'ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ' ಎಂದ ಕಾಂಗ್ರೆಸ್ನ ಪ್ರಭಾವಿ ನಾಯಕ
ರಾಜ್ಯ ಕಾಂಗ್ರೆಸ್ ಸರ್ಕಾರಲ್ಲಿ ಸಚಿವ ಸ್ಥಾನ ಬದಲಾವಣೆ ಬಗ್ಗೆ ಬಿರುಸಿನ ಚರ್ಚೆಗಳು ಜೋರಾಗಿವೆ. ಮೊದಲೇ ನಡೆದಿದ್ದ ಮಾತುಕತೆ ಮುಂದಿನ ಅವಧಿಗೆ ಪಕ್ಷದಲ್ಲಿ ಸಚಿವರು ಬದಲಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯ ವಲಯದಲ್ಲಿ ಇದಕ್ಕೆ ನವೆಂಬರ್ ಕ್ರಾಂತಿ ಎಂದು ಕರೆಯಲಾಗುತ್ತಿದೆ. ಈಗಿರುವ ಸಚಿವರ ಸ್ಥಾನಗಳು ಕೂಡ ಬದಲಾಗಲಿದ್ದು, ಬೇರೆಯವರಿಗೆ ಅವಕಾಶ ಸಿಗಲಿದೆಯಂತೆ. ಇದರ ನಡುವೆ ಕಾಂಗ್ರೆಸ್ನ ಹಾಲಿ ಹಾಗೂ ಪ್ರಭಾವಿ ನಾಯಕರಾಗಿರುವ ಕೃಷ್ಣಬೈರೇಗೌಡ ಅವರು "ಸಚಿವ ಸ್ಥಾನ ತ್ಯಾಗಕ್ಕೆ ನಾನು ಸಿದ್ಧ" ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಸಾಮಾನ್ಯವಾಗಿ ಸಚಿವ ಸ್ಥಾನ ಕೈತಪ್ಪುತ್ತದೆ ಎಂದಾಗ ನಾಯಕರು ಗಲಿಬಿಲಿಗೊಳ್ಳುತ್ತಾರೆ. ಅಷ್ಟರಮಟ್ಟಿಗೆ ಸಚಿವ ಸ್ಥಾನದ ಮೇಲೆ ಕೆಲವರಿಗೆ ವ್ಯಾವೋಹ ಇದೆ. ಈಗಾಗಲೇ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇದರ ನಡುವೆ ಸಚಿವ ಕೃಷ್ಣಬೈರೇಗೌಡ ಅವರು ಆಡಿರುವ ಮಾತುಗಳು ಅಚ್ಚರಿ ಮೂಡಿಸುವಂತಿವೆ.

'ಈಗ ಮಂತ್ರಿಮಂಡಲದ ಹೊರಗೆ ಇರುವವರಿಗೆ ಅವಕಾಶ ಕೊಡಲೇಬೇಕು ಎಂದು ನಮ್ಮ ಸರ್ಕಾರ ರಚನೆಯಾದಾಗಲೇ ಒಂದು ವಿಷಯ ಮಂಡನೆಯಾಗಿದೆ. ಇದರ ಬಗ್ಗೆ ಆರಂಭದಲ್ಲೇ ಚರ್ಚೆಯಾಗಿದೆ. ಆದರೆ ಇದು ಯಾವಾಗ ಆಗುತ್ತೆ ಅನ್ನೋದು ವರಿಷ್ಠರು ತೀರ್ಮಾನ ಮಾಡ್ತಾರೆ. ನಾವು ಸೂಕ್ತ ಸಮಯದಲ್ಲಿ ಸಚಿವ ಸಂಪುಟದಿಂದ ಹೊರಗಿರುವ ಅರ್ಹರಿಗೆ ಅವಕಾಶ ಕೊಡ್ತೀವಿ ಎಂದು ಸ್ಪಷ್ಟವಾಗಿ ಹೇಳಿದೆ. ಇದಕ್ಕೆ ನಾನೂ ಒಪ್ಪಿದ್ದೇನೆ. ವರಿಷ್ಠರ ಮಾತಿಗೆ ನನ್ನ ಸಹಮತ ಇದೆ' ಎಂದು ಕೃಷ್ಣಬೇರೇಗೌಡ ನೇರವಾಗಿ ಹೇಳಿದ್ದಾರೆ.
'ಸಂಪುಟದಿಂದ ಹೊರಗೆ ಹೋದ್ರೂ ಪರವಾಗಿಲ್ಲ'
'ನನ್ನ ಪ್ರಕಾರ ಹೊರಗಡೆ ಇರುವವರಿಗೆ ಅವಕಾಶ ಸಿಗಬೇಕು. ನಾನೇ ಮಂತ್ರಿಯಾಗಿ ಇರಬೇಕು ಎನ್ನುವ ಮಾತನ್ನು ನಾನಂತೂ ವೈಯಕ್ತಿಕವಾಗಿ ಒಪ್ಪುವುದಿಲ್ಲ. ಬೇರೆಯವರ ಅಭಿಪ್ರಾಯ ಬೇರೆ ಇರಬಹುದು. ಹಿರಿಯರಲ್ಲಿ ಹಾಗೂ ಹೊಸಬರಲ್ಲೂ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ಅವರಿಗೆ ಅವಕಾಶ ಸಿಗಬೇಕು, ಇದೇ ನ್ಯಾಯ. ಇದನ್ನು ಸರ್ಕಾರ ಬಂದ ಆರಂಭದಲ್ಲೇ ಎಲ್ಲರಿಗೂ ಸ್ಪಷ್ಟಪಡಿಸಲಾಗಿದೆ. ಬೇರೆಯವರಿಗೂ ಅವಕಾಶ ಸಿಗಬೇಕು ಅಂತಾ ನಾನು ಪ್ರತಿಪಾದಿಸುತ್ತೇನೆ. ನಾನು ಸಂಪುಟದಿಂದ ಹೊರಗೆ ಹೋದರೂ ಪರವಾಗಿಲ್ಲ, ಬೇರೆಯವರಿಗೆ ಅವಕಾಶ ಸಿಗಬೇಕು' ಎಂದು ಹೇಳಿದ್ದಾರೆ.
'ನನಗೆ ಪಕ್ಷ ಮೂರು ಬಾರಿ ಮಂತ್ರಿ ಮಾಡಿದೆ. ನನಗೆ ಇನ್ನೇನು ಬೇಕು ಹೇಳಿ? ನಾವು ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಪಕ್ಷ ನಮಗೆ ಕೊಟ್ಟಿದೆ. ಹೀಗಾಗಿ ವರಿಷ್ಠರು ಸೂಚನೆ ಕೊಟ್ಟರೆ ಸಚಿವ ಸ್ಥಾನ ತ್ಯಾಗಕ್ಕೆ ರೆಡಿ, ಅದು ತ್ಯಾಗ ಅಲ್ಲ ನಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ' ಎಂದಿದ್ದಾರೆ.
ನವೆಂಬರ್ ಕ್ರಾಂತಿ ಎನ್ನುವ ವಿಪಕ್ಷಗಳ ವ್ಯಂಗ್ಯಕ್ಕೆ ತಿರುಗೇಟು ನೀಡಿರುವ ಕೃಷ್ಣಬೈರೇಗೌಡ, 'ವಿಪಕ್ಷಗಳಿಗೆ ಅಧಿಕಾರದ ಹಪಾಹಪಿ. ಹಾಗಾಗಿ ಅವರಿಗೆ ಅದೇ ಜಪ ಮಾಡುತ್ತಿದ್ದಾರೆ. ಸದಾಶಿವನಿಗೆ ಅದೇ ಧ್ಯಾನ ಎನ್ನುವ ಹಾಗೆ ಬಿಜೆಪಿಯವರಿಗೆ ಅಧಿಕಾರ ಬಿಟ್ಟರೆ ಬೇರೆ ಏನೂ ಅವರ ತಲೆಗೆ ಹೋಗಲ್ಲ. ಅವರಿಗೆ ಅಧಿಕಾರವಿಲ್ಲದೆ ಮೀನು ನೀರಿಲ್ಲದೆ ಒದ್ದಾಡುವ ಹಾಗಾಗಿದೆ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಸ್ವಾತಂತ್ರ್ಯ ಇದೆ. ಮಾಡಲಿ ಬಿಡಿ, ನಾವೆಲ್ಲರೂ ಕಾಲದ ಚಕ್ರದಲ್ಲಿರೋದು, ಯಾವಾಗ ಏನು ಆಗಬೇಕೋ ಆಗುತ್ತೆ ಎಂದಿದ್ದಾರೆ. ಈಗ ನಾವು ಜವಾಬ್ದಾರಿ ಸ್ಥಾನದಲ್ಲಿದ್ದೀವಿ. ಕೆಲಸ ಮಾಡೋದು ನಮ್ಮ ಕರ್ತವ್ಯ. ಕೆಲಸ ಮಾಡೋಣ, ಉಳಿದಿದ್ದು ಸಮಯ ತೀರ್ಮಾನ ಮಾಡುತ್ತೆ' ಎಂದಿದ್ದಾರೆ.












Click it and Unblock the Notifications