ರೈತರನ್ನು ದೂರ ತಳ್ಳಿದ ಸಚಿವ ಎಚ್.ಕೆ. ಪಾಟೀಲ್
ಗದಗ, ನವೆಂಬರ್, 13: ಸಚಿವ ಎಚ್.ಕೆ.ಪಾಟೀಲ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭೇಟಿಗೆ ಬಂದ ರೈತರನ್ನು ತಳ್ಳಿದ ಘಟನೆ ಶನಿವಾರ ಗದಗ ತಾಲ್ಲೂಕಿನ ಸಿಂಗಟಾಲೂರಿನಲ್ಲಿ ನಡೆದಿದೆ.
ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಗದಗ ಜಿಲ್ಲೆಗೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯನವರಿಗೆ ತಮ್ಮ ದೂರುಗಳನ್ನು ತೋಡಿಕೊಳ್ಳಲು ಕೆಲ ರೈತರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕೆಲ ರೈತ ಮುಖಂಡರು ಸಚಿವ ಎಚ್.ಕೆ.ಪಾಟೀಲ ಮತ್ತು ಶಾಸಕರ ವಿರುದ್ಧ ದೂರು ನೀಡಲು ಮುಖ್ಯಮಂತ್ರಿ ಬಳಿ ಬರಲಾರಂಭಿಸಿದರು.
ಆದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪಕ್ಕದಲ್ಲಿಯೇ ನಿಂತಿದ್ದ ಸಚಿವ ಎಚ್.ಕೆ.ಪಾಟೀಲ ಬಂದ ರೈತರನ್ನು ಸಿಎಂ ಭೇಟಿಗೆ ಅವಕಾಶ ನೀಡದೇ ನಮ್ಮನ್ನು ಅವಮಾನವಾಗಿ ತಳ್ಳಿದ್ದಾರೆ ಎಂದು ರೈತ ಮುಖಂಡರು ದೂರಿದ್ದಾರೆ.
ನಂತರ ಸಚಿವ ಎಚ್.ಕೆ.ಪಾಟೀಲ ವಿರುದ್ಧ ರೈತರು ಘೋಷಣೆ ಕೂಗಲಾರಂಭಿಸಿದ್ದರಿಂದ ಮುಖ್ಯಮಂತ್ರಿ ಏನದು ವಿಚಾರ ಎಂದು ಕೇಳಿ ತಿಳಿದುಕೊಂಡಿದ್ದಾರೆನ್ನಲಾಗಿದೆ.
30 ಸಾವಿರ ರೂ. ಗೆ 10ರೂ. ನಾಣ್ಯಗಳ ವಿನಿಮಯ
ಗದಗ ಜಿಲ್ಲೆಯ ನರಗುಂದದ ಗ್ರಾಹಕರೊಬ್ಬರಿಗೆ ಸ್ಥಳೀಯ ಬ್ಯಾಂಕೊಂದನ್ನು ಹಣ ಬದಲಾಯಿಸಲು ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ನೀಡಿದಾಗ 30 ಸಾವಿರ ರೂ. ಗೆ 10 ರೂ. ನಾಣ್ಯಗಳನ್ನು ನೀಡಿದೆ. ಗೋಣಿ ಚೀಲದಲ್ಲಿ 10 ರೂ. ಗಳ ನಾಣ್ಯಗಳನ್ನು ಹೊತ್ತುಕೊಂಡ ಬಂದ ಗ್ರಾಹಕರು ಸದ್ಯ ಹಣ ಎಣಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.