ಶಿಶು ಮರಣ ಪ್ರಮಾಣ ಇಳಿಕೆಗೆ ಕ್ರಮ: ಬೊಮ್ಮಾಯಿ
ಬೆಂಗಳೂರು, ಜುಲೈ 17: ರಾಜ್ಯದಲ್ಲಿ ಸದ್ಯಕ್ಕಿರುವ ಶಿಶು ಮರಣ ಪ್ರಮಾಣ ಶೇ.2 ರಷ್ಟನ್ನು ಮುಂದಿನ ದಿನಗಳಲ್ಲಿ ಒಂದಂಕಿಗೆ ಇಳಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ರೇನ್ಬೋ ಮಕ್ಕಳ ಆಸ್ಪತ್ರೆ ಆಯೋಜಿಸಿದ್ದ 'ಮಕ್ಕಳ ವೈದ್ಯಕೀಯ ಶಾಸ್ತ್ರದಲ್ಲಿನ ವಿಶೇಷ ನವೀಕರಣ' ವಿಚಾರ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ತಾಯಿಯ ಮರಣ ಪ್ರಮಾಣದಲ್ಲಿಯೂ ಇಳಿಕೆಯಾಗಬೇಕು. ರಾಜ್ಯದ 5-6 ಜಿಲ್ಲೆಗಳಲ್ಲಿ ತಾಯಿ ಮರಣ ಪ್ರಮಾಣ ಹೆಚ್ಚಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಿ ಅಲ್ಲಿ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ, ಮಹಿಳಾ ಮತ್ತು ಮಕ್ಕಳ ಆರೋಗ್ಯದ ಮಾನದಂಡಗಳ ಸಹಿತ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.
ಇದರಿಂದ ಆಯಾ 5 ಜಿಲ್ಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಿ ಮರಣ ಪ್ರಮಾಣ ಇಳಿಕೆ ಮಾಡಲಾಗುವುದು. ಅದಕ್ಕಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ದೇಶದ ಸ್ವಸ್ಥ ಭವಿಷ್ಯಕ್ಕಾಗಿ ಮಕ್ಕಳ ತಜ್ಞರು ಈ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ
ರಾಜ್ಯದ ಆಯವ್ಯಯದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ನೀಡುವ ಅನುದಾನ ಪ್ರಮಾಣ ಹೆಚ್ಚಿಸಲಾಗಿದೆ. ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಒತ್ತು ನೀಡಲಾಗಿದೆ. ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ನೀಡುವ ಆಹಾರವನ್ನೇ ಸಾಮಾನ್ಯ ಅಪೌಷ್ಟಿಕತೆಯುಳ್ಳ ಮಕ್ಕಳಿಗೂ ನೀಡಲಾಗುತ್ತಿದೆ. ಅಂಗನವಾಡಿ ಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರ ನೀಡುತ್ತಿರುವುದಲ್ಲದೆ, ಕಾರ್ಮಿಕರ ಮಕ್ಕಳಿಗೂ ವಿಶೇಷ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ.

ಸೂಕ್ಷ್ಮ ಚಿಂತನೆವುಳ್ಳ ಸರ್ಕಾರ
ನಮ್ಮದು ಸೂಕ್ಷ್ಮ ಚಿಂತನೆಗಳು ಉಳ್ಳ ಸರ್ಕಾರ. ಬಡತನ ನಿರ್ಮೂಲನೆಗೆ ಕ್ರಮ ವಹಿಸಲಾಗಿದೆ. ಶಿಕ್ಷಣ, ಮೂಲ ಸೌಕರ್ಯ ಸೇರಿದಂತೆ ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ತಾಂತ್ರಿಕ ಆಧಾರಿತ ರಾಜ್ಯ ನಮ್ಮದು. ಹಳ್ಳಿಗಳಲ್ಲಿ ಕೂಡ ನಮ್ಮ ಯುವಕರು ತಾಂತ್ರಿಕವಾಗಿ ಕೌಶಲ್ಯಯುಳ್ಳವರಾಗಿರಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಬೊಮ್ಮಾಯಿ ವಿವರಿಸಿದರು.

ಹಟ್ಟವ ಮುನ್ನವೇ ಪೌಷ್ಠಿಕ ಆಹಾರ ದೊರೆಯಬೇಕು
ಸದ್ಯ ನಾವೇರಲ್ಲರು ಪರಿಹಾರ ಭಾಗವಾಗಬೇಕಿದೆ. ಆರೋಗ್ಯ ಕುರಿತ ಸವಾಲುಗಳನ್ನು ಎದುರಿಸಬೇಕು. ತಾಯಿ ಗರ್ಭದಿಂದ ಭೂಮಿ ಗರ್ಭದವರೆಗಿನ ಪಯಣದ ಮಧ್ಯೆ ನಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸೋಣ. ಗರ್ಭಧಾರಣೆಯಿಂದ ಹಿಡಿದು ಪೂರ್ಣಪ್ರಮಾಣದ ಮಾನವನ ಸೃಷ್ಟಿ ಅದ್ಭುತವಾದುದ್ದು. ಈ ನಿಟ್ಟಿನಲ್ಲಿ ಮಕ್ಕಳ ತಜ್ಞರ ಪಾತ್ರ ಗರ್ಭಧಾರಣೆಯಿಂದಲೇ ಪ್ರಾರಂಭವಾಗುತ್ತದೆ. ತಾಯಿಯ ಆರೋಗ್ಯ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಗರ್ಭದಲ್ಲಿಯೇ ಮಗುವಿಗೆ ಪೌಷ್ಟಿಕಾಂಶ ದೊರೆಯಬೇಕು ಎಂದರು.

ಸ್ವಸ್ಥ ಸಮಾಜಕ್ಕಾಗಿ ಆರೋಗ್ಯ ಕಾಳಜಿ ಅಗತ್ಯ
ಗರ್ಭಿಣಿಯರ ಆರೋಗ್ಯ ಕಾಪಾಡುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ತಾಯಿಯ ಆರೋಗ್ಯ ಉತ್ತಮವಾಗಿದ್ದರೆ ಮಕ್ಕಳ ಆರೋಗ್ಯವು ಸುಧಾರಿಸುತ್ತದೆ. ದೇಶದಲ್ಲಿ ಅಪೌಷ್ಟಿಕತೆಯಿಂದಾಗಿ ಕುರುಡಾಗಿರುವವರ ಸಂಖ್ಯೆ ಹೆಚ್ಚಿದೆ. ಅಪೌಷ್ಟಿಕತೆಯಿಂದ ವಿವಿಧ ಸಮಸ್ಯೆಗಳ ಜತೆ ಹುಟ್ಟುವ ಮಕ್ಕಳ ಸಂಖ್ಯೆಯೂ ಅಧಿಕವಾಗಿದೆ. ಸ್ವಸ್ಥ ಮತ್ತು ಆರೋಗ್ಯಯು ಸಮಾಜ ನಿರ್ಮಾಣಕ್ಕೆ ಸೂಕ್ತ ಪೌಷ್ಟಿಕ ಆಹಾರ ಒದಗಿಸುವ ಕಡೆಗೆ ಕಾಳಜಿ ವಹಿಸಬೇಕಿದೆ ಎಂದು ತಿಳಿಸಿದರು.
ತಾಯಿಯ ಆರೋಗ್ಯಯುತಳಾದರೆ ಕುಟುಂಬದ ಆರೋಗ್ಯ, ಕುಟುಂಬದ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ. ಮಗುವಿನ ಶಿಕ್ಷಣ ಸೇರಿದಂತೆ ಸಮಗ್ರ ಅಭಿವೃದ್ಧಿಯಾಗಬೇಕಿದೆ. ಅದಕ್ಕಾಗಿ ವೈಜ್ಞಾನಿಕವಾಗಿ ಆಲೋಚಿಸುವ ಸಚಿವರುಗಳು ಹಾಗೂ ಅಧಿಕಾರಗಳ ತಂಡ ಇದೆ. ಹೀಗಾಗಿಯೇ ನಮ್ಮದು ಪ್ರಗತಿಪರ ಚಿಂತನೆಯುಳ್ಳ ಸರ್ಕಾರ ನಮ್ಮದು ಎಂದು ಆರೋಗ್ಯ ಕಾಳಜಿ ಕುರಿತು ಸರ್ಕಾರ ಕಾರ್ಯದ ಬಗ್ಗೆ ಹೇಳಿದರು.












Click it and Unblock the Notifications