85 ಕೋಟಿ ವೆಚ್ಚದಲ್ಲಿ ನಂದಿ ಗಿರಿಧಾಮಕ್ಕೆ ರೂಪ್ ವೇ ನಿರ್ಮಾಣ; ಫೆಬ್ರವರಿಯಲ್ಲಿ ಭೂಮಿ ಪೂಜೆ : ಸುಧಾಕರ್
ಮುಂದಿನ ಐದು ವರ್ಷಗಳು ನಂದಿ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ಬೆಂಗಳೂರು ಮಾದಿರಲ್ಲಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ, ಫೆಬ್ರವರಿ4: ನಂದಿ ಗಿರಿಧಾಮಕ್ಕೆ 85 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಿಸಲು ಟೆಂಡರ್ ಕರೆದಿದ್ದು, ಇದೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಶುಕ್ರವಾರ ನಂದಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ರೋಪ್ ವೇ ನಿರ್ಮಾಣದ ನಂತರ ಈ ಭಾಗದ ಭೂಮಿ ಬೆಲೆ ಗಗನಕ್ಕೆ ಏರಲಿದೆ. ಹಾಗಾಗಿ ರೈತರು ಭೂಮಿ ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.
ಅವ್ಯವಸ್ಥೆಯ ಆಗರವಾದ ಚಿಕ್ಕಬಳ್ಳಾಪುರ ಖಾಸಗಿ ಬಸ್ ನಿಲ್ದಾಣ
ಫೆ.15 ರಂದು ಶಿವರಾತ್ರಿ ಹಬ್ಬದ ದಿನ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯದಲ್ಲಿ ಶಿವೋತ್ಸವ ಆಯೋಜಿಸಲಾಗುವುದು. ಮುಂದಿನ ಐದು ವರ್ಷಗಳು ನಂದಿ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ಬೆಂಗಳೂರು ಮಾದಿರಲ್ಲಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ತಯಾರಿಗೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಭೂಮಿ ಬೆಲೆ ದುಬಾರಿಯಾಗಿರುವ ನಂದಿ ಭಾಗದಲ್ಲಿ 369 ನಿವೇಶನಗಳನ್ನು ಅಭಿವೃದ್ಧಿಪಡಿಸಿ 354 ಮಂದಿ ವಸತಿ ರಹಿತರನ್ನು ಗುರುತಿಸಿ ವಿತರಣೆ ಕ್ರಮಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ವಸತಿ ರಹಿತರು ಇರಲೇಬಾರದು ಎಂಬ ಸಂಕಲ್ಪದೊಂದಿಗೆ 25 ಸಾವಿರ ನಿವೇಶನಗಳನ್ನು ವಿತರಿಸುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ, ಸಮಾನತೆ ಎಂಬುದನ್ನು ವಿರೋಧ ಪಕ್ಷದವರು ಕೇವಲ ಭಾಷಣದಲ್ಲಿ ಮಾತ್ರ ಮಾತನಾಡುತ್ತಾರೆ. ಆದರೆ ನಾವು ಬಸವಣ್ಣನವರ ತತ್ವ ಪಾಲಿಸಿ ಎಲ್ಲರಿಗೂ ಸಮಪಾಲು ನೀಡುತ್ತೇವೆ. ನಗರದ ಒಟ್ಟು 5 ಸಾವಿರ ನಿವೇಶನಗಳಲ್ಲಿ 1500 ಕ್ಕೂ ಹೆಚ್ಚು ಅಲ್ಪಸಂಖ್ಯಾತರಿಗೆ ನಿವೇಶನ ನೀಡಲಾಗಿದೆ. ಅಲ್ಪಸಂಖ್ಯಾತರು ನಿಜವಾಗಲೂ ಅವರ ಬಗ್ಗೆ ಕಾಳಜಿ ವಹಿಸುವವರು ಯಾರು ಎಂಬುದನ್ನು ಆಲೋಚನೆ ಮಾಡಬೇಕು ಎಂದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಏಕ ಕಾಲಕ್ಕೆ 22 ರಿಂದ 24 ಸಾವಿರ ನಿವೇಶನಗಳನ್ನು ಬಡವರಿಗೆ ಉಚಿತವಾಗಿ ವಿತರಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಇದನ್ನು ರಾಜ್ಯವ್ಯಾಪ್ತಿ ವಿಸ್ತರಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.