'ನಾನು ಸುಳ್ಳು ಹೇಳಿದ್ದರೆ ಅದರ ಶಾಪ ನನ್ನ ಕುಟುಂಬಕ್ಕೆ ತಟ್ಟಲಿ'
ಬೆಂಗಳೂರು, ಸೆಪ್ಟೆಂಬರ್ 12 : 'ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಅದರ ಶಾಪ ನನ್ನ ಕುಟುಂಬಕ್ಕೆ ತಟ್ಟಲಿ. ಕುಟುಂಬ ಸರ್ವನಾಶವಾಗಲಿ' ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಸಚಿವರು, 'ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂದು ಸಿದ್ದಗಂಗಾ ಶ್ರೀಗಳು ಹೇಳಿದ್ದು ಸತ್ಯ. ಶ್ರೀಗಳು ಹೇಳಿದ್ದನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ನಾನು ಹೇಳಿದ್ದೇನೆ' ಎಂದು ಸ್ಪಷ್ಟಪಡಿಸಿದರು.

'ಶ್ರೀಗಳು ನನ್ನ ಜೊತೆ ಮಾತನಾಡಿದ್ದನ್ನು ಜೊತೆಗಿದ್ದ ಕೆಲವರು ರೆಕಾರ್ಡ್ ಮಾಡುತ್ತಿದ್ದರು. ಆದರೆ, ಮಠದ ಸಿಬ್ಬಂದಿ ರೆಕಾರ್ಡ್ ಮಾಡದಂತೆ ಸೂಚಿಸಿದರು. ಆದ್ದರಿಂದ, ಶ್ರೀಗಳ ಹೇಳಿಕೆಯನ್ನು ರೆಕಾರ್ಡ್ ಮಾಡಿಲ್ಲ. ಯಡಿಯೂರಪ್ಪ, ವಿ.ಸೋಮಣ್ಣ ಅವರಿಗೆ ಶ್ರೀಗಳು ಹೇಳಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ತಿರುಚಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ' ಎಂದರು.
'ಒಂದು ವೇಳೆ ನಾನು ಸುಳ್ಳು ಹೇಳಿದ್ದರೆ ಆ ಶಾಪ ನನ್ನ ಕುಟುಂಬಕ್ಕೆ ತಟ್ಟಲಿ. ನನ್ನ ಕುಟುಂಬ ಸರ್ವನಾಶವಾಗಲಿ. ಪತ್ನಿ ಮಕ್ಕಳ ಜೊತೆ ನಾನು ಮಠಕ್ಕೆ ಹೋಗಿ ತಲೆ ತಗ್ಗಿಸಿ ಕೂರುತ್ತೇನೆ. ನಾನು ಸುಳ್ಳು ಹೇಳಿಲ್ಲ. ಪತ್ರಿಕಾಗೋಷ್ಠಿ ಮಾಡುವಾಗ ಪ್ರಮಾಣ ಮಾಡಿ ಹೇಳಿದ್ದದೇನೆ' ಎಂದು ಎಂ.ಬಿ.ಪಾಟೀಲ್ ಹೇಳಿದರು.
'ಶ್ರೀಗಳು ಅವರಾಗಿಯೇ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂದು ಹೇಳಿದ್ದಾರೆ. ವೀರಶೈವ ಪದ ಇತ್ತೀಚೆಗೆ ಬಳಕೆಗೆ ಬಂದಿದೆ. ನಾನು ಸುಳ್ಳು ಹೇಳುತ್ತಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದರು.












Click it and Unblock the Notifications