ಬೆಂಗಳೂರು- ವಿಜಯಪುರ ರೈಲು ಪ್ರಯಾಣ: ವಿ ಸೋಮಣ್ಣ ಜತೆ ಎಂ ಬಿ ಪಾಟೀಲ ಮಾತುಕತೆ
ಬೆಂಗಳೂರು, ಮೇ 31: ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು ಹತ್ತು ಗಂಟೆಗಳಿಗೆ ಇಳಿಸುವ ಸಂಬಂಧ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ ಸೋಮಣ್ಣ ಅವರೊಂದಿಗೆ ಶನಿವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು, ಈಗ ವಿಜಯಪುರ, ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗಿನಲ್ಲಿ ಎಂಜಿನ್ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಎರಡೂ ಕಡೆ ಬೈಪಾಸ್ ಮೂಲಕ ರೈಲುಗಳು ಸಾಗಿಹೋಗುವ ವ್ಯವಸ್ಥೆ ಆಗಬೇಕು. ಇದರಿಂದ ಗದಗ ಭಾಗದ ಜನತೆಗೂ ಅನುಕೂಲವಾಗುತ್ತದೆ. ಅಕಸ್ಮಾತ್ ಈಗಾಗಲೇ ಓಡುತ್ತಿರುವ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಅಸಾಧ್ಯವಾದರೆ, ಹೊಸ ರೈಲುಗಳ ಸೇವೆಯನ್ನಾದರೂ ಆರಂಭಿಸಬೇಕು ಎಂದು ಕೋರಿದ್ದಾರೆ.

ಕೇಂದ್ರ ಸಚಿವ ಸೋಮಣ್ಣನವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲೇ ತಾವು ದೆಹಲಿಗೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಅವರನ್ನೂ ರೈಲ್ವೆ ಅಧಿಕಾರಿಗಳನ್ನೂ ಕಂಡು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಅವರೊಂದಿಗೂ ಸಚಿವರು ಮಾತನಾಡಿದರು. ಈ ಭಾಗದಲ್ಲಿ ಬಾಕಿ ಇರುವ ರೈಲ್ವೆ ಹಳಿ ವಿದ್ಯುದೀಕರಣ ಜುಲೈ ಹೊತ್ತಿಗೆ ಮುಗಿಯಲಿದೆ ಎಂದು ಶರ್ಮ ಹೇಳಿದ್ದಾರೆ. ಇದಾದ ಮೇಲೆ ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆ ನಡುವಿನ ರೈಲು ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ ಎಂದು ಪಾಟೀಲ ತಿಳಿಸಿದ್ದಾರೆ. ಸಚಿವ ಪಾಟೀಲ ಅವರು ಈ ಸಂಬಂಧ ಈಗಾಗಲೇ ನಿರಂತರವಾಗಿ ಸಭೆಗಳನ್ನು ನಡೆಸುತ್ತಿರುವುದನ್ನು ಇಲ್ಲಿ ನೆನೆಯಬಹುದು.
ಬೆಂಗಳೂರಿನಲ್ಲಿ ₹ 1,100 ಕೋಟಿ ವೆಚ್ಚದಲ್ಲಿ ಇಂಡಿಗೊ ಎಂಆರ್ಒ ಕೇಂದ್ರ
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ- ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್ಒ) ಸೌಲಭ್ಯ ಆರಂಭಿಸಲು ₹1,100 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ.
ಇಂಡಿಗೊ-ದ ಈ ಮಹತ್ವದ ನಿರ್ಧಾರವನ್ನು ಸ್ವಾಗತಿಸಿರುವ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು, ʼಅತ್ಯಾಧುನಿಕ ʼಎಂಆರ್ಒʼ ಸೌಲಭ್ಯಕ್ಕೆ ಇಂಡಿಗೊ ಮಾಡಲಿರುವ ಬಂಡವಾಳ ಹೂಡಿಕೆಯು, ಕರ್ನಾಟಕವನ್ನು ಏಷ್ಯಾದ ʼಎಂಆರ್ಒʼ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ನಮ್ಮ ಮುನ್ನೋಟವನ್ನು ಬಲಪಡಿಸಲಿದೆ. ಈ ಉಪಕ್ರಮವು ರಾಜ್ಯದಲ್ಲಿ ಉನ್ನತ ಗುಣಮಟ್ಟದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿರುವ ಜೊತೆಗೆ ಬೆಂಗಳೂರಿನಲ್ಲಿ ಜಾಗತಿಕ ಸ್ಪರ್ಧಾತ್ಮಕ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆʼ ಎಂದು ಹೇಳಿದ್ದಾರೆ.
ʼಈ ʼಎಂಆರ್ಒʼ ಘಟಕ ನಿರ್ಮಾಣದಿಂದ ಬೆಂಗಳೂರು ಈಗ ʼಏಷ್ಯಾದ ಎಂಆರ್ಒ ಕೇಂದ್ರʼವಾಗಿ ಬೆಳೆಯಲಿದೆ. ಕರ್ನಾಟಕವು ಈಗ ವಿಮಾನಯಾನ ಮೂಲಸೌಲಭ್ಯ ಕ್ಷೇತ್ರದಲ್ಲಿ ಪ್ರಾದೇಶಿಕ ನಾಯಕತ್ವಕ್ಕೆ ಭಾಜನವಾಗಲಿದೆ. ಕೈಗಾರಿಕಾ ಬೆಳವಣಿಗೆ ಮತ್ತು ಗರಿಷ್ಠ ಪರಿಣತಿಯ ಉದ್ಯೋಗ ಸೃಷ್ಟಿಗೆ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಲಿದೆ. ವೈಮಾಂತರಿಕ್ಷ ವಲಯದ ಅಭಿವೃದ್ಧಿ ಮತ್ತು ವಿಮಾನಯಾನ ಕ್ಷೇತ್ರದ ತಯಾರಿಕೆಗೆ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ಬದ್ಧವಾಗಿದೆʼ ಎಂದು ಹೇಳಿದ್ದಾರೆ. 31 ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಇಂಡಿಗೊದ ʼಎಂಆರ್ಒʼ ಸೌಲಭ್ಯವು ಮೂಲಸೌಲಭ್ಯ, ಯಂತ್ರೋಪಕರಣ, ಘಟಕ ನಿರ್ಮಾಣ ಮತ್ತಿತರ ಉದ್ದೇಶಗಳಿಗೆ ₹ 1,100 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ.












Click it and Unblock the Notifications