Milk Price Hike ; ಶೀಘ್ರವೇ ನಂದಿನಿ ಹಾಲಿನ ದರ 2 ರೂ. ಏರಿಕೆ?
ಬೆಂಗಳೂರು, ಏಪ್ರಿಲ್ 06; ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್, ವಿದ್ಯುತ್ ದರಗಳು ಏರಿಕೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಕೇಳಿ ಬಂದಿದೆ. ಎರಡು ದಿನದಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರ ಬೀಳುವ ನಿರೀಕ್ಷೆ ಇದೆ.
ಕಳೆದ ಒಂದು ತಿಂಗಳಿನಿಂದ ಹಾಲಿನ ದರ ಏರಿಕೆ ಮಾಡಲು ಒತ್ತಾಯಿಸಲಾಗುತ್ತಿದೆ. ಈಗ ಹಾಲು ಒಕ್ಕೂಟಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಕೆ ಮಾಡಲಿದ್ದಾರೆ. ಲೀಟರ್ ಹಾಲಿನ ದರವನ್ನು 5 ರೂ. ಏರಿಸಬೇಕು ಎಂಬುದು ಹಾಲು ಒಕ್ಕೂಟಗಳ ಮನವಿಯಾಗಿದೆ.
ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿದ್ದಾರೆ. ಏಪ್ರಿಲ್ 10ರೊಳಗೆ ಅವರನ್ನು ಭೇಟಿಯಾಗಿ, ದರ ಏರಿಕೆ ಪ್ರಸ್ತಾವನೆಯನ್ನು ಒಕ್ಕೂಟಗಳು ಸಲ್ಲಿಕೆ ಮಾಡಲಿವೆ. ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜೊತೆ ಚರ್ಚೆ ನಡೆಸಿದ್ದಾರೆ.

ಹಾಲು ಒಕ್ಕೂಟಗಳು ಪ್ರತಿ ಲೀಟರ್ಗೆ 5 ರೂ. ಏರಿಕೆ ಮಾಡಲು ಮನವಿ ಮಾಡಿವೆ. ಆದರೆ ಮುಖ್ಯಮಂತ್ರಿಗಳ ಮುಂದೆ ಪ್ರತಿ ಲೀಟರ್ಗೆ 2 ರೂ. ಏರಿಕೆ ಮಾಡುವ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುತ್ತದೆ. ಹಾಲು ಒಕ್ಕೂಟಗಳಿಗೆ ಉಂಟಾಗಿರುವ ನಷ್ಟ ಮತ್ತು ನಿರ್ವಹಣಾ ವೆಚ್ಚಗಳು ಅಧಿಕವಾಗಿರುವ ಕಾರಣ ಹಾಲು ದರ ಏರಿಕೆಗೆ ಪ್ರಸ್ತಾವನೆ ತಯಾರು ಮಾಡಲಾಗಿದೆ.
ಕೆಎಂಎಫ್ ಕಳೆದ 4-5 ತಿಂಗಳಿನಿಂದ ಹಾಲಿನ ದರ ಏರಿಕೆಗೆ ಪ್ರಯತ್ನ ನಡೆಸಿದೆ. ಆದರೆ ಸರ್ಕಾರದ ಕಡೆಯಿಂದ ಒಪ್ಪಿಗೆ ಸಿಕ್ಕಿಲ್ಲ. ಈಗ ವಿದ್ಯುತ್ ದರವೂ ಏರಿಕೆಯಾದ ಬಳಿಕ ಹಾಲು ಒಕ್ಕೂಟಗಳ ಮುಖ್ಯಸ್ಥರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಅಧ್ಯಕ್ಷರು ಏಪ್ರಿಲ್ 10ರೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸೋಣ ಎಂದು ಭರವಸೆ ನೀಡಿದ್ದಾರೆ.
ಎಚ್. ಡಿ. ರೇವಣ್ಣ ವಿರೋಧ; ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. "ಈಗ ಹಾಲಿನ ದರ ಏರಿಕೆ ಮಾಡುವುದು ಸೂಕ್ತವಲ್ಲ" ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿವೆ. ಹಾಸನ ಹಾಲು ಒಕ್ಕೂಟದವರು ದರ ಏರಿಕೆ ಪ್ರಸ್ತಾಪ ಮಾಡಿಲ್ಲ. ಬೇರೆ ಯಾವ ಹಾಲು ಒಕ್ಕೂಟದವರು ದರ ಏರಿಕೆಗೆ ಬೇಡಿಕೆ ಇಟ್ಟಿದ್ದಾರೋ ತಿಳಿದಿಲ್ಲ" ಎಂದರು.
"ಬೆಂಗಳೂರಿನಲ್ಲಿ 10 ಲಕ್ಷ ಲೀಟರ್ ಹಾಲನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇವರನ್ನು ಕೇಳುವವರು ಯಾರೂ ಇಲ್ಲ. ಹಾಲು ಮಾರಾಟ ಖಾಸಗಿಯವರ ಹಿಡಿತಕ್ಕೆ ಹೋಗುವುದನ್ನು ತಡೆಯಬೇಕು" ಎಂದು ತಿಳಿಸಿದರು.
"ಈಗ ನಷ್ಟ ಸರಿದೂಗಿಲು ಹಾಲು ದರ ಏರಿಕೆ ಮಾಡುವುದು ಸರಿಯಲ್ಲ. ಗ್ರಾಹಕರು ಮತ್ತು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಬೇಕು" ಎಂದು ರೇವಣ್ಣ ಒತ್ತಾಯಿಸಿದರು.
ಜನವರಿಯಲ್ಲಿ ಬೇಡಿಕೆ; ಈ ವರ್ಷದ ಜನವರಿಯಲ್ಲಿಯೇ ಹಾಲಿನ ದರ ಏರಿಕೆಗೆ ಒತ್ತಾಯ ಕೇಳಿ ಬಂದಿತ್ತು. ಆಗ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಹಾಲು, ವಿದ್ಯುತ್ ದರ ಏರಿಕೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆಡಳಿತದಲ್ಲಿ ದರ ಏರಿಕೆ ಪ್ರಸ್ತಾಪಗಳು ಇದ್ದೇ ಇರುತ್ತವೆ" ಎಂದು ಹೇಳಿದ್ದರು.
2020ರ ಅಂತ್ಯದಲ್ಲಿ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2021ರ ಫೆಬ್ರವರಿಯಲ್ಲಿ ದರಗಳು ಏರಿಕೆಯಾಗಿತ್ತು. ಈಗ ಒಂದು ವರ್ಷದಿಂದ ದರಗಳು ಏರಿಕೆಯಾಗಿಲ್ಲ. ಈ ಅವಧಿಯಲ್ಲಿ ನಿರ್ವಹಣಾ ವೆಚ್ಚ ಅಧಿಕವಾಗಿದೆ. ವಿವಿಧ ಬೆಲೆಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಹಾಲಿನ ದರ ಏರಿಕೆಗೆ ಹಾಲು ಒಕ್ಕೂಟಗಳು ಒತ್ತಾಯಿಸುತ್ತಿವೆ.












Click it and Unblock the Notifications