Madhu Bangarappa: ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ; ಬಿಜೆಪಿ ಇನ್ನಾದರೂ ಭಾವನಾತ್ಮಕ ವಿಷಯ ಬಿಡಲಿ: ಮಧು ಬಂಗಾರಪ್ಪ
ಉತ್ತರ ಕನ್ನಡ, ಜೂನ್ 05: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಇನ್ನಾದರೂ ಭಾವನಾತ್ಮಕ ವಿಷಯಗಳನ್ನು ಬಿಟ್ಟು ಕಾರ್ಯಕ್ರಮ ರೂಪದಲ್ಲಿ ಜನರ ಮುಂದೆ ಹೋಗುವುದನ್ನು ಬಿಜೆಪಿ ಕಲಿಯಲಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಚುನಾವಣೆ ವೇಳೆ ಪ್ರಧಾನಿ ಮೋದಿ ಬಂದಾಗ ಜೈ ಭಜರಂಗಿ ಎನ್ನುತ್ತಾ ಮತಯಾಚಿಸಿದರು. ಅವರು ಪ್ರಚಾರಕ್ಕೆ ಹೋದ ಹೆಚ್ಚಿನ ಕಡೆಗಳಲ್ಲಿ ಬಿಜೆಪಿ ಸೋತಿದೆ. ಜನ ಭಾವನಾತ್ಮಕ ವಿಷಯಗಳಿಗೆ ಕಿವಿಗೊಡಲಿಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಶಿಕ್ಷೆ ನೀಡಿದ್ದಾರೆ ಎಂದರು.

ಇನ್ನೂ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವ ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದೆ. ಸಮಾನತೆ ತರುವ ಕಾರ್ಯಕ್ರಮ ಇದಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲಿಂದ ಅನುದಾನ ನೀಡುತ್ತಾರೆ ಎಂಬ ಆತಂಕ ಬೇಡ. ಸ್ವಲ್ಪ ಹೊರೆಯಾಗುತ್ತದೆ. ಸೋರಿಕೆ ತಡೆಗಟ್ಟುವ ಮೂಲಕ ಇದನ್ನು ನಿಭಾಯಿಸುವ ಶಕ್ತಿ ಕಾಂಗ್ರೆಸ್ ಸರಕಾರಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಲೆಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಬಹುತೇಕ ಪೂರೈಕೆಯಾಗಿದೆ. ಈ ನಡುವೆ ಪಠ್ಯಪುಸ್ತಕ ಪರಿಷ್ಕರಣೆ ಅವಶ್ಯಕತೆಯಿದೆ. ಮಕ್ಕಳಿಗೆ ಅವಶ್ಯಕತೆ ಇದ್ದದ್ದನ್ನು ಮಾತ್ರ ಹೇಳಿಕೊಡಬೇಕಿದೆ. ತಪ್ಪು ದಾರಿಗೆ ಕೊಂಡೊಯ್ದರೆ ಅವರ ಭವಿಷ್ಯ ಸರಿ ಹೋಗುವುದಿಲ್ಲ. ಅಂಥವುಗಳನ್ನು ನೂರಕ್ಕೆ ನೂರು ತೆಗೆಯುತ್ತೇವೆ. ಕನ್ನಡ ಹಾಗೂ ಸಮಾಜ ವಿಜ್ಞಾನದಲ್ಲಿ ಬದಲಾವಣೆ ಮಾಡಲೇಬೇಕಿದೆ. 10 ದಿನದೊಳಗೆ ಸಪ್ಲಿಮೆಂಟರಿ ಮಾಡುತ್ತೇವೆ. ಸಿಎಂ ಮಾರ್ಗದರ್ಶನದಲ್ಲಿ ಪರಿಷ್ಕರಣೆ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಶಿಕ್ಷಣ ಸಚಿವರಾದ ಮೇಲೆ ಎರಡು ಹಂತದಲ್ಲಿ ಸಭೆ ಮಾಡಿದ್ದೇನೆ. ಇಲಾಖೆಯ ವ್ಯಾಪ್ತಿಯಲ್ಲಿ1.20 ಕೋಟಿ ಮಕ್ಕಳಿದ್ದಾರೆ. ಮೂರು ಲಕ್ಷ ಶಿಕ್ಷಕರಿದ್ದಾರೆ. ಶಿಕ್ಷಕರ ಕೊರತೆ, ಮೂಲಸೌಲಭ್ಯ ಕೊರತೆ ನೀಗಿಸುತ್ತೇವೆ. 8,500 ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚಿಸಿದ್ದೇನೆ ಎಂದರು. ಮುಂದಿನ 2024ರ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕದಲ್ಲಿಆಗಬೇಕಾದ ಬದಲಾವಣೆ ಬಗ್ಗೆ ಇನ್ನೆರಡು ತಿಂಗಳಲ್ಲಿ ಸಮಿತಿ ರಚನೆ ಮಾಡಿ ಕ್ರಮಕ್ಕೆ ಈಗಿನಿಂದಲೇ ಸಿದ್ಧತೆ ನಡೆಸುತ್ತೇವೆ ಎಂದರು.












Click it and Unblock the Notifications