ತಮ್ಮದೇ ಪಕ್ಷದ ಮುಖಂಡನಿಗೆ ಮತ್ತೆ ಬುದ್ದಿವಾದ ಹೇಳಿದ ಈಶ್ವರಪ್ಪ
ವಿಜಯಪುರ, ಆ 22: " ಅದೆಷ್ಟೋ ಬಾರಿ ಮುಖಕ್ಕೆ ಹೊಡೆದ ಹಾಗೇ ಹೇಳಿದ್ದೀನಿ. ಆದರೂ ಅರ್ಥ ಮಾಡಿಕೊಳ್ಳುವುದಿಲ್ಲ ಅಂದರೆ ಏನು ಮಾಡೋಣ" ಎಂದು ಬಿಜೆಪಿಯ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಬೇಸರಿಸಿಕೊಂಡಿದ್ದಾರೆ.
" ಒಂದೇ ಪಕ್ಷದಲ್ಲಿ ಇದ್ದುಕೊಂಡು, ಪಕ್ಷದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಇನ್ನು ಮುಂದಾದರೂ ಅವರಿಗೆ ದೇವರು ಸದ್ಭುದ್ದಿಯನ್ನು ನೀಡಲಿ" ಎಂದು ಈಶ್ವರಪ್ಪ ಹೇಳಿದರು.
ನಳಿನ್ ನೇಮಕದ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ?
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಈಶ್ವರಪ್ಪ, " ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ವರಿಷ್ಠರಿಗೆ ಬಿಟ್ಟ ವಿಚಾರ. ಇವರನ್ನು (ಯತ್ನಾಳ್) ಕೇಳಿ, ನಿರ್ಧರಿಸಬೇಕಿತ್ತಾ" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
" ಪಕ್ಷ ಎಂದ ಮೇಲೆ ಕುಟುಂಬ ಇದ್ದಂತೆ, ಸಣ್ಣಪುಟ್ಟ ಮನಸ್ತಾಪಗಳು ಸಹಜ. ಅದನ್ನೆಲ್ಲಾ ಸರಿಪಡಿಸಿಕೊಂಡು ಹೋಗುತ್ತೇವೆ. ನಮ್ಮ ಸರಕಾರಕ್ಕೆ ಯಾವುದೇ ಅಭದ್ರತೆ ಕಾಡುತ್ತಿಲ್ಲ' ಎಂದು ಈಶ್ವರಪ್ಪ ಭರವಸೆಯ ಮಾತನ್ನಾಡಿದರು.
ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ, ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. "ಕಟೀಲ್ ಅವರು ಬೇರೆ ಜಿಲ್ಲೆಗೆ ಹೋಗಿದ್ದನ್ನು ನಾನು ನೋಡೇ ಇಲ್ಲ. ಅವರು ಈಗ ರಾಜ್ಯಾಧ್ಯಕ್ಷರಾಗಿದ್ದಾರೆ" ಎಂದು ಹೇಳಿದ್ದರು.
ಬಚ್ಚಲುಬಾಯಿ ಶಾಸಕ ಈಶ್ವರಪ್ಪ ಮನೆಯಲ್ಲಿ ನೋಟ್ ಪ್ರಿಂಟ್ ಮೆಷಿನ್ ಇತ್ತು: ಕಾಂಗ್ರೆಸ್ ಘರ್ಜನೆ
"ಅಧ್ಯಕ್ಷರಾಗಿ ಎಲ್ಲಾ ಕಡೆ ಕಿವಿ ತೆರೆದುಕೊಂಡಿರಬೇಕು. ಒಂದು ಕಡೆ ಮಾತ್ರ ಕಿವಿ ತೆರೆದುಕೊಂಡು ಕೇಳಿಸಿಕೊಂಡರೆ ಸಾಲದು. ಎರಡೂ ಕಡೆಯೂ ಕಿವಿ ತೆರೆದುಕೊಂಡಿರಬೇಕು" ಎನ್ನುವ ಸಲಹೆಯನ್ನು ಯತ್ನಾಳ್ ನೀಡಿದ್ದರು. ಈಶ್ವರಪ್ಪ, ಯತ್ನಾಳ್ ಅವರ ಈ ಬಹಿರಂಗ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದು.