ಕಚೇರಿಯಲ್ಲಿ ಸಿಬ್ಭಂದಿಗಳು ಗೈರು; ಸಚಿವರಿಂದ ಖಡಕ್ ಎಚ್ಚರಿಕೆ
ಬೆಂಗಳೂರು, ಫೆಬ್ರವರಿ 24 : ಜನರ ದೂರುಗಳನ್ನು ಆಲಿಸಿ ಪರಿಹಾರ ನೀಡಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಆದರೆ, ಕೇಂದ್ರದಲ್ಲಿ ಸಿಬ್ಬಂದಿಗಳು ಗೈರಾಗಿದ್ದನ್ನು ಕಂಡು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ಖಡಕ್ ಎಚ್ಚರಿಕೆ ನೀಡಿದರು.
ಸೋಮವಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಇಲಾಖೆಯ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿನ ಅವ್ಯವಸ್ಥೆಗಳನ್ನು ನೋಡಿ ಸಿಬ್ಬಂದಿ ವರ್ಗದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡರು. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದಿದ್ದಕ್ಕೆ ಆಕ್ರೋಶಗೊಂಡರು. ಪುಸ್ತಕ ಇರೋದು ಯಾಕೆ?, ಸಹಿ ಹಾಕಬೇಕು ಅಲ್ವಾ ಹುಡುಗಾಟಕ್ಕೆ ಇದೆ ಅಂತ ತಿಳಿದುಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದರು.

ಸಹಾಯವಾಣಿ ಕೇಂದ್ರದಲ್ಲಿ ಫೋನ್ ಕರೆಗಳನ್ನು ಸ್ವೀಕರಿಸಿದ ಕೆ. ಗೋಪಾಲಯ್ಯ ಜನರ ಸಮಸ್ಯೆ ಆಲಿಸಿದರು. ಕೇಂದ್ರಕ್ಕೆ ಸರ್ವರ್ ಡೌನ್, ಕಡಿಮೆ ಅಕ್ಕಿ ಕೊಡುತ್ತಿದ್ದಾರೆ ಮುಂತಾದ ದೂರುಗಳು ಹೆಚ್ಚಾಗಿ ಬರುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೇಂದ್ರದಲ್ಲಿ ಶೇ 50ರಷ್ಟು ಸಿಬ್ಬಂದಿಗಳು ಗೈರಾಗಿದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಚಿವರು ಇನ್ನು ಮುಂದೆ ಈ ರೀತಿ ನಡೆಯಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟರು. ಸಮಯಕ್ಕೆ ಸರಿಯಾಗಿ ಬಾರದ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.











Click it and Unblock the Notifications