿಕೆ ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರಿಗೆ ಮುಜುಗರ ತಂದಿದ್ದಂತು ನಿಜ.
ಯತ್ನಾಳ್ ಒಬ್ಬ ಧೈರ್ಯವಂತ ನಾಯಕ..ಆದರೆ?
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಿಂದತ್ವ ವಿಚಾರದಲ್ಲಿ ಹಿಂದೂ ಹುಲಿ. ಆದರೆ ಮಾತಿನ ಮೇಲೆ ನಿಗಾವಿಲ್ಲದ ಕಾರಣದಿಂದಾಗಿ ಹಲವು ರೀತಿಯ ತೊಂದರೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರು ಹೇಳುವ ವಿಚಾರಗಳು ಸತ್ಯವೇ ಆಗಿರುತ್ತದೆ. ಅದನ್ನು ವ್ಯಕ್ತಪಡಿಸುವ ರೀತಿ ನೀತಿಗಳು ಸರಿಯಿಲ್ಲವಷ್ಟೆ. ಹೀಗಾಗಿ ಸಂಕಷ್ಟಗಳಿಗೆ ತಾವೇ ಕೊರಳೊಡ್ಡಿ ಬಿಡುತ್ತಿದ್ದಾರೆ. ಆದರೆ ಎಲ್ಲವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಅವರಿಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮೂರು ಬಾರಿ ಒಬ್ಬ ನಾಯಕ ಉಚ್ಛಾಟನೆ ಶಿಕ್ಷೆ ಅನುಭವಿಸುವುದು ರಾಜಕೀಯದಲ್ಲಿ ಸಾಮಾನ್ಯದ ಸಂಗತಿಯಲ್ಲ. ಇದರ ಮಧ್ಯೆ ನಾನು ಮತ್ತೆ ಎದ್ದು ಬರುತ್ತೇನೆ ಎನ್ನುವ ಅವರ ಧೈರ್ಯವನ್ನು ಮೆಚ್ಚಿಕೊಳ್ಳಲೇ ಬೇಕು.

ಹಿಂದೆ ಯತ್ನಾಳ್ ಉಚ್ಛಾಟನೆಗೊಂಡಾಗ ಅವರಿಗೆ ಅವಕಾಶಗಳು ಜಾಸ್ತಿಯಿದ್ದವು. ಜೆಡಿಎಸ್ ಸೇರಿದಂತೆ ಇನ್ಯಾವುದಾದರೂ ಪಕ್ಷಕ್ಕೆ ಸೇರಿಕೊಳ್ಳಬಹುದಿತ್ತು. ಆದರೆ ಇವತ್ತು ಹಾಗಿಲ್ಲ. ಈ ನಡುವೆ ಕಾಂಗ್ರೆಸ್ ನ ಒಂದೆರಡು ನಾಯಕರು ಬಹಿರಂಗ ಆಹ್ವಾನ ನೀಡಿದ್ದಾರೆ. ಯತ್ನಾಳ್ ಕಾಂಗ್ರೆಸ್ ಸೇರುವುದು ಸಾಧ್ಯವಾಗದ ಮಾತು. ಅದನ್ನು ಕಾಂಗ್ರೆಸ್ಸಿಗರೇ ಒಪ್ಪಲಾರರು. ಅದಕ್ಕಿಂತ ಹೆಚ್ಚಾಗಿ ಒಂದು ವೇಳೆ ಕಾಂಗ್ರೆಸ್ ಕಡೆಗೆ ಮುಖ ಮಾಡಿದರೆ ಅದೊಂದು ಇತಿಹಾಸ ಸೃಷ್ಟಿ ಮಾಡಿದಂತಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಹಿಂದುತ್ವವನ್ನು ಮೂಲವಾಗಿಟ್ಟುಕೊಂಡು ಪಕ್ಷ ಕಟ್ಟುವ ಆಲೋಚನೆ ಅವರಲ್ಲಿದೆ ಎಂಬುದು ಗೊತ್ತಾಗುತ್ತಿದೆ.
ರಾಜ್ಯದಲ್ಲಿ ಹೊಸ ಪಕ್ಷ ಕಟ್ಟಿದವರ ಕಥೆ ಏನಾಗಿದೆ?
ರಾಜ್ಯದ ಮಟ್ಟಿಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನ್ನು ಹೊರತು ಪಡಿಸಿ ಪಕ್ಷ ಕಟ್ಟಿದವರ ಕಥೆ ಏನಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಬಿ.ಎಸ್.ಯಡಿಯೂರಪ್ಪ ಪಕ್ಷದಿಂದ ಹೊರಹೋಗಿ ಕೆಜೆಪಿ ಕಟ್ಟಿದರೂ ಅದು ಉದ್ಧಾರವಾಗಲಿಲ್ಲ, ಇನ್ನು ಶ್ರೀರಾಮುಲು, ಜನಾರ್ಧನ ರೆಡ್ಡಿ ಎಲ್ಲರೂ ಬಿಜೆಪಿಯನ್ನು ತ್ಯಜಿಸಿ ಸ್ವಂತ ಪಕ್ಷ ಕಟ್ಟಿದವರೇ ಆದರೆ ಅವರನ್ನು ಪಕ್ಷ ಕೈಹಿಡಿಯಲೇ ಇಲ್ಲ. ಪರಿಣಾಮ ಮತ್ತೆ ಬಿಜೆಪಿ ಕಡೆಗೆ ಮುಖ ಮಾಡುವಂತಾಯಿತು.
ರಾಜ್ಯದಲ್ಲಿ ಅದೆಷ್ಟು ನಾಯಕರು ಹೊಸದಾಗಿ ಪಕ್ಷ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಯಾರೂ ಕೂಡ ಯಶಸ್ವಿಯಾದ ಉದಾಹರಣೆಗಳಿಲ್ಲ. ಇತ್ತೀಚೆಗಿನ ಒಂದೆರಡು ದಶಕಗಳ ಹಿಂದೆ ಸ್ಥಾಪಿಸಲ್ಪಟ್ಟ ವಾಟಾಳ್ ಪಕ್ಷ, ತದನಂತರ ಮಲ್ಯ, ಅಶೋಕ್ ಖೇಣಿ, ವಿಜಯಸಂಕೇಶ್ವರ್, ಕವಿತಾಕೃಷ್ಣ ರೆಡ್ಡಿ, ಉಪೇಂದ್ರ ಹೀಗೆ ಹತ್ತಾರು ಜನರು ಪಕ್ಷ ಸ್ಥಾಪಿಸುವ ಕೆಲಸ ಮಾಡಿದ್ದಾರೆ. ಆದರೆ ಯಾರೂ ಕೂಡ ಯಶಸ್ಸು ಕಾಣಲೇ ಇಲ್ಲ. ಹೀಗಿರುವಾಗ ಯತ್ನಾಳ್ ಹೊಸ ಪಕ್ಷ ಕಟ್ಟುವ ಮಾತನಾಡುತ್ತಿದ್ದಾರೆ. ಅದರ ಜತೆಯಲ್ಲಿ ಮತ್ತೆ ಬಿಜೆಪಿಗೆ ಬರ್ತೀನಿ ಎಂಬ ಮಾತನ್ನು ಕೂಡ ಆಡುತ್ತಿದ್ದಾರೆ. ಒಟ್ಟಾರೆ ಯತ್ನಾಳ್ ನಡೆ ಕುತೂಹಲ ಕೆರಳಿಸುತ್ತಿರುವುದಂತು ನಿಜ.












Click it and Unblock the Notifications