ವಿದ್ಯುತ್ ಪಡೆದ ವಾರದೊಳಗೆ ಕತ್ತಲಾದ ಕುಗ್ರಾಮ ಮೇದಿನಿ
ಕಾರವಾರ, ಜುಲೈ 26 : ಅನಾದಿ ಕಾಲದಿಂದಲೂ ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯ ಜನರಿಗೆ 3 ತಿಂಗಳ ಹಿಂದೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ವಾರದೊಳಗೆ ಕಡಿತಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ಮೂಲ ಸೌಕರ್ಯ ಇಲ್ಲದ ಕುಗ್ರಾಮ ಮೇದಿನಿಗೆ ಕುಮಟಾ - ಹೊನ್ನಾವರ ಶಾಸಕಿ ಶಾರದಾ ಶೆಟ್ಟಿ 2016ರ ನವೆಂಬರ್ ತಿಂಗಳಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡಿ, 3 ತಿಂಗಳ ಹಿಂದೆ ಉದ್ಘಾಟನೆ ಮಾಡಿದ್ದರು.
2 ಕೋಟಿ ರೂ.ಗಳ ಈ ಯೋಜನೆಗೆ ಕೋಟಿಂಗ್ ವಯರ್ ಬಳಸಿ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿಯ ಸಾಯಿಮನೆಯಿಂದ ಸುಮಾರು 13 ಕಿ.ಮೀ. ವರೆಗೆ 300ಕ್ಕೂ ಹೆಚ್ಚು ಕಂಬಗಳನ್ನು ಅರಣ್ಯ ಪ್ರದೇಶದಲ್ಲಿ ಹಾಕಲಾಗಿತ್ತು. ಸುಮಾರು 5 ತಿಂಗಳು ಕಾಮಗಾರಿ ನಡೆಸಿ ಅನೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.
ಕುಮಟಾದಿಂದ 38 ಕಿ.ಮೀ. ಮತ್ತು ಕಾರವಾರದಿಂದ 114 ಕಿ.ಮೀ. ದೂರದಲ್ಲಿರುವ ಮೇದಿನಿ ಗ್ರಾಮದಲ್ಲಿ 2011ರ ಜನಗಣತಿ ಪ್ರಕಾರ 268 ಜನರಿದ್ದು, 64 ಮನೆಗಳಿವೆ. ಗ್ರಾಮಸ್ಥರಿಗೆ ಸರಿಯಾದ ವಾಹನ ಸಂಪರ್ಕವೂ ಇಲ್ಲ. ಸರಕಾರಿ ಬಸ್ಸು ಹತ್ತಬೇಕಾದರೆ 5 ಕಿ.ಮೀ. ದೂರ ಸಾಗಬೇಕು. ಇನ್ನು ರೈಲು ಹತ್ತಬೇಕಾದರೆ 10 ಕಿ.ಮೀ. ಸಾಗಬೇಕು.
ಇಷ್ಟೆಲ್ಲ ಅನನುಕೂಲತೆಗಳು ಇರುವಾಗ, ಬಹುವರ್ಷಗಳ ನಂತರ ಸಿಕ್ಕಿದ್ದ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.

ಮೊದಲ ಬಾರಿ ಹೆಸ್ಕಾಂ ದುರಸ್ಥಿ ಮಾಡಿತ್ತು
ಒಂದು ವಾರದಲ್ಲಿಯೇ ಕಂಬ ಮುರಿದು ವಿದ್ಯುತ್ ಸಂಪರ್ಕ ಪೂರೈಕೆ ಸ್ಥಗಿತಗೊಂಡಿತ್ತು. ಆಗ ಹೆಸ್ಕಾಂ ಸಿಬ್ಬಂದಿ ಬಂದು ದುರಸ್ಥಿಗೊಳಿಸಿ ಹೋಗಿದ್ದರು. ಆದರೆ ಜಿಲ್ಲೆಯಲ್ಲಿ ಬಿದ್ದ ಭಾರೀ ಗಾಳಿ ಮಳೆಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಕಂಬಗಳು ಮತ್ತೆ ಮುರಿದು ಬಿದ್ದಿವೆ.

ಭಾರೀ ಗಾಳಿ ಮಳೆಗೆ ಮತ್ತೆ ಧರೆಗುರುಳಿದ ಕಂಬಗಳು
ಆದರೆ ಎರಡನೇ ಬಾರಿ ಹೆಸ್ಕಾಂನವರು ದುರಸ್ಥಿ ಕೈಗೊಳ್ಳದಿರುವುದರಿಂದ ಗ್ರಾಮಕ್ಕೆ ವಿದ್ಯುತ್ ಸ್ಥಗಿತಗೊಂಡಿದೆ. ಗ್ರಾಮದಲ್ಲಿ ಮತ್ತೆ ಕಗ್ಗತ್ತಲಲ್ಲಿ ಮುಳುಗಿದೆ. ಬೆಳಕು ಸಿಕ್ಕ ಖುಷಿಯಲ್ಲಿದ್ದ ಗ್ರಾಮಸ್ಥರಿಗೆ ತಿಂಗಳೊಳಗೆ ಕತ್ತಲು ಆವರಿಕೊಂಡಿರುವುದು ಮಾತ್ರ ದುರ್ದೈವದ ಸಂಗತಿ.

ಹೆಸ್ಕಾಂ ಅಧಿಕಾರಿಗಳ ವಾಗ್ದಾನ
"ಈಗ ಮಳೆಗಾಲ ಇರುವುದರಿಂದ ಹಾಗೂ ಮೇದಿನಿ ಭಾಗದಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶ ಇರುವುದರಿಂದ ಪದೇ ಪದೇ ಹೀಗೆ ಉಂಟಾಗುತ್ತಿರುತ್ತಿದೆ. ವಾಹನಗಳ ಸಂಚಾರಕ್ಕೆ ಕೂಡ ಅಡೆ ತಡೆ ಉಂಟಾಗುವುದರಿಂದ ಬಿಸಿಲು ಬೀಳುತ್ತಿದ್ದಂತೆ ದುರಸ್ಥಿಗೆ ಕ್ರಮಕೈಗೊಳ್ಳುತ್ತೇವೆ" ಅಂತ ಹೆಸ್ಕಾಂ ಅಧಿಕಾರಿಗಳು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು.

ಆರೋಗ್ಯ ಹದಗೆಟ್ಟರೆ ಗೋವಿಂದ ಗೋವಿಂದ
ರಸ್ತೆ, ಸಾರಿಗೆ, ಕುಡಿಯುವ ನೀರು ಹೀಗೆ ಎಲ್ಲ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮದ ಜನತೆ ಆರೋಗ್ಯ ಹದಗೆಟ್ಟರೆ ಚಕ್ಕಡಿಯಲ್ಲಿ ರೋಗಿಯನ್ನ 8 ಕಿ.ಮೀ ದೂರದವರೆಗೆ ಕೊಂಡೊಯ್ದು, ಅಲ್ಲಿಂದ ವಾಹನ ಹಿಡಿದು ಸುಮಾರು 38 ಕಿ.ಮೀ. ದೂರದ ಕುಮಟಾ ಪಟ್ಟಣಕ್ಕೆ ಸಾಗಬೇಕು.

ಇತರ ಸವಲತ್ತುಗಳೂ ಸಿಗಲಿ
ಹೀಗೆ ಕರುಣಾಜನಕವಾಗಿ ಜೀವನ ನಡೆಸುತ್ತಿರುವ ಮೇದಿನಿಗೆ ಆದಷ್ಟು ಬೇಗ ವಿದ್ಯುತ್ ಮರಳಿ ಸಿಗುವಂತಾಗಲಿ ಅನ್ನುವುದೇ ಗ್ರಾಮಸ್ಥರ ಆಶಯ. ಈ ಗ್ರಾಮಕ್ಕೆ ಆಸ್ಪತ್ರೆ, ರಸ್ತೆ ಸಂಪರ್ಕದಂಥ ಸೌಲಭ್ಯಗಳೂ ಸಿಗಲಿ. ವಿಧಾನಸಭೆ ಚುನಾವಣೆಯ ನೆಪದಿಂದಲಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸುವಂತಾಗಲಿ.












Click it and Unblock the Notifications