ಹಾಲಿನ ದರ ಏರಿಕೆ : ಸಚಿವರು ನೀಡಿದ ಸಮರ್ಥನೆಗಳು
ಬೆಂಗಳೂರು, ಜನವರಿ 07 : 'ರಾಜ್ಯದ ಬಹುತೇಕ ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಪಶು ಆಹಾರ, ಉತ್ಪಾದನಾ ವೆಚ್ಚದಲ್ಲಿ ಆಗಿರುವ ಏರಿಕೆಯನ್ನು ಪರಿಗಣಿಸಿ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ. ಇದರ ಲಾಭ ರೈತರಿಗೆ ಸಿಗಲಿದೆ' ಎಂದು ಹಾಲಿನ ದರ ಏರಿಕೆಯನ್ನು ಸಚಿವ ಎ.ಮಂಜು ಸಮರ್ಥಿಸಿಕೊಂಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಎ.ಮಂಜು ಅವರು, 'ಹಾಲಿನ ದರ ಏರಿಕೆಗೆ ಸಮರ್ಥನೆ ನೀಡಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ' ಎಂದು ಹೇಳಿದರು. [ಬಿಸಿ-ಬಿಸಿ ಕಾಫಿ, ಟೀ ನಾಲಿಗೆ ಜೊತೆ ಜೇಬು ಸುಡುತ್ತೆ!]

'2013ರ ಬಳಿಕ ನಂದಿನಿ ಹಾಲಿನ ದರದಲ್ಲಿ ಏರಿಕೆ ಮಾಡಿಲಿಲ್ಲ. ಬಹುತೇಕ ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಪ್ರತಿ ಲೀಟರ್ಗೆ 5 ರೂ. ಏರಿಕೆ ಮಾಡುವಂತೆ ಪ್ರಸ್ತಾವನೆ ಬಂದಿತ್ತು. ಆದರೆ, 4 ರೂ. ಹೆಚ್ಚಳ ಮಾಡಿದ್ದೇವೆ. ಪಶು ಆಹಾರ, ಉತ್ಪಾದನಾ ವೆಚ್ಚದಲ್ಲಿ ಆಗಿರುವ ಏರಿಕೆಯನ್ನು ಪರಿಗಣಿಸಿ ಏರಿಕೆ ಮಾಡಲಾಗಿದೆ' ಎಂದು ಸಚಿವರು ವಿವರಣೆ ನೀಡಿದರು. [ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?]
ದರ ಇಳಿಸೋಲ್ಲಾ : 'ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಾಗಿ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಚುನಾವಣೆ ಬಳಿಕ ದರವನ್ನು ಕಡಿಮೆ ಮಾಡುವುದು ಇಲ್ಲ. ಹಾಲಿನ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ' ಎಂದು ಸಚಿವರು ತಿಳಿಸಿದರು.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಲೀಟರ್ಗೆ 4 ರೂ. ಹೆಚ್ಚಿಸಿದೆ. ಜನವರಿ 5ರಿಂದ ರಾಜ್ಯಾದ್ಯಂತ ನೂತನ ದರ ಜಾರಿಗೆ ಬಂದಿದೆ. ಲೀಟರ್ ಮೊಸರಿನ ದರವನ್ನು 2 ರೂ. ಹೆಚ್ಚಿಸಲಾಗಿದೆ. ರಾಜ್ಯಾದ್ಯಂತ ಹಾಲಿನ ದರ ಏರಿಕೆಯನ್ನು ವಿರೋಧಿಸಲಾಗುತ್ತಿದೆ.












Click it and Unblock the Notifications