ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದಾಗಲೇ ಸಿಟ್ಟು ಕುದಿಯಲು ಶುರುವಾಗಿತ್ತು!
ಪಕ್ಷೇತರರಿಬ್ಬರಿಗೆ ಸಚಿವ ಸ್ಥಾನ ನೀಡಿದ್ದೇ ಮಿತ್ರ ಪಕ್ಷಗಳ ಮಧ್ಯೆ ಬಿರುಕು ಉಂಟಾಗುವುದಕ್ಕೆ ಕಾರಣ ಆಯಿತಾ? ಹೌದು ಎನ್ನುತ್ತಿವೆ ಎರಡೂ ಪಕ್ಷದ ಮೂಲಗಳು. ನಾಗೇಶ್ ಹಾಗೂ ಶಂಕರ್ ರನ್ನು ಸಚಿವರನ್ನಾಗಿ ಮಾಡಿದಾಗ ಕಾಂಗ್ರೆಸ್ ನ ಹಿರಿಯರಲ್ಲಿ ಸಿಟ್ಟು ಕೊತ ಕೊತ ಕುದಿಯಲು ಆರಂಭಿಸಿತ್ತು. ಇನ್ನು ಜೆಡಿಎಸ್ ನಿಂದ ವಿಶ್ವನಾಥ್ ಗೆ ಸಿದ್ದರಾಮಯ್ಯ ಅವರಿಗೆ ಉತ್ತರ ನೀಡುವ ಅನಿವಾರ್ಯ ಇತ್ತು. ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಆಕ್ರೋಶ ಸೃಷ್ಟಿ ಆಯಿತು.
ರಾಮಲಿಂಗಾ ರೆಡ್ಡಿ, ಬಿ.ಸಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಿಂದ ಕೆಲವರಿಗೆ ಸಚಿವ ಸ್ಥಾನ ದೊರೆಯುವ ಬಗ್ಗೆ ಸುದ್ದಿ ಹರಿದಾಡಿತು. ಕೊನೆ ಕ್ಷಣದಲ್ಲಿ ಎಲ್ಲವೂ ಬದಲಾಗಿ, ಇಬ್ಬರಷ್ಟೇ ಸಚಿವರಾದರು. ಹುದ್ದೆ ಕೊಡುವುದಾಗಿ ಹೇಳಿ, ಕೊನೆ ಕ್ಷಣದಲ್ಲಿ ತಪ್ಪಿಸಿದರು. ನನಗೆ ಅಸಮಾಧಾನ ಇದೆ ಎಂದು ಬಿ.ಸಿ.ಪಾಟೀಲ್ ಮಾಧ್ಯಮಗಳ ಎದುರು ಹೇಳಿದ್ದರು.
ಕುಮಾರಸ್ವಾಮಿ ಅವರಿಗೆ ಸರಕಾರ ಉಳಿಸುವುದೇ ಆದ್ಯತೆ ಹೊರತು ಕಾಂಗ್ರೆಸ್ ಅಸಮಾಧಾನ ತಣ್ಣಗಾಗಿಸುವುದು ತನ್ನ ಜವಾಬ್ದಾರಿ ಅಲ್ಲ ಎಂಬಂತೆ ನಡೆದುಕೊಂಡಿದ್ದಾರೆ ಎಂಬುದು ಕೂಡ ಕಾಂಗ್ರೆಸ್ ನೊಳಗೆ ಸಿಟ್ಟಾಗಿ ಪರಿವರ್ತನೆ ಆಯಿತು. ಈ ಬಗ್ಗೆ ಖಾಸಗಿಯಾಗಿ ಕಾಂಗ್ರೆಸ್- ಜೆಡಿಎಸ್ ಪಕ್ಷದ ಹಿರಿಯ ನಾಯಕರು ಅಸಮಾಧಾನ ಹೊರ ಹಾಕುತ್ತಾರೆ.

ಉತ್ತರ ಕರ್ನಾಟಕ ಭಾಗದ ಜೆಡಿಎಸ್ ನ ಹಿರಿಯ ಮುಖಂಡರಾದ ಬಸವರಾಜ ಹೊರಟ್ಟಿ ಅವರೂ ಈ ಮೈತ್ರಿ ಸರಕಾರದ ಉಳಿವಿನ ಬಗ್ಗೆ ಆನುಮಾನ ವ್ಯಕ್ತಪಡಿಸಿದ್ದರು. ಹಾಗಿದ್ದರೆ ಈ ಸರಕಾರ ಉಳಿಸಿಕೊಳ್ಳಲು ಏನು ಮಾಡಬಹುದಿತ್ತು? ಪಕ್ಷೇತರರಿಗೆ ಸಚಿವ ಸ್ಥಾನ ನೀಡದಿದ್ದರೆ ಎರಡೂ ಪಕ್ಷದ ಹಿರಿಯ ನಾಯಕರನ್ನು ಕೆರಳಿಸದಂತೆ ನೋಡಿಕೊಳ್ಳಬಹುದಿತ್ತು.
ಆದರೆ, ಈಗ ಪರಿಸ್ಥಿತಿ ವಿಪರೀತಕ್ಕೆ ಹೋಗಿದೆ. ಒಂದು ಕಡೆ ನಾಗೇಶ್, ಶಂಕರ್ ಗೆ ಸಚಿವ ಸ್ಥಾನ ನೆಪಕ್ಕೆ ನೀಡಿದರು ಎಂಬ ಸಿಟ್ಟು ಅವರಿಬ್ಬರಲ್ಲಿ ಇದೆ. ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ನಮ್ಮ ಹಿರಿತನವನ್ನು ಕಡೆಗಣಿಸಲಾಗಿದೆ ಎಂಬುದು ಕಾಂಗ್ರೆಸ್ ಹಿರಿಯ ನಾಯಕರ ಧಾಟಿ. ಒಟ್ಟಿನಲ್ಲಿ ಮೈತ್ರಿ ಸರಕಾರ ಬಹುತೇಕ ಬಿದ್ದುಹೋಗುವ ಸ್ಥಿತಿಯಲ್ಲಿದೆ.












Click it and Unblock the Notifications