ಜನರ ಅಲೆದಾಟಕ್ಕೆ ಬ್ರೇಕ್ ಹಾಕಲಾಗಿದೆ: ಸಚಿವ ಕೃಷ್ಣ ಬೈರೇಗೌಡ
ಬೀದರ್: ಸರ್ಕಾರಿ ಕೆಲಸ ಅಂದ್ರೆ ನಿತ್ಯ ಸರ್ಕಾರಿ ಕಚೇರಿಗೆ ಅಲೆದಾಡುವ ಪರಿಪಾಠ ಇತ್ತು. ಆದರೆ ಈಗ ಅದಕ್ಕೆಲ್ಲಾ ಬ್ರೇಕ್ ಹಾಕುತ್ತಿದ್ದೇವೆ, ಜನಸ್ನೇಹಿ ಆಡಳಿತ ನೀಡುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಜನರ ತಕರಾರು ಅರ್ಜಿಗಳು ಕಳೆದ 2 ತಿಂಗಳಿನಿಂದ ಕಾಲಮಿತಿಯಲ್ಲಿ ವಿಲೇವಾರಿಗೊಳಿಸಲಾಗಿದೆ, ತಾಲೂಕು ಕಚೇರಿಗೆ ಅನಗತ್ಯ ಓಡಾಟಕ್ಕೂ ಈಗ ಬ್ರೇಕ್ ಬಿದ್ದಿದೆ. ಕಂದಾಯ ಇಲಾಖೆ ಸೇವೆ ಹೀಗೆ ಇರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
2 ತಿಂಗಳಿಂದ ನಿರಂತರ ಬೆಳಗಾವಿ, ಗುಲಬುರ್ಗಾ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗಿತ್ತು. ಬಾಕಿ ಇದ್ದ ಸಾವಿರಾರು ತಕರಾರು ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು, ಜನಸ್ನೇಹಿ ಆಡಳಿತ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಸಚಿವ ಕೃಷ್ಣ ಬೈರೇಗೌಡ. ಇದರ ಮುಂದುವರಿದ ಭಾಗವಾಗಿ ಇಂದಿನಿಂದ ಜಿಲ್ಲಾವಾರು ಪ್ರವಾಸ ಆರಂಭಿಸಿದ್ದಾರೆ.

ಹೊಸ ಸರ್ಕಾರದ ಮೇಲೆ ನಿರೀಕ್ಷೆ
ಬೀದರ್ನಲ್ಲಿ ಇಂದು ನಡೆದ ಕಂದಾಯ ಇಲಾಖೆ ಮೊದಲ ಜಿಲ್ಲ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು, ಜನ ಹೊಸ ಸರ್ಕಾರದ ಮೇಲೆ ಸಾಕಷ್ಟು ಭರವಸೆ & ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ಭರವಸೆಗಳಿಗೆ ನೀರೆರೆಯುವ ಸಲುವಾಗಿ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಕಳೆದ 2 ತಿಂಗಳಿಂದ ತತ್ವರಿತಗೊಳಿಸಲಾಗಿದೆ. ವಿಳಂಬವಾಗಿದ್ದ ತಕರಾರು ಅರ್ಜಿಗಳನ್ನು ಕಾಲಮಿತಿ ನಿಗದಿ ಮಾಡಿ ಜನಗಳು ತಾಲೂಕು ಕಚೇರಿಗಳಿಗೆ ದಿನನಿತ್ಯ ಅಲೆಯುವುದನ್ನು ಕಡಿಮೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆಗೆ ಚಿಂತನೆಯೂ ನಡೆಯುತ್ತಿದ್ದು, ಬೀದರ್ ಜಿಲ್ಲೆಯಲ್ಲೂ ಸಹ ಅಧಿಕಾರಿಗಳು ಜನಪರ ಸೇವೆ ನೀಡುವ ಸಂಕಲ್ಪ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.
ಹಕ್ಕು ಬದಲಾವಣೆ ವಿಳಂಬಕ್ಕೂ ತಡೆ
ಹಾಗೇ ಇನ್ನೊಂದು ಕಡೆ ಹಕ್ಕು ಬದಲಾವಣೆ ಪ್ರಕರಣಗಳಲ್ಲಿ ಉಂಟಾಗುತ್ತಿದ್ದ ಅನೇಕ ರೀತಿ ವಿಳಂಬಗಳನ್ನು ಗಂಭೀರವಾಗಿ ಪರಿಗಣಿಸಿ ವಿಲೇವಾರಿ ತ್ವರಿತಗೊಳಿಸಲಾಗಿದೆ. ಸಮಸ್ಯಾತ್ಮಕ ಹಕ್ಕು ಬದಲಾವಣೆ ತಕರಾರು ಪ್ರಕರಣಗಳ ವಿಲೆಯನ್ನು ಜೂನ್ ತಿಂಗಳಿನಲ್ಲಿ ಸರಾಸರಿ 27 ದಿನ ಇದ್ದಂತಹದ್ದನ್ನು ಆಗಸ್ಟ್ ತಿಂಗಳಿನಲ್ಲಿ 9 ದಿನಗಳ ಒಳಗೆ ವಿಲೇವಾರಿ ಮಾಡುವ ಸುಧಾರಣಾ ಬದಲಾವಣೆ ತರಲಾಗಿದೆ.

ಸಾಧಾರಣ ಸಮಸ್ಯೆಯುಳ್ಳ ಹಕ್ಕು ಬದಲಾವಣೆ ತಕರಾರು ಪ್ರಕರಣಗಳ ವಿಲೆಗೆ ಜೂನ್ ತಿಂಗಳಲ್ಲಿ ಸರಾಸರಿ 27 ದಿನ ತಗಲುತ್ತಿತ್ತು. ಆದ್ರೆ ಆಗಸ್ಟ್ನಲ್ಲಿ 13 ದಿನದಲ್ಲಿ ವಿಲೇವಾರಿ ಮಾಡಲಾಗಿದೆ. ಸಮಸ್ಯೆ ಇದ್ದಂತಹ ಹಕ್ಕು ಬದಲಾವಣೆ ಪ್ರಕರಣಗಳ ವಿಲೆಗೆ ಜೂನ್ ತಿಂಗಳಲ್ಲಿ ಸರಾಸರಿ 4 ದಿನ ತೆಗೆದುಕೊಂಡಿದ್ದರೆ, ಆಗಸ್ಟ್ ನಲ್ಲಿ ಸರಾಸರಿ 1 ದಿನದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಪ್ರಶಂಸಿಸಿದರು.
ತಕರಾರು ಪ್ರಕರಣಗಳ ಶೀಘ್ರ ಇತ್ಯರ್ಥ
ಬೀದರ್ ಜಿಲ್ಲೆಯಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಪಹಣಿ ತಿದ್ದುಪಡಿ ಪ್ರಕರಣಗಳು 4310 ಬಾಕಿ ಇತ್ತು. ಆದರೆ, ವಿಭಾಗವಾರು ಸಭೆ ನಂತರ ಈ ಪ್ರಕರಣಗಳ ಸಂಖ್ಯೆ 3010ಕ್ಕೆ ಇಳಿಕೆಯಾಗಿದೆ. ಸುಮಾರು 1300 ಪ್ರಕರಣಗಳಲ್ಲಿ ತತ್ವರಿತ ವಿಲೇವಾರಿ ಮಾಡಲಾಗಿದೆ. ಇದೇ ಸಮಯದಲ್ಲಿ ತಹಶೀಲ್ದಾರ್ ನ್ಯಾಯಾಲಯದಲ್ಲೂ 651 ಪ್ರಕರಣಗಳು ಬಾಕಿ ಇದ್ದವು. ಆದರೆ, ಇದೀಗ ಆ ಪ್ರಕರಣಗಳ ಸಂಖ್ಯೆ 488ಕ್ಕೆ ಇಳಿದಿದೆ. ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ 1319 ರಿಂದ 321ಕ್ಕೆ ಇಳಿಸಲಾಗಿದೆ.

ಇ-ಆಡಳಿತಕ್ಕೆ ಸಚಿವರ ಖಡಕ್ ಸೂಚನೆ
ಆಡಳಿತಕ್ಕೆ ವೇಗ ನೀಡುವ ಸಲುವಾಗಿ ಬೀದರ್ ಜಿಲ್ಲೆಯ ಉಪವಿಭಾಗಾಧಿಕಾರಿ (ಎಸಿ) ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಇ-ಆಫೀಸ್ ಅಂದರೆ ಆನ್ಲೈನ್ ಕಡತ ವಿಲೇವಾರಿ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಆಗಸ್ಟ್ 15 ರಿಂದಲೇ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ಕಡತಗಳನ್ನೂ ಆನ್ ಲೈನ್ ಮೂಲಕ ವಿಲೇವಾರಿ ಮಾಡಲಾಗುತ್ತೆ. ಹೀಗಾಗಿ ಸೆಪ್ಟೆಂಬರ್ 1ನೇ ತಾರೀಖಿನ ಒಳಗಾಗಿ ಎಲ್ಲಾ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗ ಕಚೇರಿಗಳಲ್ಲೂ ಆನ್ ಲೈನ್ ಮೂಲಕ ಎಲ್ಲಾ ಕಡತಗಳ ವಿಲೇವಾರಿ ಆಗಬೇಕು. ಆಡಳಿತಕ್ಕೆ ವೇಗ ನೀಡಲು, ಪಾರದರ್ಶಕತೆ ಜವಾಬ್ದಾರಿ ಸುಧಾರಣೆಗೆ ಇ-ಆಡಳಿತ ಸಹಕಾರಿ ಎಂದು ಅವರು ತಿಳಿಸಿದರು.
ಅಲ್ಲದೆ, ಇದೇ ಸಂದರ್ಭದಲ್ಲಿ ಜಿಲ್ಲೆಯ ನೈಸರ್ಗಿಕ ವಿಕೋಪ ಪ್ರಕರಣಗಳಲ್ಲಿ ಪರಿಹಾರ ಕೈಗೊಳ್ಳಲು 21.34 ಕೋಟಿ ಅನುದಾನ ಲಭ್ಯವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬೀದರ್ ಜಿಲ್ಲೆ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.












Click it and Unblock the Notifications