ಸಿದ್ಧಿ ಜನಾಂಗದ ಹಾಡಿಯಲ್ಲಿ ಆಂಜನೇಯ ಹೊಸ ವರ್ಷಾಚರಣೆ
ಬೆಂಗಳೂರು, ಡಿಸೆಂಬರ್ 30 : ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಹಳಿಯಾಳ ತಾಲೂಕಿನ ಸಿದ್ಧಿ ಜನಾಂಗದ ವಾಡಾ ಎಂಬ ಹಾಡಿಯಲ್ಲಿ ಹೊಸವರ್ಷವನ್ನು ಆಚರಣೆ ಮಾಡಲಿದ್ದಾರೆ. ಕಳೆದ ವರ್ಷ ಆಂಜನೇಯ ಅವರು ಸೋಲಿಗರ ಹಾಡಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು.
ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಆಂಜನೇಯ ಅವರು ತಮ್ಮ ಹೊಸ ವರ್ಷಾಚರಣೆ ಬಗ್ಗೆ ಮಾಹಿತಿ ನೀಡಿದರು. 'ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಿದ್ಧಿ ಜನಾಂಗದ ವಾಡಾ ಎಂಬ ಹಾಡಿಯಲ್ಲಿ ಹೊಸ ವರ್ಷ ಆಚರಣೆ ಮಾಡುತ್ತೇನೆ' ಎಂದು ಹೇಳಿದರು. [ಸೋಲಿಗರೊಂದಿಗೆ ಸಚಿವ ಆಂಜನೇಯ ಹೊಸವರ್ಷಾಚರಣೆ]

'ವಾಡಾ ಎಂಬ ಸಿದ್ಧಿ ಜನಾಂಗದ ಹಾಡಿಯಲ್ಲಿರುವ ಸಾವೇರ ಕೈತಾನ್ ಗಾಡಿ ಹಾಗೂ ಕ್ಲೇರಾ ದಂಪತಿ ಮನೆಯಲ್ಲಿ ಡಿಸೆಂಬರ್ 31ಕ್ಕೆ ವಾಸ್ತವ್ಯ ಮಾಡಿ 2016ನೇ ವರ್ಷವನ್ನು ಬರಮಾಡಿಕೊಳ್ಳುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲೆಯ ಸಂಸದರು, ಶಾಸಕರನ್ನು ವಾಸ್ತವ್ಯಕ್ಕೆ ಆಹ್ವಾನಿಸಲಾಗಿದೆ' ಎಂದು ಆಂಜನೇಯ ತಿಳಿಸಿದರು. [ಭಿಕ್ಷುಕರೊಡನೆ ಹೋಳಿಗೆ ಸವಿದ ಸಚಿವ ಆಂಜನೇಯ]
'ಡಿಸೆಂಬರ್ 31ರ ಗುರುವಾರ ಬುಡಕಟ್ಟು ಜನಾಂಗ ಮತ್ತು ಸಿದ್ಧಿ ಜನಾಂಗದವರ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ಆಫ್ರಿಕಾ ಮೂಲದವರಾದ ಇವರು ನೂರಾರು ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದು ಇಲ್ಲಿ ವಾಸವಾಗಿದ್ದಾರೆ. ಸಿದ್ಧಿ ಜನಾಂಗದ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಕೊಡುಗೆಗಳನ್ನು ನೀಡಲು ನಿರ್ಧರಿಸಲಾಗಿದೆ' ಎಂದು ಸಚಿವರು ಹೇಳಿದರು.
ಸಮಸ್ಯೆ ಆಲಿಸುತ್ತೇನೆ : 'ಬುಡಕಟ್ಟು ಜನಾಂಗಗಳು ವಾಸ ಮಾಡುವ ಪ್ರದೇಶಗಳಲ್ಲಿ ವಾಸ್ತವ್ಯ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಹಾಡಿ ವಾಸ್ತವ್ಯ ಮಾಡುತ್ತೇನೆ. ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಿದ್ದೇನೆ' ಎಂದು ಆಂಜನೇಯ ತಿಳಿಸಿದರು.












Click it and Unblock the Notifications