ಮೇಕೆದಾಟು: ಮತ್ತೊಂದು ಪಾದಯಾತ್ರೆಗೆ ಸಿದ್ಧವಾದ ಕಾಂಗ್ರೆಸ್
ಬೆಳಗಾವಿ, ಡಿ.21: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದೆ.
ಬಳ್ಳಾರಿಯ ಜನಾರ್ದನ ರೆಡ್ಡಿ ಸಹೋದರರ ವಿರುದ್ಧ ಸದನದಲ್ಲಿಯೇ ತೊಡೆ ತಟ್ಟಿದ್ದ ಸಿದ್ದರಾಮಯ್ಯ 2010ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಿಂದ 16 ದಿನಗಳ ಕಾಲ ಬಳ್ಳಾರಿವರೆಗೆ ಪಾದಯಾತ್ರೆಯಲ್ಲಿ ತೆರಳಿದ್ದರು. ರೆಡ್ಡಿ ಸಹೋದರರು ಗೆದ್ದು ಬರುತ್ತಿದ್ದ ಜಿಲ್ಲೆಯಲ್ಲಿಯೇ ಬೃಹತ್ ಸಭೆ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಶಪಥ ಮಾಡಿದರು. ಅದರಂತೆ ನಿರಂತರ ಹೋರಾಟ ನಡೆಸಿದರ ಫಲವಾಗಿ 2013ರಲ್ಲಿ ಕಾಂಗ್ರೆಸ್ ಸಹ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಐದು ವರ್ಷಗಳ ಕಾಲ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು.
ಈಗ ಮತ್ತೆ ರಾಜ್ಯ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯುತ್ತದೆ. ಈಗ ಮೇಕೆದಾಟು ವಿಷಯದೊಂದಿಗೆ ಮತ್ತೊಂದು ಬೃಹತ್ ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿಯಾಗಿ ಬೆಳಗಾವಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಪಾದಯಾತ್ರೆಯ ವಿವರ ನೀಡಿದ್ದಾರೆ.
ಜ.9ರಿಂದ ಮೇಕೆದಾಟು ಪಾದಯಾತ್ರೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 'ಮೇಕೆದಾಟು ಯೋಜನೆಗೆ ನಮ್ಮ ಹೋರಾಟ ಆರಂಭವಾಗಿದೆ. 2022 ರ ಜನವರಿ 9 ಭಾನುವಾರದಿಂದ ಜ. 19 ರವರೆಗೂ ಈ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜ. 9 ರಂದು ಬೆಳಗ್ಗೆ 9.30 ಕ್ಕೆ ಮೇಕೆದಾಟಿನಿಂದ ಪಾದಯಾತ್ರೆ ಆರಂಭವಾಗಲಿದೆ. ಅಲ್ಲಿಂದ ಸುಮಾರು 75 ಕಿ.ಮೀ ದೂರದ ಕೆಂಗೇರಿಯ ನಗರ ಪ್ರದೇಶಕ್ಕೆ ಬರುವುದಕ್ಕೆ ಐದು ದಿನಗಳ ಕಾಲಾವಕಾಶ ಬೇಕು. ಹೀಗಾಗಿ ಐದು ದಿನ ಗ್ರಾಮೀಣ ಭಾಗದಲ್ಲಿ ಹಾಗೂ ಐದು ದಿನ ನಗರ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ' ಎಂದು ಹೇಳಿದರು.
ಈ ಹೋರಾಟದ ಮುಂದಾಳತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದ್ದರೂ ಇದು ಪಕ್ಷಾತೀತ ಹೋರಾಟ. ಎಲ್ಲ ವರ್ಗ, ಸಮುದಾಯಕ್ಕೆ ಸಂಬಂಧಿಸಿದ ಹೋರಾಟ ಇದಾಗಿದೆ. ಕೈಗಾರಿಕೆಯವರಿಂದ ಹಿಡಿದು ರೈತರು, ಕಾರ್ಮಿಕರು, ಕಲಾವಿದರು ಸೇರಿದಂತೆ ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬಹುದು ಎಂದರು.
ಸಮತೋಲಿತ ನೀರಾವರಿ ಯೋಜನೆ
'ಬಹಳ ವರ್ಷಗಳಿಂದ ಮೇಕೆದಾಟು ಯೋಜನೆ ಪ್ರಾರಂಭಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದರು. ನಾನು ನೀರಾವರಿ ಸಚಿವನಾಗಿದ್ದಾಗ ಅದಕ್ಕೆ ಅನುಮತಿ ನೀಡಿದ್ದೆ. ಇದು ಸಮತೋಲಿತ ನೀರಾವರಿ ಯೋಜನೆ. ಇದರಿಂದ ರೈತರು ಹಾಗೂ ಬೆಂಗಳೂರು ಜನರ ಕುಡಿಯುವ ನೀರಿಗೆ ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆಗೂ ನೆರವಾಗುತ್ತದೆ. ನಮ್ಮ ನೀರು, ನಮ್ಮ ಭೂಮಿ, ನಮ್ಮ ಹಣದಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಇದು ನಮ್ಮ ಯೋಜನೆಯಾದರೂ ಲಾಭ ಮಾತ್ರ ಉಭಯ ರಾಜ್ಯಗಳಿಗೂ ಆಗುತ್ತದೆ' ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಐದು ದಶಕಗಳ ಹಿಂದಿನ ಯೋಜನೆ
'1968 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮೇಕೆದಾಟು ಯೋಜನೆಗೆ ಯೋಚನೆ ಮಾಡಿತ್ತು, ಆದರೆ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಯೋಜನೆ ಜಾರಿ ಆಗಿರಲಿಲ್ಲ. 2013 ನಾವು ಅಧಿಕಾರಕ್ಕೆ ಬಂದಮೇಲೆ ಯೋಜನೆಗೆ ಡಿ.ಪಿ.ಆರ್ ಸಿದ್ಧಪಡಿಸಿದ್ದೆವು. ಆಗ ಈ ಯೋಜನೆಯ ಅಂದಾಜು ವೆಚ್ಚ ರೂ. 5912 ಕೋಟಿ, 2018 ರಲ್ಲಿ ಡಿ.ಕೆ ಶಿವಕುಮಾರ್ ಅವರು ಸಚಿವರಾಗಿದ್ದ ವೇಳೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದರು. ಆಗ ರೂ. 9,500 ಕೋಟಿ ಯೋಜನಾ ವೆಚ್ಚ ಇತ್ತು' ಎಂದು ಸಿದ್ದರಾಮಯ್ಯ ಹೇಳಿದರು
ಬೆಂಗಳೂರು ನಗರ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದು. ಸಮುದ್ರ ಪಾಲಾಗಿ ವ್ಯರ್ಥವಾಗುತ್ತಿರುವ 66 ಟಿ.ಎಂ.ಸಿ ನೀರನ್ನು ಮೇಕೆದಾಟು ಜಲಾಶಯದಲ್ಲಿ ಶೇಖರಿಸಿ, ಕುಡಿಯುವ ನೀರಿನ ಹಾಗೂ 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಬಳಕೆ ಮಾಡುವ ಉದ್ದೇಶ ಹೊಂದಿದೆ. ಈಗ ಬೆಂಗಳೂರಿನ 30% ಜನರಿಗೆ ಕಾವೇರಿ ನೀರಿನ ಪೂರೈಕೆ ಆಗುತ್ತಿಲ್ಲ. ಇಡೀ ನಗರಕ್ಕೆ ಕಾವೇರಿ ನೀರು ಸರಬರಾಜು ಆಗಬೇಕೆಂದರೆ ಈ ಯೋಜನೆ ಜಾರಿಯಾಗಲೇಬೇಕು, ಇದರ ಜೊತೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ ಎಂದು ವಿವರಿಸಿದರು.
ತಮಿಳುನಾಡಿಗೂ ಅನುಕೂಲ
ಈ ಯೋಜನೆಯಿಂದ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಹಲವು ಅನುಕೂಲ ಆಗಲಿದೆ. 2018 ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ನಡುವಿನ ಜಲವಿವಾದ ಇತ್ಯರ್ಥಗೊಂಡಿದ್ದು, ಸ್ವಾಭಾವಿಕ ವರ್ಷವೊಂದರಲ್ಲಿ ನಾವು 177.25 ಟಿ.ಎಂ.ಸಿ ನೀರು ಕೊಡಬೇಕು ಎಂದು ತೀರ್ಪು ಬಂದಿದೆ. ಈಗ ವ್ಯಾಜ್ಯ ಬಗೆಹರಿದಿರುವುದರಿಂದ ತಮಿಳುನಾಡಿನವರಿಗೆ ಅವರ ಪಾಲಿನ ನೀರನ್ನು ಪಡೆಯುವ ಹಕ್ಕು ಬಿಟ್ಟರೆ, ಯೋಜನೆಯ ಬಗ್ಗೆ ತಕರಾರು ಮಾಡುವ ಬೇರಾವ ಕಾನೂನಾತ್ಮಕ ಹಕ್ಕು ಅವರಿಗಿಲ್ಲ.
Recommended Video