ಮುಜರಾಯಿ ದೇವಾಲಯದಲ್ಲಿ ಸಾಮೂಹಿಕ ವಿವಾಹ; ಮುಹೂರ್ತ ನಿಗದಿ
ಬೆಂಗಳೂರು, ಅಕ್ಟೋಬರ್ 31 : ಮುಜರಾಯಿ ಇಲಾಖೆಯಿಂದ ಸಾಮೂಹಿಕ ವಿವಾಹವನ್ನು ಆಯೋಜನೆ ಮಾಡಲಾಗುತ್ತದೆ. ವಿವಾಹಕ್ಕೆ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಈ ವರ್ಷ ಒಂದು ಸಾವಿರ ವಿವಾಹ ನಡೆಯುವ ನಿರೀಕ್ಷೆ ಇದೆ.
ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದರು. "ಏಪ್ರಿಲ್ 26 ಮತ್ತು ಮೇ 24ರಂದು ರಾಜ್ಯದ 90 ರಿಂದ 100 ಎ ದರ್ಜೆ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ" ಎಂದರು.
ಮುಜರಾಯಿ ದೇವಾಲಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ ಜೋಡಿಗೆ ವಧುವಿನ ತಾಳಿಗಾಗಿ 40 ಸಾವಿರ, ಧಾರೆ ಸೀರೆ ಖರೀದಿಗೆ 10 ಸಾವಿರ, ವರನಿಗೆ ಪಂಚೆ, ಧೋತಿ ಖರೀದಿಗೆ 5 ಸಾವಿರ ರೂ.ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ.

ಸಾಮೂಹಿಕ ವಿವಾಹಕ್ಕೆ ಜೋಡಿಗಳು ಹೆಸರು ನೋಂದಾವಣಿ ಮಾಡುತ್ತಿದ್ದಂತೆ ಒಂದು ತಿಂಗಳ ಮೊದಲು ವರ ಮತ್ತು ವಧುವಿನ ಬ್ಯಾಂಕ್ ಖಾತೆಗಳಿಗೆ ಜಿಲ್ಲಾಧಿಕಾರಿಗಳು ಸರ್ಕಾರದಿಂದ ನೀಡಲಾಗುವ ಸಹಾಯಧವನ್ನು ಜಮೆ ಮಾಡಲಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿದ 'ಎ' ದರ್ಜೆಯ ದೇವಾಲಯದಲ್ಲಿ ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಒಟ್ಟು 109 'ಎ' ದರ್ಜೆಯ ದೇವಾಲಯಗಳಿವೆ. ಈ ವರ್ಷ 1 ಸಾವಿರ ವಿವಾಹ ನಡೆಯುವ ನಿರೀಕ್ಷೆ ಇದೆ.
"ಹಿಂದೂ ಸಂಪ್ರದಾಯದಂತೆ ವಿವಾಹವಾಗುವವರಿಗೆ ಮಾತ್ರ ಈ ಸಾಮೂಹಿಕ ವಿವಾಹದಲ್ಲಿ ಅವಕಾಶ ನೀಡಲಾಗುತ್ತದೆ. ಇಂತಹ ವಿವಾಹಗಳನ್ನು ಆಯೋಜನೆ ಮಾಡುವುದರಿಂದ ಬಡವರಿಗೆ ಸಹಾಯಕವಾಗಲಿದೆ" ಎಂದು ಸಚಿವರು ಹೇಳಿದರು.












Click it and Unblock the Notifications